Updated By: Priyalachhi
ಬೆಂಗಳೂರು: ಪೆರೋಲ್ ಕೋರಿ ಸಜಾ ಬಂಧಿಗಳು ಸಲ್ಲಿಸುವ ಮನವಿಗಳ ಕುರಿತಾಗಿ ಜೈಲಾಧಿಕಾರಿಗಳೇ ಸೂಕ್ತ ಆದೇಶ ಹೊರಡಿಸಿದರೆ, ನ್ಯಾಯಾಲಯದ ಮೇಲಿನ ಹೊರೆ ಕಡಿಮೆಯಾಗುತ್ತದೆ ಎಂದು ಹೈಕೋರ್ಟ್ ತಿಳಿಸಿದೆ.
ಪೆರೋಲ್ ಮಂಜೂರಾತಿಗೆ ಕೋರಿದ ಸುಮಾರು 60 ಅರ್ಜಿಗಳು ಇಂದು (ಸೋಮವಾರ) ಒಂದೇ ದಿನ ವಿಚಾರಣೆಗೆ ನಿಗದಿಯಾಗಿರುವುದನ್ನು ಕಂಡು ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಮಧ್ಯಾಹ್ನದ ಕಲಾಪದ ವೇಳೆ ನ್ಯಾಯಮೂರ್ತಿಗಳು ಪೆರೋಲ್ ಮಂಜೂರಾತಿ ಕೋರಿದ ಅರ್ಜಿಗಳ ವಿಚಾರಣೆ ಕೈಗೆತ್ತಿಕೊಂಡರು. ಒಂದೂವರೆ ಗಂಟೆ ಸಮಯದಲ್ಲಿ 25ಕ್ಕೂ ಅಧಿಕ ಪೆರೋಲ್ ಅರ್ಜಿಗಳ ವಿಚಾರಣೆ ನಡೆಸಿ ವಿಲೇವಾರಿ ಮಾಡಿದರು. ಸಂಜೆ 4.50 ಸಮಯವಾದರೂ ಪೆರೋಲ್ ಅರ್ಜಿಗಳ ವಿಚಾರಣೆ ಅಂತ್ಯವಾಗಿರಲಿಲ್ಲ. ಈ ಹಂತದಲ್ಲಿ ಇನ್ನೆಷ್ಟು ಅರ್ಜಿಗಳಿವೆ? ಇನ್ನೂ ಮುಗಿದಿಲ್ಲವೇ? ಎಂದು ಸರ್ಕಾರಿ ವಕೀಲರನ್ನು ಕೇಳಿದ ನ್ಯಾಯಮೂರ್ತಿಗಳು, ಬಳಿಕ ವಿಚಾರಣಾ ಪಟ್ಟಿಯಲ್ಲಿನ ಪೆರೋಲ್ ಅರ್ಜಿಗಳ ಸಂಖ್ಯೆ ಗಮನಿಸಿದರು. ಆಗ 60 ಅರ್ಜಿಗಳು ವಿಚಾರಣೆ ನಿಗದಿಯಾಗಿರುವುದು ಗಮನಕ್ಕೆ ಬಂತು.
ಅದಕ್ಕೆ ಸರ್ಕಾರಿ ವಕೀಲರನ್ನು ಉದ್ದೇಶಿಸಿ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, “ಇದೇನ್ರಿ 60 ಅರ್ಜಿಗಳಿವೆ. ಇಷ್ಟೆಲ್ಲಾ ಅರ್ಜಿಗಳನ್ನು ವಿಚಾರಣೆ ನಡೆಸಬೇಕಾದರೆ ಇಡೀ ದಿನದ ಸಮಯಬೇಕಾಗುತ್ತದೆ. ಜೈಲು ಅಧಿಕಾರಿಗಳೇ, ಪೆರೊಲ್ ಕೋರಿದ ಅರ್ಜಿಗಳನ್ನು ಪರಿಗಣಿಸಿ ಕಾನೂನು ಪ್ರಕಾರ ಆದೇಶಿಸಬೇಕು. ಇದರಿಂದ ನ್ಯಾಯಾಲಯಕ್ಕೆ ಬರುವ ಅರ್ಜಿಗಳ ಸಂಖ್ಯೆ ಕಡಿಮೆಯಾಗುತ್ತದೆ. ಇಲ್ಲವಾದರೆ ನ್ಯಾಯಾಲಯದ ಮೇಲಿನ ಹೆಚ್ಚು ಹೊರೆಯಾಗುತ್ತದೆ. ಈ ಬಗ್ಗೆ ಜೈಲು ಅಧಿಕಾರಿಗಳಿಗೆ ಸೂಚನೆ ನೀಡಿ” ಎಂದು ಸರ್ಕಾರಿ ವಕೀಲರಿಗೆ ನಿರ್ದೇಶಿಸಿದರು.
ಕೈದಿ 11 ವರ್ಷ ನಾಪತ್ತೆಯಾಗಿದ್ದಕ್ಕೆ ಪೆರೋಲ್ ನಿರಾಕರಣೆ: ಈ ನಡುವೆ ಪೆರೋಲ್ ಕೋರಿ ಸಜಾಬಂಧಿಯೋರ್ವನ ಪತ್ನಿ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರ ಪರ ವಕೀಲರು ಹಾಜರಾಗಿ, 90 ದಿನಗಳ ಪೆರೋಲ್ ಮಂಜೂರಾತಿಗೆ ಕೋರಿದರು. ಆಗ ನ್ಯಾಯಮೂರ್ತಿಗಳು, ಜೈಲು ಅಧಿಕಾರಿಗಳು ಏಕೆ ಪೆರೋಲ್ ನಿರಾಕರಿಸಿದ್ದಾರೆ ಎಂದು ಪ್ರಶ್ನಿಸಿದರು. ವಕೀಲರು ಉತ್ತರಿಸಿ, ಈ ಹಿಂದೆ 30 ದಿನಗಳ ಕಾಲ ಪೆರೋಲ್ ಮೇಲೆ ಬಿಡುಗಡೆಯಾಗಿದ್ದ ಕೈದಿ 11 ವರ್ಷ ತಲೆಮರೆಸಿಕೊಂಡಿದ್ದರು. ಕಳೆದ ವರ್ಷವಷ್ಟೇ ಪೊಲೀಸರು ಆತನನ್ನು ಪತ್ತೆ ಹಚ್ಚಿ ಜೈಲಿಗೆ ಕಳುಹಿಸಿದ್ದಾರೆ ಎಂದರು. ನ್ಯಾಯಮೂರ್ತಿಗಳು ಪ್ರತಿಕ್ರಿಯಿಸಿ, 30 ದಿನ ಪೆರೋಲ್ ನೀಡಿದ್ದಕ್ಕೆ 11 ವರ್ಷ ಕೈದಿ ತಲೆಮರೆಸಿಕೊಂಡಿದ್ದಾರೆ. ಇದೀಗ ಪೆರೋಲ್ ನೀಡಿದರೆ ಮತ್ತೆ 11 ವರ್ಷ ನಾಪತ್ತೆಯಾಗುತ್ತಾರೆ. ಅದಕ್ಕೆ ಅವಕಾಶ ಕೊಡಲಾಗದು. ಈ ಕೈದಿ ಪೆರೋಲ್ಗೆ ಅರ್ಹನಲ್ಲ ಎಂದು ತಿಳಿಸಿ ಅರ್ಜಿ ವಜಾಗೊಳಿಸಿದರು.



