Updated By: Priyalachhi
ಬೆಂಗಳೂರು: ಹಿಂದೂ ಧರ್ಮ, ಹಿಂದೂಗಳು, ಹಿಂದೂಗಳ ಆಚರಣೆಗಳು ಅಂದರೆ ನಿಮ್ಮ ಕಾಂಗ್ರೆಸ್ ಸರ್ಕಾರಕ್ಕೆ ಯಾಕಿಷ್ಟು ಅಸಡ್ಡೆ? ಯಾಕಿಷ್ಟು ದ್ವೇಷ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಪ್ರಶ್ನೆ ಮಾಡಿದೆ.
ಬೆಂಗಳೂರು ಕರದ ಉತ್ಸವದ ಅನುದಾನ ಬಿಡುಗಡೆಗೆ ಶೇ.20ರಷ್ಟು ಕಮಿಷನ್ ಕೇಳಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಇದರ ಬೆನ್ನಲ್ಲೇ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಿಡಿಕಾರಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ಕರಗದ ದುಡ್ಡು ಬಿಡುಗಡೆಗೂ ಕಮಿಷನ್, ಸಿಎಂ ಸಿದ್ದರಾಮಯ್ಯ ಅವರೇ,ಹಿಂದೂ ಧರ್ಮ, ಹಿಂದೂಗಳು, ಹಿಂದೂಗಳ ಆಚರಣೆಗಳು ಅಂದರೆ ನಿಮ್ಮ ಕಾಂಗ್ರೆಸ್ ಸರ್ಕಾರಕ್ಕೆ ಯಾಕಿಷ್ಟು ಅಸಡ್ಡೆ? ಯಾಕಿಷ್ಟು ದ್ವೇಷ? ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನ ಐತಿಹಾಸಿಕ ಕರಗ ಉತ್ಸವಕ್ಕೆ ಸರ್ಕಾರ ಬಿಡುಗಡೆ ಮಾಡಬೇಕಾದ ಅನುದಾನದಲ್ಲೂ ಕಮಿಷನ್ ಕೇಳುತ್ತಿದ್ದೀರಲ್ಲ ಸ್ವಾಮಿ, ನಿಮ್ಮ ಸರ್ಕಾರದ ಲಜ್ಜೆಗೇಡಿತನಕ್ಕೆ ಏನನ್ನಬೇಕು? ಎಂದು ಕಿಡಿಕಾರಿದ್ದಾರೆ.
ಧರ್ಮರಾಯ ದೇವಸ್ಥಾನದ ಕರಗ ಮತ್ತು ದೈನಂದಿನ ನಿರ್ವಹಣೆಗೆ ರಾಜ್ಯ ಸರ್ಕಾರ ನೇಮಿಸಿರುವ ಮುಜರಾಯಿ ಇಲಾಖೆಯ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ.
ಧರ್ಮರಾಯ ದೇವಸ್ಥಾನ ನಿರ್ವಹಣಾ ಸಮಿತಿಯ ಮಾಜಿ ಅಧ್ಯಕ್ಷ ಕೆ. ಸತೀಶ್ ಅವರು, ಕಾರ್ಯನಿರ್ವಹಣಾಧಿಕಾರಿ (EO) ನಾಗರಾಜ್ ಅವರು ದೇವಸ್ಥಾನದಿಂದ 122 ಗ್ರಾಂ ತೂಕದ ಚಿನ್ನದ ಹಾರವನ್ನು ಕಳವು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.



