Updated By: Priyalachhi
ಬೆಂಗಳೂರು: ಅಬಕಾರಿ ಇಲಾಖೆಯಲ್ಲಿನ ಭ್ರಷ್ಟಾಚಾರದ ಸದ್ದು ಇಂದು ವಿಧಾನಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಗಿದ್ದು, ವಿಪಕ್ಷಗಳು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ರಾಜೀನಾಮೆಗೆ ಪಟ್ಟು ಹಿಡಿದರು. ತನಿಖಾ ವರದಿ ಬರುವವರೆಗೂ ಸಚಿವ ಆರ್.ಬಿ. ತಿಮ್ಮಾಪುರ ರಾಜೀನಾಮೆ ಕೊಡಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದರು.
ನಿಯಮ 69 ಅಡಿಯಲ್ಲಿ ಚರ್ಚೆ ವೇಳೆ ವಿಷಯ ಪ್ರಸ್ತಾಪಿಸಿದ ವಿಪಕ್ಷ ನಾಯಕ ಆರ್.ಅಶೋಕ್, ಅಬಕಾರಿ ಇಲಾಖೆಯಲ್ಲಿ ಹೊಸ ರೀತಿಯ ಭ್ರಷ್ಟಾಚಾರ ನಡೆಯುತ್ತಿದೆ. ಸಿದ್ದರಾಮಯ್ಯ ಈ ಬಗ್ಗೆ ಚಕಾರ ಎತ್ತದೆ, ಮೌನ ಮೂರ್ತಿ ಆಗಿದ್ದಾರೆ. ಬೇರೆ ರಾಜ್ಯಗಳ ಚುನಾವಣೆಗೆ ಇಲಾಖೆಯಲ್ಲಿ ಹಣ ಸಂಗ್ರಹ ಮಾಡಲಾಗುತ್ತಿದೆ ಆರೋಪ ಇದೆ. ಗಾಂಧೀಜಿಯ ಬಗ್ಗೆ ಮಾತನಾಡಿದರೆ ಸಾಲದು. ಗಾಂಧೀಜಿ ಆದರ್ಶ ಪಾಲನೆ ಮಾಡಬೇಕಲ್ವಾ? ಅಬಕಾರಿ ಇಲಾಖೆಯಲ್ಲಿ ತಿಂಗಳ ಹಣ ಫಿಕ್ಸ್ ಆಗಿದೆ. ಕಾಸಿಗಾಗಿ ಪೋಸ್ಟಿಂಗ್, ಟ್ರ್ಯಾಪ್ ಆದವರಿಗೆ ಆಯಕಟ್ಟಿನ ಹುದ್ದೆ ನೀಡಲಾಗುತ್ತಿದೆ.
ಮದ್ಯ ಮಾರಾಟ ಸಂಘದ ಅಧ್ಯಕ್ಷ ಗುರುಸ್ವಾಮಿ ಸರ್ಕಾರದ ಮೇಲೆ ಆರೋಪ ಮಾಡಿದ್ದಾರೆ. ಗುರುಸ್ವಾಮಿ ಸಿದ್ದರಾಮಯ್ಯ ಅವರ ಕ್ಷೇತ್ರದವರು ಎಂದು ಆರ್ ಅಶೋಕ್ ಪ್ರಸ್ತಾಪದ ವೇಳೆ ಮಧ್ಯ ಪ್ರವೇಶಿಸಿದ ಸಿಎಂ ಸಿದ್ದರಾಮಯ್ಯ, ಅವನು ನಮ್ಮ ಪಂಚಾಯತ್ ಪಕ್ಕದ ಪಂಚಾಯತ್ನವರು. ಅಧ್ಯಕ್ಷ ಕೂಡ ಆಗಿದ್ದರು ಎಂದರು. ಅದಕ್ಕೆ ಆರ್. ಅಶೋಕ್, ಹೌದು ಚೋರ್ ಕಿದರ್ ಹೇ ಅಂದ್ರೆ, ಬಗಲ್ ಮೇ ಹೇ ಹಾಗಾಯ್ತು ಈ ಸರ್ಕಾರಕ್ಕೆ. ಅಬಕಾರಿ ಇಲಾಖೆಯಲ್ಲಿ ಪ್ರತೀ ಹಂತದಲ್ಲೂ ಭ್ರಷ್ಟಾಚಾರ ಇದೆ. ಮದ್ಯದ ಅಂಗಡಿ ಹೆಸರು ಬದಲಾಯಿಸಲೂ ಸಹ ಶೇ 5ರಿಂದ 10ರಷ್ಟು ಹಣ ಕೊಡಬೇಕು ಎಂದು ಆರೋಪಿಸಿದರು.
ಪೆನ್ ಡ್ರೈವ್ ದಾಖಲೆ ಪ್ರದರ್ಶನ: ಅಬಕಾರಿ ಇಲಾಖೆಯಲ್ಲಿ 586 ಮದ್ಯದಂಗಡಿಗಳ ಲೈಸೆನ್ಸ್ ಗೆ ಅರ್ಜಿ ಕರೆದಿದ್ರು. ಇದು ಯಾರಿಗೂ ಗೊತ್ತಾಗಲಿಲ್ಲ, ಆಂಧ್ರದವರೇ ಅರ್ಜಿ ಹಾಕಿದ್ದಾರೆ. ಗುರುಸ್ವಾಮಿ ಅವರೇ ಅಬಕಾರಿ ಅಕ್ರಮ ಬಗ್ಗೆ ಎಳೆ ಎಳೆಯಾಗಿ ಹೇಳಿದ್ದಾರೆ. ಏನಾಗುತ್ತೋ ಆಗಲಿ, ಮದ್ಯದಂಗಡಿಗಳ ಮಾಲೀಕರ ಪರ ಇರುವುದಾಗಿ ಹೇಳಿದ್ದಾರೆ ಎಂದು ಭ್ರಷ್ಟಾಚಾರದ ಆಡಿಯೋ ಇರುವ ಪೆನ್ ಡ್ರೈವ್ ದಾಖಲೆ ಪ್ರದರ್ಶನ ಮಾಡಿದರು. ಅಬಕಾರಿ ಇಲಾಖೆಯಲ್ಲಿ ತಿಂಗಳಿಗೆ 10-15ಸಾವಿರ ರೂ. ಒಂದೊಂದು ಅಂಗಡಿಯಿಂದ ಕಲೆಕ್ಷನ್ ಮಾಡಲಾಗುತ್ತಿದೆ. ಸರಾಸರಿ ಇದೇ ತಿಂಗಳು 21 ಕೋಟಿ ರೂ. ಸಂಗ್ರಹಿಸಿದ್ದು, ಅದರಂತೆ ವರ್ಷಕ್ಕೆ 252ಕೋಟಿ ರೂ. ಆಗುತ್ತದೆ ಎಂದು ಆರೋಪಿಸಿದರು.



