Updated By: Priyalachhi
ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ): “ನರೇಗಾ ಹೆಸರು ಬದಲಾವಣೆ ದುರಂತ ವಿಚಾರ, ಹೆಸರು ಬದಲಾವಣೆಯಿಂದ ಮೋದಿಗೆ ಗೌರವ ಕಡಿಮೆ ಆಯಿತು ಮತ್ತು ಕಳಂಕ ಬಂದಿದೆ” ಎಂದು ಸಚಿವ ಕೆ.ಹೆಚ್. ಮುನಿಯಪ್ಪ ಅವರು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಹೆಸರನ್ನು ಕೇಂದ್ರ ಸರ್ಕಾರ ಬದಲಾವಣೆ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಭಾನುವಾರ ದೊಡ್ಡಬಳ್ಳಾಪುರದ ಸಿದ್ದೇನಾಯಕನಹಳ್ಳಿಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿ ಉದ್ಘಾಟನೆ ಮಾಡಿದ ಅವರು ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು. “ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (MGNREGA) ಹೆಸರನ್ನು ವಿಬಿ ರಾಮ್ ಜಿ ಎಂದು ಕೇಂದ್ರ ಸರ್ಕಾರ ಬದಲಾವಣೆ ಮಾಡಿದೆ. ಅದೊಂದು ದುರಂತ ವಿಚಾರ. ಈ ರಾಷ್ಟ್ರಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ಚೇತನ ಮಹಾತ್ಮ ಗಾಂಧಿ. ರಾಮರು ಯಾರಿಗೂ ಬೇಡ ಅಂತ ಹೇಳಲ್ಲ. ನಾವು ಮನೆಯಲ್ಲಿ ರಾಮನಿಗೂ ಆಂಜನೇಯನಿಗೂ ಪೂಜೆ ಮಾಡುತ್ತೇವೆ. ಯಾರಿಗೆ ಗೊತ್ತಿಲ್ಲ ರಾಮ?. ನೀವು ಎಷ್ಟು ಜನ ಬರೆಯುತ್ತೀರಾ ರಾಮ ಕೋಟಿ, ನಾನು ನಿತ್ಯ ರಾಮ ಕೋಟಿ ಬರೆಯುತ್ತೇನೆ. ನೀವು ವೋಟು ಪಡೆಯಲು ರಾಮನನ್ನು ಉಪಯೋಗಿಸಬೇಡಿ, ಆತ್ಮಶುದ್ಧವಾಗಿ ರಾಮನನ್ನು ಪ್ರೀತಿ ಮಾಡಿ, ಪೂಜೆ ಮಾಡಿ” ಎಂದರು.
“ಮನಮೋಹನ್ ಸಿಂಗ್ ಸರ್ಕಾರದಲ್ಲಿ ನಾನು ಸಚಿವನಿದ್ದಾಗ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಮಾಡಿದ್ದರು. ಸಮಾಜ ಸುಧಾರಣೆ, ಸಮಾನತೆ ಸಾರುವ ಉದ್ದೇಶದಿಂದ ಮಹಾತ್ಮ ಗಾಂಧಿ ಹೆಸರು ಇಟ್ಟಿದ್ದೆವು. ಇದನ್ನು ಇಡೀ ದೇಶ ಒಪ್ಪಿತ್ತು. ಈಗ ಹೆಸರು ಬದಲಾವಣೆಯಿಂದ ಮೋದಿಗೆ ಗೌರವ ಕಡಿಮೆ ಆಯಿತು. ಒಬ್ಬ ರಾಷ್ಟ್ರಪಿತ, ಜಗತ್ ಒಪ್ಪಿರುವ ವ್ಯಕ್ತಿ ಹೆಸರು ಬದಲಾವಣೆ ಮಾಡಿ ನೀವು ಏನು ಕಿರೀಟ ಇಟುಕೊಳ್ಳುತ್ತೀರಿ. ಗಾಂಧೀಜಿ ಹೆಸರು ಬದಲಾಯಿಸಿದ್ದಕ್ಕೆ ನಮಗೆಲ್ಲಾ ನೋವಿದೆ. ನಾವು ಹೋರಾಟ ಮಾಡುತ್ತೇವೆ” ಎಂದು ಎಚ್ಚರಿಕೆ ನೀಡಿದರು.



