Updated By: Priyalachhi
ಪಾಟ್ನಾ (ಬಿಹಾರ): ವಿಧಾನಸಭಾ ಚುನಾವಣೆಗೂ ಮುನ್ನ ಪ್ರತಿಪಕ್ಷ ನಾಯಕ, ಮಹಾಘಟಬಂಧನ್ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್ ಅವರು ದೊಡ್ಡ ದೊಡ್ಡ ಭರವಸೆಗಳನ್ನು ಪ್ರಕಟಿಸುತ್ತಿದ್ದಾರೆ. ಇಂದು (ಮಂಗಳವಾರ) ಚುನಾವಣಾ ಪ್ರಚಾರಕ್ಕೆ ಹೊರಡುವ ಮೊದಲು ಪಾಟ್ನಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ನಮ್ಮ ಸರ್ಕಾರ ರಚನೆಯಾದ ನಂತರ ರೈತರಿಗೆ ಉಚಿತ ವಿದ್ಯುತ್ ನೀಡಲಾಗುವುದು” ಎಂದು ತಿಳಿಸಿದರು.
“ಬಿಹಾರದ ಜನರು ಬದಲಾವಣೆಯ ಮನಸ್ಥಿತಿಯಲ್ಲಿದ್ದಾರೆ. ಚುನಾವಣೆಯ ಉತ್ಸಾಹ ಜನರಲ್ಲಿ ಕಾಣುತ್ತಿದೆ. ಈ ಬಾರಿ ಮಹಘಟಬಂಧನ್ ಸರ್ಕಾರ ರಚನೆ ಮಾಡಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಹಿಳೆಯರಿಗೆ ಸಂಕ್ರಾಂತಿ ಉಡುಗೊರೆ: ಜನವರಿ 14 ರಂದು ಹೊಸ ವರ್ಷ ಎಂದು ಪರಿಗಣಿಸಲಾಗುವ ಮಕರ ಸಂಕ್ರಾಂತಿಯಂದು (ದಹಿ ಚುಡಾ) ‘ಮೈ ಬೆಹೆನ್ ಮಾನ್’ ಯೋಜನೆ ಜಾರಿ ಮಾಡಲಾಗುವುದು. ತಿಂಗಳಿಗೆ 2,500 ರೂಪಾಯಿಯಂತೆ ವರ್ಷಕ್ಕೆ 30 ಸಾವಿರ ರೂಪಾಯಿ ಪ್ರತಿ ಮಹಿಳೆಗೆ ನೀಡಲಾಗುವುದು. ಐದು ವರ್ಷಗಳಲ್ಲಿ ₹1.5 ಲಕ್ಷ ರೂಪಾಯಿ ಅನ್ನು ಮಹಿಳೆಯರ ಖಾತೆಗಳಿಗೆ ಜಮಾ ಮಾಡಲಾಗುವುದು ಎಂದು ಹೇಳಿದರು.
“ನಮ್ಮ ಸರ್ಕಾರವು, ಮಕರ ಸಂಕ್ರಾಂತಿಯಂದು ಮೈ ಬೆಹೆನ್ ಮಾನ್ ಯೋಜನೆಯಡಿ ಒಂದು ವರ್ಷದ ಹಣವನ್ನು (30 ಸಾವಿರ) ಒಟ್ಟಿಗೆ ಮಹಿಳೆಯರ ಖಾತೆಗಳಿಗೆ ವರ್ಗಾಯಿಸುತ್ತೇವೆ” ಎಂದು ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಭರವಸೆ ನೀಡಿದರು.
ಜೀವಿಕಾ ದೀದಿಗಳ ಕಾಯಂ: ಸಮುದಾಯ ಜಾಗೃತಿ ಮೂಡಿಸುವ ಜೀವಿಕಾ ದೀದಿಗಳ ಹುದ್ದೆಯನ್ನು ಕಾಯಂ ಮಾಡುವುದಾಗಿ ಪುನರುಚ್ಚರಿಸಿದರು. ಅವರ ಗೌರವ ಧನವನ್ನು 30 ಸಾವಿರ ರೂಪಾಯಿಗೆ ಹೆಚ್ಚಿಸಲಾಗುವುದು. ಇದಲ್ಲದೇ, ಮಹಿಳೆಯರು ತೆಗೆದುಕೊಂಡ ಸಾಲಗಳ ಮೇಲಿನ ಬಡ್ಡಿದರವನ್ನು ಮನ್ನಾ, ಪ್ರತಿ ವ್ಯಕ್ತಿಗೆ 5 ಲಕ್ಷ ಆರೋಗ್ಯ ವಿಮೆ ಒದಗಿಸುವುದು ಎಂದು ಪ್ರಣಾಳಿಕೆಯಲ್ಲಿನ ಭರವಸೆಗಳನ್ನು ತಿಳಿಸಿದರು.
ಹಳೆಯ ಪಿಂಚಣಿ ಯೋಜನೆ: ಹಳೆಯ ಪಿಂಚಣಿ ಯೋಜನೆ ಮರು ಜಾರಿ ಮಾಡುವಂತೆ ಸರ್ಕಾರಕ್ಕೆ ಪದೇ ಪದೇ ಒತ್ತಾಯಿಸಿದ್ದ ತೇಜಸ್ವಿ ಅವರು, ತಮ್ಮ ನೇತೃತ್ವದ ಸರ್ಕಾರ ರಚನೆಯಾದ ಬಳಿಕ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಅವರು ಹೇಳಿದರು. ಪೊಲೀಸ್ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು, ಶಿಕ್ಷಕರು ಮತ್ತು ಇತರ ಸರ್ಕಾರಿ ನೌಕರರನ್ನು ಅವರ ಜಿಲ್ಲಾ ಕೇಂದ್ರದಿಂದ 70 ಕಿಲೋಮೀಟರ್ಗಳ ಒಳಗೆ ವರ್ಗಾಯಿಸಲಾಗುವುದು ಎಂದರು.
ಭತ್ತ ಮತ್ತು ಗೋಧಿಯ ಮೇಲೆ ಬೋನಸ್: ಭತ್ತ ಮತ್ತು ಗೋಧಿ ಬೆಳೆಗಳನ್ನು ಎಂಎಸ್ಪಿ ದರದಲ್ಲಿ ಮಾರಾಟ ಮಾಡಲು ಸಾಧ್ಯವಾಗದ ರೈತರಿಗೆ ತೇಜಸ್ವಿ ಯಾದವ್ ದೊಡ್ಡ ಭರವಸೆ ನೀಡಿದರು. ಭತ್ತಕ್ಕೆ ಕ್ವಿಂಟಲ್ಗೆ 300 ರೂಪಾಯಿ, ಗೋಧಿಗೆ ಕ್ವಿಂಟಲ್ಗೆ 400 ರೂಪಾಯಿ ಹೆಚ್ಚುವರಿ ದರದಲ್ಲಿ ಖರೀದಿ ಮಾಡಲಾಗುವುದು. ಬಿಹಾರದಲ್ಲಿ ರೈತರಿಗೆ ದೇಶದಲ್ಲಿಯೇ ಅತ್ಯಧಿಕ ಬೆಲೆಗೆ ವಿದ್ಯುತ್ ನೀಡಲಾಗುತ್ತದೆ. ನಮ್ಮ ಸರ್ಕಾರ ರಚನೆಯಾದರೆ, ರೈತರಿಗೆ ಉಚಿತ ವಿದ್ಯುತ್ ನೀಡಲಾಗುತ್ತದೆ ಎಂದರು.



