Updated By: Priyalachhi
ಬೆಂಗಳೂರು : ರಾಜಧಾನಿ ಬೆಂಗಳೂರು ನಗರದ ಲಾಲ್ ಬಾಗ್ನಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಜನವರಿ 15ರಿಂದ ನಡೆಯುವ ಫಲಪುಷ್ಪ ಪ್ರದರ್ಶನಕ್ಕೆ ಭರದ ಸಿದ್ಧತೆಗಳು ಆರಂಭವಾಗಿವೆ. ಪ್ರಸಕ್ತ ಅವಧಿಯಲ್ಲಿ ರಾಷ್ಟ್ರ ಕವಿ ಕುವೆಂಪು ಅವರ ಮಗ ಖ್ಯಾತ ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರ ಜೀವನ ಕುರಿತ ವಿಷಯ ವಸ್ತುವನ್ನಾಧರಿಸಿ ಪ್ರದರ್ಶನ ಹಮ್ಮಿಕೊಳ್ಳುವುದಕ್ಕೆ ರಾಜ್ಯ ತೋಟಗಾರಿಕೆ ಇಲಾಖೆ ನಿರ್ಧರಿಸಿದೆ.
ಪ್ರತಿ ವರ್ಷದಂತೆ ಜನವರಿ 15ರಿಂದ ಪ್ರಾರಂಭವಾಗುವ ಫಲಪುಷ್ಪ ಪ್ರದರ್ಶನಕ್ಕೆ ಈಗಾಗಲೇ ಇಲಾಖೆಯ ಸಚಿವರು ಮತ್ತು ಅಧಿಕಾರಿಗಳ ನೇತೃತ್ವದಲ್ಲಿ ಹಲವು ಸುತ್ತಿನ ಚರ್ಚೆ ನಡೆದಿದ್ದು, ಪ್ರಸಕ್ತ ವರ್ಷದಲ್ಲಿ ತೇಜಸ್ವಿಯವರ ಇಡೀ ಜೀವನ ಮತ್ತು ಅವರು ಸಾಹಿತ್ಯ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ವಿವಿಧ ಜಾತಿಯ ಲಕ್ಷಾಂತರ ಪುಷ್ಪಗಳಿಂದ ಸಾರ್ವಜನಿಕರಿಗೆ ಪ್ರದರ್ಶನಕ್ಕೆ ಇಲಾಖೆ ಮುಂದಾಗಿದೆ.
ತೇಜಸ್ವಿ ಅವರ ಕೃತಿಗಳೊಂದಿಗೆ ಯುವ ಪ್ರೇಕ್ಷಕರು ಮತ್ತು ರಾಜ್ಯದ ಹೊರಗಿನಿಂದ ಬರುವ ಸಂದರ್ಶಕರನ್ನು ಪರಿಚಯಿಸುವುದು ಮತ್ತು ಅವರ ಅಪ್ರತಿಮ ಕಾದಂಬರಿ ‘ಕರ್ವಾಲೋ’ ಪ್ರಕಟವಾದ 45 ವರ್ಷಗಳನ್ನು ಸ್ಮರಿಸುವುದು ಮತ್ತು ತೇಜಸ್ವಿ ಅವರ ಜೀವನ ಮತ್ತು ಸಾಹಿತ್ಯ ಪರಂಪರೆಗೆ ಫಲಪುಷ್ಪಗಳ ಮೂಲಕ ಗೌರವ ಸಲ್ಲಿಸಲು ತೀರ್ಮಾನ ಕೈಗೊಂಡಿರುವುದಾಗಿ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಾಹಿತಿ ತೇಜಸ್ವಿ ಅವರ ಜೀವನ ಕುರಿತಂತೆ ಸಾಹಿತ್ಯ ಕ್ಷೇತ್ರದ ಹಲವು ವಿದ್ವಾಂಸರು, ಬರಹಗಾರರು ಮತ್ತು ತೇಜಸ್ವಿಯವರ ಜೀವನ ಮತ್ತು ಕೆಲಸದ ಬಗ್ಗೆ ನಿಕಟವಾಗಿ ಪರಿಚಿತರಾಗಿರುವ ಇತರರನ್ನು ಈಗಾಗಲೇ ಸಂಪರ್ಕಿಸಲಾಗಿದೆ. ಅವರು ನೀಡಿರುವ ಸಲಹೆ ಮತ್ತು ಮಾಹಿತಿಯನ್ನು ಆಧರಿಸಿ ಪುಷ್ಪಗಳಿಂದ ಅಲಂಕರಿಸಿ ಪ್ರದರ್ಶನಗಳನ್ನು ಮಾಡುವುದಕ್ಕೆ ಸಿದ್ಧತಾ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.



