ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ
ಬೆಂಗಳೂರು: ಉಪಚುನಾವಣೆ ಮುಗಿದ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆ ಕೂಗು ಕೇಳಿಬರುತ್ತಿದೆ. ಮಂತ್ರಿ ಸ್ಥಾನ ನೀಡಬೇಕೆಂದು ಹಿರಿಯ ಶಾಸಕರು ದೆಹಲಿ ಪರೇಡ್ ನಡೆಸಲು ಮುಂದಾಗಿದ್ದಾರೆ.
ಎ. 17ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಕಾಂಗ್ರೆಸ್ ವರಿಷ್ಠರನ್ನು ಭೇಟಿ ಆಗಲಿದ್ದಾರೆ. ಈ ವೇಳೆ ಸಚಿವ ಸಂಪುಟ ಪುನಾರಚನೆ ಕುರಿತು ಚರ್ಚೆ ನಡೆಯಲಿದೆ ಎನ್ನಲಾಗುತ್ತಿದೆ. ಇದಕ್ಕೂ ಮುನ್ನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಸಚಿವ ಸಂಪುಟದಿಂದ ತೆರವಾಗಲಿರುವ ಸ್ಥಾನಕ್ಕೆ ತಮ್ಮನ್ನು ಪರಿಗಣಿಸಬೇಕೆಂದು ಕೋರಿ ಸುಮಾರು 40 ಮಂದಿ ಹಿರಿಯ ಶಾಸಕರು ದೆಹಲಿ ಪ್ರಯಾಣಕ್ಕೆ ಮುಂದಾಗಿದ್ದಾರೆ.
ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಹಾಗೂ ಅಶೋಕ್ ಪಟ್ಟಣ್ ಅವರ ನೇತೃತ್ವದಲ್ಲಿ ಇನ್ನೆರಡು ದಿನಗಳಲ್ಲಿ ಈ ನಿಯೋಗ ವರಿಷ್ಠರನ್ನು ಭೇಟಿ ಮಾಡಲಿದೆ. ಈ ಕುರಿತು ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಟಿ. ಬಿ. ಜಯಚಂದ್ರ ಅವರು, ಅಧಿವೇಶನ ಸಂದರ್ಭದಲ್ಲಿ ಹಿರಿಯ ಶಾಸಕರು ಸೇರಿ ಸಭೆ ಮಾಡಿ ಚರ್ಚಿಸಲಾಗಿದೆ. ಸರ್ಕಾರ ಬಂದು ಮೂರು ವರ್ಷವಾಗುತ್ತಿದ್ದು, ಇನ್ನುಳಿದ ಎರಡು ವರ್ಷಗಳ ಅವಧಿಗೆ ಹಿರಿಯ ಶಾಸಕರಿಗೆ ಮಂತ್ರಿ ಸ್ಥಾನ ನೀಡಬೇಕು. ಈ ಬಗ್ಗೆ ವರಿಷ್ಠರನ್ನು ಭೇಟಿ ಮಾಡಿ ಕೆಲವು ವಿಚಾರ ಅವರ ಗಮನಕ್ಕೆ ತರಬೇಕು ಎಂಬುದರ ತೀರ್ಮಾನಿಸಲಾಗಿತ್ತು ಎಂದು ತಿಳಿಸಿದರು.
ಉಪ ಚುನಾವಣೆ ಇದ್ದಿದ್ದರಿಂದ ದೆಹಲಿಗೆ ಹೋಗಲು ಆಗಿರಲಿಲ್ಲ. ಸಾಮೂಹಿಕ ನಾಯಕ್ವತದಡಿ ಹೋಗುತ್ತಿದ್ದೇವೆ. ನಾಳೆ ಸುಮಾರು 40 ಮಂದಿ ಶಾಸಕರು ಹೋಗಿ ಭೇಟಿ ಮಾಡಲಾಗುವುದು. ಸರ್ಕಾರಕ್ಕೆ ಮೂರು ವರ್ಷ ಮುಗಿದಿದೆ. 3 ವರ್ಷದಲ್ಲಿ ಯುವ ಶಾಸಕರಿಗೆ ಅವಕಾಶ ಸಿಕ್ಕಿದೆ. ಆಡಳಿತದಲ್ಲಿ ಅನುಭವವಿರುವ ಹಿರಿಯ ಶಾಸಕರನ್ನು ಸಂಪುಟಕ್ಕೆ ಪರಿಗಣಿಸಿ ಎಂಬುದು ನಮ್ಮ ಮುಖ್ಯ ಉದ್ದೇಶವಾಗಿದೆ ಎಂದರು.



