Updated By: Priyalachhi
ನವದೆಹಲಿ: ನಟ ಮತ್ತು ರಾಜಕಾರಣಿ ಕಮಲ್ ಹಾಸನ್ ಅವರು ಇತ್ತೀಚೆಗೆ ನಡೆದ ರಾಜ್ಯಸಭೆಯಲ್ಲಿ ಮಾಡಿದ ತಮ್ಮ ಚೊಚ್ಚಲ ಭಾಷಣದ ವೇಳೆ ತಮ್ಮ ನಟನೆಯ ‘ಕಲ್ಕಿ 2898 AD’ ಚಿತ್ರದ ಡೈಲಾಗ್ ಉಲ್ಲೇಖಿಸಿ ಗಮನ ಸೆಳೆದಿದ್ದಾರೆ. ಇದೀಗ ಆ ವಿಡಿಯೋ ತುಣುಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಸದನವನ್ನು ಉದ್ದೇಶಿಸಿ ಮಾತನಾಡುವಾಗ ಕಮಲ್, ‘ದೇಶವು ಮುಂದುವರಿಯಲು ಪ್ರಜಾಪ್ರಭುತ್ವವನ್ನು ಬೆಂಬಲಿಸಿ. ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಸಹಾಯ ಮಾಡಲು ಅಥವಾ ಗೌರವಿಸಲು ಬಯಸದವರು ಅದರ ಪ್ರಗತಿಗೆ ಅಡ್ಡಿಯಾಗಬಾರದು’ ಎಂದು ಹೇಳಿದರು.
ನಂತರ ಅವರು ತಮ್ಮ ಆನ್-ಸ್ಕ್ರೀನ್ ಪಾತ್ರವಾದ ಸುಪ್ರೀಮ್ ಯಾಸ್ಕಿನ್ಗೆ ಸಂಬಂಧಿಸಿದ, ‘ಜಗನ್ನಾಥ ರಥ ಚಕ್ರಾಲು ವಸ್ತುನ್ನಾಯಿ. ನೇನು ಏಮ್ ಚೆಪ್ತುನ್ನಾನೋ, ತೆಲುಗು ವಾಳಕಿ ಅರ್ಧಮಾವ್ತುಂದಿ (ಭಗವಾನ್ ಜಗನ್ನಾಥನ ರಥ ಬರುತ್ತಿವೆ. ನಾನು ಏನು ಹೇಳುತ್ತಿದ್ದೇನೆ ಎಂಬುದನ್ನು ತೆಲುಗು ಜನರು ಅರ್ಥಮಾಡಿಕೊಳ್ಳುತ್ತಾರೆ)’ ಎಂದಿದ್ದಾರೆ.
ಬಳಿಕ ತಮ್ಮ ಹೇಳಿಕೆಗಳು ಯಾವುದೇ ವ್ಯಕ್ತಿ ಅಥವಾ ಆಡಳಿತವನ್ನು ಗುರಿಯಾಗಿಟ್ಟುಕೊಂಡು ಮಾಡಿಲ್ಲ. ಪ್ರಜಾಪ್ರಭುತ್ವವು ಭಿನ್ನಾಭಿಪ್ರಾಯಗಳನ್ನು ನಿವಾರಿಸುವಷ್ಟು ಶಕ್ತಿಶಾಲಿಯಾಗಿದೆ. ಆದರೆ, ಈ ಪ್ರಕ್ರಿಯೆಯಲ್ಲಿ ಜನರಿಗೆ ಎಂದಿಗೂ ಹಾನಿ ಮಾಡಬಾರದು. ನಾವು ಅದಕ್ಕೆ ಅವಕಾಶ ನೀಡುವುದಿಲ್ಲ. ಈ ಹಸ್ತಕ್ಷೇಪವು ವೈಯಕ್ತಿಕ ದಾಳಿಗಿಂತ ‘ವಿಚಾರಗಳ ಘರ್ಷಣೆ’ ಆಗಿರುತ್ತದೆ ಎಂದು ಸ್ಪಷ್ಟಪಡಿಸಿದರು.



