ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ
ದಾವಣಗೆರೆ: ಒಂದು ಚಹಾ ಕುಡಿದರೂ ಋಣ ಇಟ್ಟುಕೊಳ್ಳಬೇಕು. ಅಬ್ದುಲ್ ಜಬ್ಬಾರ್ನನ್ನು ಎಂಎಲ್ಸಿ ಮಾಡಿದ್ದು ನಾವು, ಕಾಂಗ್ರೆಸ್ ಪಕ್ಷದ ಅನ್ನ ತಿಂದ ಮೇಲೆ ಕೆಲಸ ಮಾಡಬೇಕಿತ್ತು ಎಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹರಿಹಾಯ್ದರು.
ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸ್ಥಾನಕ್ಕೆ ಎಂಎಲ್ಸಿ ಅಬ್ದುಲ್ ಜಬ್ಬಾರ್ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯಿಸಿ, ನಾನು ಚುನಾವಣೆ ನಂತರ ರಿಲ್ಯಾಕ್ಸ್ ಮೂಡ್ನಲ್ಲಿದ್ದೆ. ನನಗೆ ಯಾರೂ ಕಾಲ್ ಮಾಡಿಲ್ಲ. ನನಗೆ ಅದರ ಬಗ್ಗೆ ಮಾಹಿತಿ ಇಲ್ಲ ಎಂದರು.
ನಾನು 1994ರಿಂದ ಚುನಾವಣೆ ಮಾಡಿದ್ದೇನೆ. ನನಗೆ ಇದು ಹದಿನಾರನೇ ಚುನಾವಣೆ. ಹಿಂದಿನ ಚುನಾವಣೆಗಳಷ್ಟು ಟೈಟ್ ಆಗಿಲ್ಲ. 2013ರ ಚುನಾವಣೆ ರಿಪೀಟ್ ಆಗುತ್ತದೆ ಎಂಬ ವಿಶ್ವಾಸ ಇದೆ. ಕಾಂಗ್ರೆಸ್ ಪಕ್ಷಕ್ಕೆ ಮತದಾರರು ಇದ್ದಾರೆ. ನಾಯಕರ ನಡುವಿನ ಸಣ್ಣಪುಟ್ಟ ವ್ಯತ್ಯಾಸ ಆಗಿದೆ. ಗೆದ್ದರೆ ಹೆಚ್ಚು ಅಂತರದಲ್ಲಿ ಗೆಲ್ಲುತ್ತೇವೆ, ಇಲ್ಲ ಕಡಿಮೆ ಅಂತರದಲ್ಲಿ ಗೆಲ್ಲುತ್ತೇವೆ ಎನ್ನುವ ವಿಶ್ವಾಸವಿದೆ ಎಂದು ತಿಳಿಸಿದರು.
ಶಾಮನೂರು ಕುಟುಂಬ ಬುದ್ದಿವಂತರನ್ನು ಹತ್ತಿರ ಸೇರಿಸಲ್ಲ, ದಡ್ಡರನ್ನು ತಮ್ಮ ಬಳಿ ಇಟ್ಟುಕೊಳ್ಳುತ್ತಾರೆ ಎಂಬ ಅಬ್ದುಲ್ ಜಬ್ಬಾರ್ ಹೇಳಿಕೆ ವಿಚಾರವಾಗಿ ಮಾತನಾಡಿ, ಅವನು ಬುದ್ದಿವಂತನಂತಾ? ಎಂದು ಪ್ರಶ್ನಿಸಿದರು.



