Updated By: Priyalachhi
ದಾವಣಗೆರೆ: ವಯೋಸಹಜ ಅನಾರೋಗ್ಯದಿಂದ ಭಾನುವಾರ ನಿಧನರಾದ ಕಾಂಗ್ರೆಸ್ನ ಹಿರಿಯ ಶಾಸಕ, ರಾಜಕೀಯ ಮುತ್ಸದ್ದಿ, ದಾವಣಗೆರೆ ಧಣಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ಅಂತ್ಯಕ್ರಿಯೆ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಇಲ್ಲಿನ ಮಟ್ಟಿಕಲ್ಲು ಬಳಿಯ ಕಲ್ಲೇಶ್ವರ ಮಿಲ್ನ ಆವರಣದಲ್ಲಿ ಕುಟುಂಬಸ್ಥರು, ಗಣ್ಯರು, ಸಾರ್ವಜನಿಕರು ಹಾಗೂ ಅಭಿಮಾನಿಗಳು ಸಮ್ಮುಖದಲ್ಲಿ ನೆರೆವೇರಿತು. ಕ್ರಿಯಾ ಸಮಾಧಿ ಮಾಡಿ ಐಕ್ಯ ಮಂಟಪದಲ್ಲಿ ವಿಭೂತಿ ಗಟ್ಟಿಗಳೊಂದಿಗೆ ಅವರ ಅಂತ್ಯ ಸಂಸ್ಕಾರ ನೆರವೇರಿಲಾಯಿತು.
ಭಾವುಕರಾದ ಮರಿಮೊಮ್ಮಕ್ಕಳು: ಸಿರಿಗೆರೆ ಶ್ರೀಗಳು, ವಚನಾನಂದ ಸ್ವಾಮೀಜಿ, ಪಂಚಪೀಠದ ಜಗದ್ಗುರುಗಳು ಸೇರಿದಂತೆ ಹಲವು ಮಠಾಧೀಶರ ಸಮ್ಮುಖದಲ್ಲಿ ಈ ಅಂತ್ಯ ಸಂಸ್ಕಾರ ನಡೆಯಿತು. ಶಾಮನೂರು ಶಿವಶಂಕರಪ್ಪ ಅವರ ಹಿರಿಯ ಪುತ್ರ ಬಕ್ಕೇಶ್ ಅವರು ಅಂತ್ಯಸಂಸ್ಕಾರದ ವಿಧಿವಿಧಾನ ಪೂರೈಸಿದರು. ಪೂಜೆ ವೇಳೆ ಸಹೋದರನಿಗೆ ಕಿರಿಯ ಸಹೋದರರಾದ ಎಸ್ ಎಸ್ ಮಲ್ಲಿಕಾರ್ಜುನ್, ಎಸ್ ಎಸ್ ಗಣೇಶ್ ಸಾಥ್ ನೀಡಿದರು. ಮಣ್ಣಲ್ಲಿ ಮಣ್ಣಾದ ಹಿರಿಯ ಜೀವಿ ಕಂಡು ಸೊಸೆಯಂದಿರು, ಪುತ್ರಿಯರು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಭಾವುಕರಾದರು. ತಾತನ ಅಂತ್ಯಸಂಸ್ಕಾರದ ಸ್ಥಳದಲ್ಲೇ ನಿಂತು ವಿಭೂತಿ ಅರ್ಪಿಸಿ ಪೂಜೆ ಮಾಡಿ ಮೊಮ್ಮಕ್ಕಳು ಕಳುಹಿಸಿ ಕೊಟ್ಟರು. ಅರ್ಚಕರು ವಿಧಿವಿಧಾನ ನೆರವೇರಿಸಿದರು. ಕುಣಿಯಲ್ಲಿ ಇಳಿದು ಪುತ್ರರು ಹಾಗೂ ಕುಟುಂಬಸ್ಥರು, ಬಂಧುಮಿತ್ರರು ವಿಧಿವಿಧಾನ ನೆರವೇರಿಸಿದರು. ಇವರೆಲ್ಲರ ಸಮ್ಮುಖದಲ್ಲೇ ಅಂತ್ಯಸಂಸ್ಕಾರ ಮಾಡಲಾಯಿತು.
ಇದಕ್ಕೂ ಮುನ್ನ ರಂಭಾಪುರಿ ಜಗದ್ಗುರುಗಳು ಶಾಮನೂರು ಶಿವಶಂಕರಪ್ಪನವರ ಬಗ್ಗೆ ಹಿತವಚನ ಮಾಡಿದರು. ಈ ವೇಳೆ ಶಾಮನೂರು ಶಿವಶಂಕರಪ್ಪನವರ ಪಾರ್ಥಿವ ಶರೀರಕ್ಕೆ ಚರ್ಚ್ ಫಾಧರ್ಗಳು ಪುಷ್ಪ ಮಾಲೆ ಅರ್ಪಿಸಿದರು. ಧರ್ಮಾತೀತವಾಗಿ ಗೌರವ ಸೂಚಿಸಿದ ಬಳಿಕ ಅಂತಿಮ ದರ್ಶನಕ್ಕೆ ಕಲ್ಪಿಸಲಾಯಿತು. ಅಂತ್ಯಸಂಸ್ಕಾರದ ಸ್ಥಳಕ್ಕೆ ಆಗಮಿಸಿದ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅಂತಿಮ ದರ್ಶನ ಪಡೆದರು. ಪತ್ನಿ ಪಾರ್ವತಮ್ಮ ಸಮಾಧಿ ಪಕ್ಕದಲ್ಲೇ ಶಾಮನೂರು ಶಿವಶಂಕರಪ್ಪ ಸಮಾಧಿ ಮಾಡಿದ್ದು ವಿಶೇಷವಾಗಿತ್ತು.



