Updated By: Priyalachhi
ಕೆನಕೋನಾ(ಗೋವಾ): ಉಡುಪಿಯಲ್ಲಿ ಕಾರ್ಯಕ್ರಮ ಮುಗಿಸಿ ದಕ್ಷಿಣ ಗೋವಾಕ್ಕೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ, ಇಲ್ಲಿನ ಕೆನಕೋನಾದಲ್ಲಿನ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಲಿ ಜೀವೋತ್ತಮ ಮಠದಲ್ಲಿ ಶ್ರೀರಾಮನ 77 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದರು.
ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಕ್ಕೆ ಭೇಟಿ ನೀಡಿದ ಪ್ರಧಾನಿ, ಮಠ ಅಭಿವೃದ್ಧಿಪಡಿಸಿರುವ ರಾಮಾಯಣ ಥೀಮ್ ಪಾರ್ಕ್ ಉದ್ಘಾಟಿಸಿದರು. ಇದರ ಸ್ಮರಣಾರ್ಥವಾಗಿ ವಿಶೇಷ ಅಂಚೆ ಚೀಟಿ ಮತ್ತು ನಾಣ್ಯವನ್ನು ಬಿಡುಗಡೆ ಮಾಡಿದರು.
ಬಳಿಕ ಮಠದ 550ನೇ ವಾರ್ಷಿಕೋತ್ಸವವಾದ ಸಾರ್ಧ ಪಂಚಶತಮಾನೋತ್ಸವದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ನೆರೆದ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಅಯೋಧ್ಯೆಯ ಶ್ರೀ ರಾಮಮಂದಿರದ ಮೇಲೆ ಪವಿತ್ರ ಧ್ವಜಾರೋಹಣ ಮಾಡಿದ ಕೆಲವು ದಿನಗಳ ನಂತರ, ವಿಶ್ವದ ಅತಿ ಎತ್ತರದ ಭಗವಾನ್ ರಾಮನ ಪ್ರತಿಮೆಯನ್ನು ಅನಾವರಣಗೊಳಿಸುವ ಅವಕಾಶ ಸಿಕ್ಕಿದ್ದು ನನಗೆ ಭಾರಿ ಸಂತಸ ನೀಡಿದೆ ಎಂದು ತಿಳಿಸಿದರು.
ಪರ್ತಗಲಿ ಮಠವು ಭಾರತದ ಅತ್ಯಂತ ಹಳೆಯ ಮಠಗಳಲ್ಲಿ ಒಂದು. ಇದು ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕೊಡುಗೆಗಳಿಗೆ ಹೆಸರುವಾಸಿಯಾಗಿದೆ. ಸಾರಸ್ವತ ಸಮುದಾಯದಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ ಎಂದು ಹೇಳಿದರು.
ಇಲ್ಲಿ ಅನಾವರಣಗೊಂಡ 77 ಅಡಿ ಎತ್ತರದ ಕಂಚಿನ ರಾಮನ ಪ್ರತಿಮೆಯನ್ನು ಗುಜರಾತ್ನಲ್ಲಿ ಏಕತಾ ಪ್ರತಿಮೆಯನ್ನು ವಿನ್ಯಾಸಗೊಳಿಸಿದ ಶಿಲ್ಪಿ ರಾಮ್ ಸುತಾರ್ ಅವರು ನಿರ್ಮಿಸಿದ್ದಾರೆ. ಇದು ಶ್ರೀರಾಮನ ವಿಶ್ವದ ಅತಿ ಎತ್ತರದ ಪ್ರತಿಮೆ ಎಂದು ಗೋವಾ ಲೋಕೋಪಯೋಗಿ ಇಲಾಖೆ ಸಚಿವ ದಿಗಂಬರ ಕಾಮತ್ ಮಾಹಿತಿ ನೀಡಿದರು.



