Updated By: Priyalachhi
ಬೆಂಗಳೂರು: ಇಂದು ಯಾರು ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೋ ಆ ಮಹಾನುಭಾವರೇ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ತೆಗೆದರು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರು ಪ್ರಸ್ತಾಪಿಸದೆ ಅಸಮಾಧಾನ ಹೊರಹಾಕಿದ್ದಾರೆ.
ಜೆಡಿಎಸ್ ಪಕ್ಷಕ್ಕೆ 25 ವರ್ಷ ತುಂಬಿದ ಹಿನ್ನೆಲೆ ಬೆಂಗಳೂರಿನಲ್ಲಿರುವ ಜೆಪಿ ಭವನದ ಪಕ್ಷದ ಕಚೇರಿಯ ಆವರಣದಲ್ಲಿ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ, ಮಾಜಿ ಪ್ರಧಾನಿ ದೇವೇಗೌಡರು, ಹಿಂದಿನ ಮೈತ್ರಿ ಸರ್ಕಾರದ ಪಥನ ವಿಚಾರವನ್ನ ಪ್ರಸ್ತಾಪಿಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು.
ಈಗಿರುವ ಮುಖ್ಯಮಂತ್ರಿಯೇ ಅಂದಿನ ಮೈತ್ರಿ ಸರ್ಕಾರವನ್ನ ಉರುಳಿಸಿದ್ದರು, 18 ಜನರನ್ನ ದೆಹಲಿಗೆ ಕಳುಹಿಸಿದ್ದರು, ಸತ್ಯಕ್ಕೆ ಬೆಲ ಇದೆ, ಸತ್ಯ ಮುಚ್ಚಿಡಲು ಆಗಲ್ಲ, ಯಾರೂ ತಪ್ಪಿಸಿಕೊಳ್ಳೋಕೆ ಆಗಲ್ಲ, ದೈವದ ಅನುಗ್ರಹ ಇರುತ್ತದೆ ಎನ್ನುವ ಮೂಲಕ ದೊಡ್ಡಗೌಡರು ಸಿಎಂ ಸಿದ್ದರಾಮಯ್ಯ ಅವರನ್ನ ಮಾತಿನಲ್ಲೇ ಕುಟುಕಿದರು.
ನಾಳೆ ಮತ್ತೆ ಪುನಃ ಮಾತನಾಡುತ್ತೇನೆ ಎಂದು ಹೇಳುವ ಮೂಲಕ ಕೂತುಹಲ ಮೂಡಿಸಿದ್ರು. ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿ ಆಗಿ ಅನುಭವ ಪಡೆದುಕೊಂಡಿದ್ದಾರೆ. ರಾಜ್ಯದ ಸಮಸ್ಯೆ ಅವರಿಗೆ ಗೊತ್ತಿದೆ, ರಾಜ್ಯದಲ್ಲಿ ಮತ್ತೆ ಜೆಡಿಎಸ್ ತಲೆ ಎತ್ತಿ ನಿಲ್ಲಬೇಕು, ಬಾಕಿ ವಿಚಾರಗಳನ್ನ ನಾಳೆ ಮಾತನಾಡಿ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ. ಹಾಗಾಗಿ ನಾಳೆ ಮಾತನಾಡುತ್ತೇನೆ ಎಂದು ಹೇಳಿದರು.



