ಬೆಂಗಳೂರಲ್ಲಿ ಹೆಚ್ಚಿದ ಅಪಘಾತಗಳು

0
58

Updated By: Priyalachhi

ಬೆಂಗಳೂರು: ಬೆಂಗಳೂರು ದೇಶದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ನಗರ. ಲಕ್ಷಾಂತರ ವಾಹನಗಳು ಬೆಂಗಳೂರಲ್ಲಿ ರಸ್ತೆಗಿಳಿಯುತ್ತವೆ. ಹೀಗಾಗಿ ರಸ್ತೆ ಅಪಘಾತಗಳು ಬೆಂಗಳೂರಲ್ಲಿ ಹೆಚ್ಚಾಗುತ್ತಿವೆ. ಅದರಲ್ಲೂ ಪಾದಚಾರಿಗಳು ರಸ್ತೆ ಅವಘಡಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಬಲಿಯಾಗುತ್ತಿದ್ದಾರೆ. ಬೆಂಗಳೂರಿನ ರಸ್ತೆ ಅಪಘಾತಗಳು ಎಷ್ಟು ಮಾರಣಾಂತಿಕ ಎಂಬ ಸಮಗ್ರ ವರದಿ ಇಲ್ಲಿದೆ.

ನಗರದಲ್ಲಿ ನಿತ್ಯ ಸರಾಸರಿ 2,300 ಹೊಸ ವಾಹನಗಳು ರಸ್ತೆಗಿಳಿಯುತ್ತಿವೆ. ಹಾಗಾಗಿ ನಗರದಲ್ಲಿ ವಾಹನಗಳ ಸಂಖ್ಯೆ 1.25 ಕೋಟಿಯ ಗಡಿ ದಾಟಿದೆ. ಈ ಪೈಕಿ ಶೇ.70ರಷ್ಟು ದ್ವಿಚಕ್ರ ವಾಹನಗಳಿವೆ. ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಪ್ರತಿದಿನ ಸಾವಿರಾರು ಪ್ರಕರಣಗಳು ದಾಖಲಾಗುತ್ತಿವೆ. ಬೆಂಗಳೂರಲ್ಲಿ ಸುಮಾರು 26 ಲಕ್ಷಕ್ಕೂ ಅಧಿಕ ಕಾರುಗಳು ಓಡಾಡುತ್ತಿವೆ.

ನಗರದಲ್ಲಿ ಜನಸಂಖ್ಯೆ ಮತ್ತು ವಾಹನಗಳ ನಡುವಿನ ಅನುಪಾತ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದೆ. ಹೀಗಾಗಿ ಸಂಚಾರ ಕಷ್ಟ ಸಾಧ್ಯವಾಗುತ್ತಿದೆ. ಇದರಿಂದ ರಸ್ತೆ ಅಪಘಾತಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಅಪಘಾತಗಳಿಂದ ಮೃತಪಟ್ಟವರ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ಅದರಲ್ಲೂ ಪಾದಚಾರಿಗಳು ಹೆಚ್ಚಿನ ಪ್ರಮಾಣದಲ್ಲಿ ರಸ್ತೆ ಅಪಘಾತಗಳಿಗೆ ಬಲಿಯಾಗುತ್ತಿದ್ದಾರೆ. ಅಪಘಾತ ನಿಯಂತ್ರಿಸಲು ಹಲವು ಕ್ರಮಗಳನ್ನು ಕೈಗೊಂಡರೂ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗುತ್ತಲೇ ಇವೆ. ಅತಿ ವೇಗದ ಸಂಚಾರದಿಂದಲೇ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ.

4 ವರ್ಷದಲ್ಲಿ ನಡೆದ ಅಪಘಾತ, ಸಾವು ಏನಿದೆ?: ಬೆಂಗಳೂರಲ್ಲಿ 2025ರಲ್ಲಿ ಅಕ್ಟೋಬರ್ ತನಕ 3,985 ರಸ್ತೆ ಅವಘಡಗಳು ನಡೆದಿವೆ. ಈ ಪೈಕಿ 715 ಮಂದಿ ಸಾವಿಗೀಡಾಗಿದ್ದರೆ, 2,087 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅದೇ 2024 ರಲ್ಲಿ 4,769 ರಸ್ತೆ ಅಪಘಾತಗಳು ನಡೆದಿವೆ. ಈ ಪೈಕಿ 894 ಮಂದಿ ಸಾವಿಗೀಡಾಗಿದ್ದು, 2,841 ಮಂದಿ ತೀವ್ರವಾಗಿ ಗಾಯಗೊಂಡಿದ್ದರು. 2023ರಲ್ಲಿ 4,974 ಅಪಘಾತಗಳಾಗಿ 910 ಮಂದಿ ಸಾವಿಗೀಡಾಗಿದ್ದರು. ಅದೇ 2022ರಲ್ಲಿ ಸಂಭವಿಸಿದ 3,822 ರಸ್ತೆ ಅಪಘಾತಗಳಲ್ಲಿ 772 ಜನರು ಮೃತಪಟ್ಟಿದ್ದರು ಎಂದು ಗೃಹ ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರಲ್ಲಿ ಪಾದಚಾರಿಗಳದ್ದೇ ಸಾವು ಜಾಸ್ತಿ: ಬೆಂಗಳೂರಲ್ಲಿ ನಡೆಯುವ ರಸ್ತೆ ಅಪಘಾತಗಳಲ್ಲಿ ಸಂಭವಿಸುವ ಸಾವಿನಲ್ಲಿ ಪಾದಚಾರಿಗಳ ಸಾವೇ ಹೆಚ್ಚಾಗಿದೆ. 2024ರಲ್ಲಿ ಸಂಭವಿಸಿದ ರಸ್ತೆ ಅಫಘಾತಗಳಲ್ಲಿ ಮೃತರಾದ ಒಟ್ಟು 894 ಮಂದಿ ಪೈಕಿ 246 ಮಂದಿ ಪಾದಚಾರಿಗಳಾಗಿದ್ದಾರೆ. ಅಂದರೆ ಒಟ್ಟು ಮೃತರ ಪೈಕಿ 27.50% ಪಾದಚಾರಿಗಳಾಗಿದ್ದಾರೆ. ಇನ್ಕು 2025ರಲ್ಲಿ ಅಕ್ಟೋಬರ್ ವರೆಗೆ ನಡೆದ ರಸ್ತೆ ಅವಘಡಗಳಲ್ಲಿ ಮೃತರಾದ 715 ಮಂದಿ ಪೈಕಿ 203 ಮಂದಿ ಪಾದಚಾರಿಗಳಾಗಿದ್ದಾರೆ.‌ ಅಂದರೆ ಒಟ್ಟು ಮೃತರ ಪೈಕಿ 28% ಪಾದಚಾರಿಗಳಾಗಿದ್ದಾರೆ ಎಂದು ಗೃಹ ಇಲಾಖೆ ಅಂಕಿ – ಅಂಶ ನೀಡಿದೆ.

ದಾಖಲಾಗಿರುವ ಪಾದಚಾರಿ ರಸ್ತೆ ಉಲ್ಲಂಘನೆ ಕೇಸ್ ಎಷ್ಟು?: ಪಾದಚಾರಿಗಳ ಸುಗಮ ಸಂಚಾರದ ದೃಷ್ಟಿಯಿಂದ ಪಾದಚಾರಿ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸುತ್ತಾ ಪಾದಚಾರಿ ರಸ್ತೆಯನ್ನು ಅತಿಕ್ರಮಣ ಮಾಡಿಕೊಳ್ಳುವವರ ಸಂಖ್ಯೆಯೂ ಹೆಚ್ಚಿದೆ. ಜೊತೆಗೆ ಪಾದಚಾರಿ ರಸ್ತೆಯಲ್ಲಿ ವಾಹನ ಸಂಚಾರವನ್ನು ಮಾಡುತ್ತಾ ಪಾದಚಾರಿಗಳ ಸುಗಮ ಸಂಚಾರಕ್ಕೆ ಅಡ್ಡಿ ಪಡಿಸುತ್ತಿದ್ದಾರೆ. ಬೆಂಗಳೂರಿನ ಪಾದಚಾರಿಗಳಿಗೆ ಮಾರ್ಗಗಳಲ್ಲಿ ವಾಹನ ನಿಲುಗಡೆ ಹಾಗೂ ವಾಹಾನ ಓಡಾಟ ಮಾಡುವವ ವಿರುದ್ಧ ಮಾಡುತ್ತಿರುವವರ ವಿರುದ್ಧ ಬಿ.ಎನ್‌.ಎಸ್. ಕಾಯ್ದೆ ಹಾಗೂ ಮೋಟಾರು ವಾಹನ ಕಾಯ್ದೆಯಡಿ ವಿಶೇಷ ಕಾರ್ಯಾಚರಣೆಯನ್ನು ಕೈಗೊಂಡು ಪ್ರಕರಣಗಳನ್ನು ದಾಖಲು ಮಾಡಲಾಗುತ್ತಿದೆ.

sambrama prabha editor suresh kt

LEAVE A REPLY

Please enter your comment!
Please enter your name here