Updated By: Priyalachhi
ಮಂಗಳೂರು: ಜೈಲಿನಲ್ಲಿ ತಪಾಸಣೆಗೆ ಟ್ರಯಲ್ ಬೇಸಿಸ್ ಮೇಲೆ ಎಐ ಟೆಕ್ನಾಲಜಿ ಬಳಕೆ ಮಾಡುತ್ತೇವೆ. ಅದು ಎಷ್ಟು ಪರಿಣಾಮಕಾರಿ ಆಗುತ್ತದೆ ಎಂದು ನೋಡಿ ಅಳವಡಿಕೆ ಮಾಡುತ್ತೇವೆ. ಪರಪ್ಪನ ಅಗ್ರಹಾರ, ಮೈಸೂರು ಜೈಲಿನಲ್ಲಿ ಟ್ರಯಲ್ ಆಗಿದೆ. ಮಂಗಳೂರು ಜೈಲಿನಲ್ಲಿಯೂ ಬೇಕಾದ್ರೆ ಟ್ರಯಲ್ ಮಾಡುತ್ತೇವೆ ಎಂದು ಕಾರಾಗೃಹ ವಿಭಾಗದ ನೂತನ ಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮಂಗಳೂರು ಕಾರಾಗೃಹಕ್ಕೆ ಔಪಚಾರಿಕವಾಗಿ ಬಂದು ಭೇಟಿ ಕೊಟ್ಟಿದ್ದೇನೆ. ರಾಜ್ಯದಲ್ಲಿ 54 ಕಾರಾಗೃಹಗಳಿವೆ. ಎಲ್ಲಾ ಕಾರಾಗೃಹವನ್ನು ಸಮಯಕ್ಕೆ ಸರಿಯಾಗಿ ನೋಡಬೇಕು. ಮಂಗಳೂರಿನಲ್ಲಿ ಇರುವುದು ಸೂಕ್ಷ್ಮ ಕಾರಾಗೃಹ. ಈಗಾಗಲೇ ಇಲ್ಲಿ ರೈಡ್ಗಳನ್ನು ಮಾಡಲಾಗಿದೆ. ಒಳಗಡೆ ಗಲಾಟೆ ಮಾಡಿರುವ ಕೈದಿಗಳನ್ನು ಬೇರೆಡೆ ಸ್ಥಳಾಂತರಿಸಲಾಗಿದೆ. ಇನ್ನೊಂದಿಷ್ಟು ಕೈದಿಗಳನ್ನು ಬೇರೆ ಜಾಗಕ್ಕೆ ಕಳುಹಿಸುತ್ತೇವೆ ಎಂದರು.
ಒಳ್ಳೆಯ ನಡತೆ ಹೊಂದಿರುವವರಿಗೆ ಸಹಕಾರ ಕೊಡ್ತೇವೆ. ಅದಕ್ಕಾಗಿ ಅಧಿಕಾರಿಗಳೊಂದಿಗೆ ಚರ್ಚೆ ಮಾಡುತ್ತೇವೆ. ಯಾವ ರೀತಿ ನಿಷೇಧಿತ ವಸ್ತುಗಳು ಬರ್ತಿದೆ ಎಂದು ಚರ್ಚೆ ಮಾಡ್ತೇವೆ. ಜಾಮರ್ ಸಮಸ್ಯೆಯ ಬಗ್ಗೆ ಕಳೆದ 15ವರ್ಷಗಳಿಂದ ಕೇಳುತ್ತಿದ್ದೇನೆ. ಕಾಲಕಾಲಕ್ಕೆ ಬದಲಾವಣೆ ಆಗಿದೆ. ಆದರೆ ಇನ್ನೂ ಕೆಲವು ಸಮಸ್ಯೆಗಳು ಇವೆ. ನಿನ್ನೆ ಒಂದು ಮೊಬೈಲ್ ಫೋನ್ ಮಂಗಳೂರು ಜೈಲಿನಲ್ಲಿ ಸಿಕ್ಕಿದೆ. ಮುಂದೆಯೂ ಪೊಲೀಸರು ಪರಿಶೀಲನೆ ಮಾಡುತ್ತಿರುತ್ತಾರೆ. ಜೈಲನ್ನು ಕಂಟ್ರೋಲ್ ಮಾಡಿದ್ರೆ 60% ಕಾನೂನು ಸುವ್ಯವಸ್ಥೆ ನಿಯಂತ್ರಣಕ್ಕೆ ಬರುತ್ತದೆ. ದೊಡ್ಡ ದೊಡ್ಡ ತರ್ಲೆ ಮಾಡುವವರೇ ಇಲ್ಲಿಗೆ ಬರುವುದು. ಬಳಿಕ ಜಾಮೀನು ಪಡೆದು ಹೊರಗೆ ಬರುತ್ತಾರೆ. ಇಲ್ಲಿಯೇ ನಾವು ಕಂಟ್ರೋಲ್ನಲ್ಲಿ ಇಟ್ಟರೆ ಸರಿಯಾಗುತ್ತದೆ ಎಂದು ಅಲೋಕ್ ಕುಮಾರ್ ಹೇಳಿದರು.
ಕಳೆದ ವಾರ ಮೈಸೂರು ಕಾರಾಗೃಹಕ್ಕೆ ಭೇಟಿ ನೀಡಿದ್ದ ಅಲೋಕ್ ಕುಮಾರ್: ಕಳೆದ ವಾರ ಮೈಸೂರು ಕೇಂದ್ರ ಕಾರಾಗೃಹಕ್ಕೆ ಅಲೋಕ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಮಾತನಾಡಿದ್ದ ಅವರು, ರಾಜ್ಯದ ಜೈಲುಗಳಲ್ಲಿ ಅಕ್ರಮ ಚಟುವಟಿಕೆಗಳನ್ನು ಪತ್ತೆ ಹಚ್ಚಲು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಆಧರಿತ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗುವುದು ಎಂದು ತಿಳಿಸಿದ್ದರು.



