Updated By: Priyalachhi
ಕೆಂಪು ಕೋಟೆ ಬಳಿ ಸಂಭವಿಸಿದ ಕಾರು ಸ್ಫೋಟದ ಬಗ್ಗೆ ದೆಹಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ಈಗಾಗಲೇ ಕಾರಿನ ಮಾಲೀಕನನ್ನು ಬಂಧಿಸಿದ್ದಾರೆ. ಭಾರತೀಯ ಚಿತ್ರರಂಗದ ಹೆಸರಾಂತರು ದುರಂತದ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ಸೆಲೆಬ್ರಿಟಿಗಳ ಸಂದೇಶಗಳು ದೇಶಾದ್ಯಂತ ಅನೇಕರು ಅನುಭವಿಸಿದ ಆಘಾತ ಮತ್ತು ದುಃಖವನ್ನು ಪ್ರತಿಬಿಂಬಿಸುತ್ತದೆ.
ಸೋನು ಸೂದ್: ನಟ ಮತ್ತು ಸಮಾಜ ಸೇವಕ ಸೋನು ಸೂದ್ ಎಕ್ಸ್ ಪೋಸ್ಟ್ ಶೇರ್ ಮಾಡಿದ್ದು, “ದೆಹಲಿಯ ಕೆಂಪು ಕೋಟೆ ಬಳಿ ನಡೆದ ದುರಂತ ಸ್ಫೋಟಕ್ಕೆ ಸಿಲುಕಿದ ಪ್ರತಿಯೊಬ್ಬರಿಗೂ ನನ್ನ ಹೃದಯ ಮಿಡಿಯುತ್ತಿದೆ. ಸಂತ್ರಸ್ತರನ್ನು ಬೆಂಬಲಿಸೋಣ, ಪರಸ್ಪರ ನೋಡಿಕೊಳ್ಳೋಣ ಮತ್ತು ಶಾಂತಿಗೆ ಬದ್ಧರಾಗೋಣ” ಎಂದು ತಿಳಿಸಿದ್ದಾರೆ.
ವಿಜಯ್: ಜನಪ್ರಿಯ ತಮಿಳು ನಟ, ರಾಜಕಾರಣಿ ದಳಪತಿ ವಿಜಯ್ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಮೂಲಕ ಪ್ರತಿಕ್ರಿಯಿಸಿದ್ದು, “ದೆಹಲಿಯ ಕೆಂಪು ಕೋಟೆ ಮೆಟ್ರೋ ಬಳಿ ಸಂಭವಿಸಿದ ಕಾರು ಸ್ಫೋಟದ ಸುದ್ದಿಯಿಂದ ತೀವ್ರ ಆಘಾತ ಮತ್ತು ದುಃಖವಾಗಿದ್ದು, ಘಟನೆ ಅಮೂಲ್ಯ ಜೀವಗಳನ್ನು ಬಲಿ ತೆಗೆದುಕೊಂಡಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಗೊಂಡವರೆಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ” ಎಂದು ತಿಳಿಸಿದ್ದಾರೆ.
ಅಲ್ಲು ಅರ್ಜುನ್: ”ದೆಹಲಿಯ ಕೆಂಪು ಕೋಟೆ ಬಳಿ ನಡೆದ ದುರಂತ ಘಟನೆಯಿಂದ ತೀವ್ರ ದುಃಖವಾಗಿದೆ. ಸಂತ್ರಸ್ತರು ಮತ್ತು ಅವರ ಕುಟುಂಬಕ್ಕೆ ನನ್ನ ಪ್ರಾರ್ಥನೆಗಳು, ಮತ್ತೊಮ್ಮೆ ಶಾಂತಿ ನೆಲೆಸಲಿ ಎಂದು ನಾನು ಬಯಸುತ್ತೇನೆ” ಎಂದು ಖ್ಯಾತ ನಟ ಅಲ್ಲು ಅರ್ಜುನ್ ಬರೆದುಕೊಂಡಿದ್ದಾರೆ.
ರವೀನಾ ಟಂಡನ್: ಎಕ್ಸ್ ಪೋಸ್ಟ್ ಶೇರ್ ಮಾಡಿದ ಬಾಲಿವುಡ್ ನಟಿ ರವೀನಾ ಟಂಡನ್, ಘಟನೆಯನ್ನು “ಭಯಾನಕ ಸುದ್ದಿ” ಎಂದು ಕರೆದರು. ಜೊತೆಗೆ, “ದೆಹಲಿ ಸ್ಫೋಟದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಎಲ್ಲಾ ದುಃಖಿತ ಕುಟುಂಬಗಳಿಗೆ ಸಂತಾಪಗಳು. ಭಯಾನಕ ಸುದ್ದಿ” ಎಂದು ಬರೆದುಕೊಂಡಿದ್ದಾರೆ.
ಸಿದ್ಧಾರ್ಥ್ ಮಲ್ಹೋತ್ರಾ: ಬಾಲಿವುಡ್ ನಟ ಸಿದ್ದಾರ್ಥ್ ಮಲ್ಹೋತ್ರಾ ಇನ್ಸ್ಟಾಗ್ರಾಮ್ ಮೂಲಕ ತಮ್ಮ ಸಂತಾಪ ವ್ಯಕ್ತಪಡಿಸಿದ್ದು, ಸಂತ್ರಸ್ತರಿಗೆ ತಮ್ಮ ಬೆಂಬಲ ಸೂಚಿಸಿದರು. ಈ ಅವ್ಯವಸ್ಥೆಯ ಸಮಯದಲ್ಲಿ ಜನರು ಒಟ್ಟಾಗಿ ಸೇರಬೇಕೆಂದು ಒಗ್ಗಟ್ಟಿಗೆ ಕರೆ ನೀಡಿದರು.
ವಿಶಾಲ್: ನಟ ಮತ್ತು ನಿರ್ಮಾಪಕ ವಿಶಾಲ್ ಈ ಕೃತ್ಯದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಘಟನೆಯನ್ನು “ಅನಾಗರಿಕ ಮತ್ತು ಅಮಾನವೀಯ” ಎಂದು ಕರೆದಿದ್ದಾರೆ. “ದೆಹಲಿಯ ಕೆಂಪು ಕೋಟೆ ಬಳಿ ನಡೆದ ದುರಂತ ಸ್ಫೋಟದ ಸುದ್ದಿ ಕೇಳಿ ದುಃಖವಾಯಿತು. ಹಲವು ಜೀವಗಳು ಬಲಿಯಾಗಿವೆ, ಹಲವರು ಗಾಯಗೊಂಡಿದ್ದಾರೆ. ಭಯೋತ್ಪಾದನೆಯ ಬರ್ಬರ ಕೃತ್ಯದಿಂದ ಮತ್ತೆ ಹಲವು ಅಮಾಯಕ ಜೀವಗಳು ಬಲಿಯಾಗಿರುವುದನ್ನು ನೋಡುವುದು ಬೇಸರದ ಸಂಗತಿ. ಈ ದುಷ್ಕೃತ್ಯದ ಹಿಂದಿರುವವರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಲಿ” ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ



