ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ
ಬೆಂಗಳೂರು: ಸಂಕಷ್ಟದಲ್ಲಿರುವ ಆಟೋ ಚಾಲಕರ ರಕ್ಷಣೆ ವಿಚಾರದಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದ ಸಚಿವ ಕೆ.ಎಚ್. ಮುನಿಯಪ್ಪ ಅವರು, ತಕ್ಷಣವೇ ಆಟೋ ಗ್ಯಾಸ್ ಪೂರೈಕೆ ಸಮಸ್ಯೆ ಪರಿಹರಿಸುವಂತೆ ಶುಕ್ರವಾರ ಆಗ್ರಹಿಸಿದರು.
ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟಿನ ನಂತರ ಆಟೋ ಗ್ಯಾಸ್ ಪೂರೈಕೆ ಸಮಸ್ಯೆಗೆ ಸಂಬಂಧಿಸಿದಂತೆ ಸಚಿವರು ಇಂದು ಹಿರಿಯ ಅಧಿಕಾರಿಗಳು ಮತ್ತು ಸರ್ಕಾರಿ ತೈಲ ಹಾಗೂ ಅನಿಲ ಕಂಪನಿಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು.
ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಚಿವರು, ವಾಣಿಜ್ಯ ಸಿಲಿಂಡರ್ ಪೂರೈಕೆಯಲ್ಲಿ ಸುಧಾರಣೆ ಆಗಿದೆ. ಆದರೆ ಆಟೋ ಗ್ಯಾಸ್ ಪೂರೈಕೆಯಲ್ಲಿ ಯಾವುದೇ ಸುಧಾರಣೆ ಆಗಿಲ್ಲ ಎಂದರು.
ಬೆಂಗಳೂರು ಮತ್ತು ರಾಜ್ಯದ ಇತರ ಹಲವಾರು ಸ್ಥಳಗಳಲ್ಲಿ ಆಟೋ ಎಲ್ಪಿಜಿ ಕೊರತೆಯಿಂದಾಗಿ ಆಟೋ ಸೇವೆಗಳಲ್ಲಿ ಅಡಚಣೆಗಳು ಕಂಡುಬರುತ್ತಿವೆ. ಅನೇಕ ಪ್ರದೇಶಗಳಲ್ಲಿ ಬಂಕ್ ಹೊರಗೆ ಆಟೋಗಳ ಕಿಲೋ ಮೀಟರ್ ಗಟ್ಟಲೇ ಕ್ಯೂ ನಿಂತಿರುವ ದೃಶ್ಯ ಕಂಡುಬಂದಿದ್ದು, ಚಾಲಕರು ಗ್ಯಾಸ್ ಗಾಗಿ ಗಂಟೆಗಟ್ಟಲೆ ಕಾಯುತ್ತಿದ್ದಾರೆ ಎಂದರು.
“ರಾಜ್ಯದಲ್ಲಿರುವ ಸುಮಾರು ಐದು ಲಕ್ಷ ಆಟೋಗಳಲ್ಲಿ ಮೂರು ಲಕ್ಷ ಆಟೋ ಗ್ಯಾಸ್ ಅನ್ನು ಅವಲಂಬಿಸಿವೆ. ಇವುಗಳಲ್ಲಿ 1.6 ಲಕ್ಷ ಬೆಂಗಳೂರಿನಲ್ಲಿದ್ದು, ಅವರು ತೀವ್ರ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಚಾಲಕರ ಜೀವನೋಪಾಯವು ಆಟೋಗಳ ಮೇಲೆ ಅವಲಂಬಿತವಾಗಿರುವುದರಿಂದ ಈ ಸಮಸ್ಯೆಯನ್ನು ಪರಿಹರಿಸಲು ನಾವು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ಪರಿಹಾರವನ್ನು ಕಂಡುಕೊಳ್ಳಬೇಕೆಂದು ನಾನು ಕೇಂದ್ರವನ್ನು ಒತ್ತಾಯಿಸುತ್ತೇನೆ,” ಎಂದು ಅವರು ಹೇಳಿದರು



