Updated By: Priyalachhi
ಬೆಂಗಳೂರು: ಇಡೀ ರಾಜ್ಯದಲ್ಲಿ ಕಾರ್ಯಾಚರಣೆ ನಡೆಸಿ ಅಕ್ರಮ ಬಾಂಗ್ಲಾದವರನ್ನು ಗುರುತಿಸಿ ಗಡೀಪಾರು ಮಾಡಲು ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು.
ವಿಧಾನಸಭೆಯಲ್ಲಿ ಇಂದು ರಾಜ್ಯದ ಕಾನೂನು ಸುವ್ಯವಸ್ಥೆಯ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಬಾಂಗ್ಲಾದವರು ಇಡೀ ದೇಶದಲ್ಲಿ ಇದ್ದಾರೆ. ಅವರು ಎಲ್ಲಿಂದ ಬರುತ್ತಾರೆ?, ಅವರು ಬರದಂತೆ ಬಿಎಸ್ಎಫ್ ತಡೆಯಬೇಕು. ಅವರು ಕೇವಲ ಕರ್ನಾಟಕಕ್ಕೆ ಮಾತ್ರ ಬರುವುದಿಲ್ಲ. ದೇಶದಾದ್ಯಂತ ಬೇರೆ ಬೇರೆ ಕಡೆ ಹೋಗಿ ವಾಸವಾಗಿದ್ದಾರೆ. ಲಕ್ಷಾಂತರ ಸಂಖ್ಯೆಯಲ್ಲಿ ಬಾಂಗ್ಲಾದವರು ಬಂದಿದ್ದಾರೆ ಅನ್ನೋದು ಸತ್ಯಕ್ಕೆ ದೂರವಾದ ಮಾತು. 2021ರಲ್ಲಿ 15 ಜನರನ್ನು ಗಡೀಪಾರು ಮಾಡಲಾಗಿದೆ. 2022ರಲ್ಲಿ 21 ಅಕ್ರಮ ಬಾಂಗ್ಲಾದವರನ್ನು ಗಡೀಪಾರು ಮಾಡಲಾಗಿದೆ ಎಂದರು.
ನಮ್ಮ ಸರ್ಕಾರ ಬಂದ ಬಳಿಕ 2023ರಲ್ಲಿ 47 ಜನ, 2024ರಲ್ಲಿ 64 ಜನ, 2025ರಲ್ಲಿ 87 ಜನ ಸೇರಿ ಒಟ್ಟು 196 ಜನರನ್ನು ಗಡೀಪಾರು ಮಾಡಿದ್ದೇವೆ. ಇನ್ನು 376 ಜನರನ್ನು ಗುರುತು ಮಾಡಲಾಗಿದ್ದು, ಅವರನ್ನೂ ವಾಪಸ್ ಕಳುಹಿಸುವ ಕೆಲಸ ಆಗುತ್ತದೆ. ಈ ನಿಟ್ಟಿನಲ್ಲಿ ಒಂದು ಡ್ರೈವ್ ಮಾಡಲು ಮುಂದಾಗಿದ್ದೇವೆ. ಚಿಕ್ಕಮಗಳೂರು, ಹಾಸನ, ಕೊಡಗು, ಬೆಂಗಳೂರಲ್ಲಿ ಬಾಂಗ್ಲಾದವರು ಹೆಚ್ಚಿದ್ದಾರೆ. ಅದಕ್ಕಾಗಿ ಇಡೀ ರಾಜ್ಯದಲ್ಲಿ ಡ್ರೈವ್ ಮಾಡಿ ಅಕ್ರಮ ಬಾಂಗ್ಲಾದವರನ್ನು ಗುರುತಿಸಲು ಸೂಚನೆ ನೀಡಿದ್ದೇನೆ. ಈಗಾಗಲೇ ಅದು ಪ್ರಗತಿಯಲ್ಲಿದೆ. ಬೆಂಗಳೂರು ನಗರದಲ್ಲಿ 284, ಬೆಂಗಳೂರು ಜಿಲ್ಲೆಯಲ್ಲಿ 37, ಶಿವಮೊಗ್ಗದಲ್ಲಿ 12, ಹಾಸನದಲ್ಲಿ 3, ಉಡುಪಿಯಲ್ಲಿ 10 ಜನ ಅಕ್ರಮ ಬಾಂಗ್ಲಾದವರು ಇರುವುದನ್ನು ಪತ್ತೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ರಾಜ್ಯದ ಕಾನೂನು ಸುವ್ಯವಸ್ಥೆ ಹಳಿ ತಪ್ಪಿಲ್ಲ: ರಾಜ್ಯದ ಕಾನೂನು ಸುವ್ಯವಸ್ಥೆ ನಿಯಂತ್ರಣದಲ್ಲಿದೆ. ಅದನ್ನು ಹಳಿ ತಪ್ಪಲು ನಾವು ಬಿಡುವುದಿಲ್ಲ. ಭ್ರಷ್ಟಾಚಾರ ನಮ್ಮ ಸರ್ಕಾರ ಬಂದ ಬಳಿಕ ಬಂದಿದ್ದಲ್ಲ. ಅದನ್ನು ಸಂಪೂರ್ಣ ನಿಲ್ಲಿಸಲು ಆಗದೇ ಇದ್ದರೂ, ನಿಯಂತ್ರಣ ಮಾಡಲು ಪ್ರಯತ್ನಿಸಲಾಗುವುದು. ಕರ್ನಾಟಕದ ಪೊಲೀಸರು ಸಮರ್ಥರು ಎಂದು ಇದೇ ವೇಳೆ ತಿಳಿಸಿದರು.
2011-2013ರಲ್ಲಿ ಆರ್.ಅಶೋಕ್ ಗೃಹ ಸಚಿವರಾಗಿದ್ದಾಗ ರಾಜ್ಯದಲ್ಲಿ 4,121 ಕೊಲೆಗಳು ಆಗಿವೆ. ಎನ್ಡಿಪಿಎಸ್ ಕಾಯ್ದೆಯಡಿ 552 ಪ್ರಕರಣಗಳು ದಾಖಲಾಗಿದ್ದವು. 997 ಸೈಬರ್ ಕ್ರೈಂ ಕೇಸ್ ದಾಖಲಾಗಿದ್ದವು. ಅದೇ 2019-21ರಲ್ಲಿ ಬೊಮ್ಮಾಯಿ ಗೃಹ ಸಚಿವರಾಗಿದ್ದಾಗ 2,554 ಕೊಲೆಗಳು, ಎನ್ಡಿಪಿಎಸ್ ಕಾಯ್ದೆಯಡಿ 8,317 ಕೇಸ್, 19157 ಸೈಬರ್ ಕ್ರೈಮ್ ಕೇಸ್ ದಾಖಲಾಗಿದ್ದವು. ಆರಗ ಜ್ಞಾನೇಂದ್ರ ಗೃಹ ಸಚಿವರಾಗಿದ್ದಾಗ 2,417 ಕೊಲೆ, ಸೈಬರ್ ಕ್ರೈಂ ಕೇಸ್ 24,486 ದಾಖಲಾಗಿತ್ತು. ನಮ್ಮ ಸರ್ಕಾರ ಬಂದ ಬಳಿಕ ಮಾತ್ರ ಈ ಪ್ರಕರಣಗಳು ಜಾಸ್ತಿ ಆಗಿಲ್ಲ ಎಂದರು.



