‘ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ ಸರಿಪಡಿಸಿ, ಇಲ್ಲವೇ ಪ್ರತ್ಯೇಕ ರಾಜ್ಯ ಕೊಡಿ’: ಹೋರಾಟಗಾರರ ಪಟ್ಟು

0
83

Updated By: Priyalachhi

ಬೆಳಗಾವಿ: ಉತ್ತರ ಕರ್ನಾಟಕ ಭಾಗಕ್ಕೆ ಆಗುತ್ತಿರುವ ಅನ್ಯಾಯ ಸರಿಪಡಿಸಿ ಈ ಭಾಗದ ಸಮಗ್ರ ಅಭಿವೃದ್ಧಿಗೆ ಕ್ರಮ ವಹಿಸುವಂತೆ ಕಳೆದ 13 ವರ್ಷಗಳಿಂದ ಉತ್ತರ ಕರ್ನಾಟಕ ವಿಕಾಸ ವೇದಿಕೆ ಹೋರಾಡುತ್ತಿದೆ. ಇದೀಗ ಪ್ರತ್ಯೇಕ ಉತ್ತರ ಕರ್ನಾಟಕ ಆಗದ ಹೊರತು ಅಭಿವೃದ್ಧಿ ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದಿರುವ ಈ ವೇದಿಕೆ ಪ್ರತ್ಯೇಕ ರಾಜ್ಯದ ಪರವಾಗಿ 1 ಕೋಟಿ 9308 ಜನರ ಸಹಿ ಪಡೆದಿದೆ.‌

ಬೇಡಿಕೆಗಳೇನು?:

  • ಬೆಳಗಾವಿಯನ್ನು ರಾಜ್ಯದ ಎರಡನೇ ರಾಜಧಾನಿಯನ್ನಾಗಿ ಅಧಿಕೃತವಾಗಿ ಘೋಷಿಸಬೇಕು.
  • ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ರಾಜ್ಯ ಮಟ್ಟದ ಸೆಕ್ರೆಟರಿಯೇಟ್ ಕಚೇರಿಗಳನ್ನು ಪ್ರಾರಂಭಿಸಬೇಕು.
  • ರಾಜ್ಯ ಮಟ್ಟದ ಕಾರ್ಯಾಲಯಗಳನ್ನು ಇಲ್ಲಿಗೆ ವರ್ಗಾಯಿಸಬೇಕು.
  • ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ರಚಿಸಬೇಕು.
  • ಕಿತ್ತೂರು ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು.

ಈ ಬೇಡಿಕೆಗಳೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಉತ್ತರ ಕರ್ನಾಟಕ ವಿಕಾಸ ವೇದಿಕೆ ಹಾಗೂ ಉತ್ತರ ಕರ್ನಾಟಕ ಹೋರಾಟ ಸಮಿತಿ ಮತ್ತು ವಿವಿಧ ಉತ್ತರ ಕರ್ನಾಟಕ ಪರ ಹೋರಾಟ ಸಂಘಟನೆಗಳು ಬೆಳಗಾವಿ ಸುವರ್ಣ ವಿಧಾನಸೌಧ ಮುಂದೆ ಮಂಗಳವಾರ ಒಂದು ದಿನದ ಸಾಂಕೇತಿಕ ಧರಣಿ ನಡೆಸಿದವು.

ನಡೆಸಿದ ಚಿಟ್ ಚಾಟ್​ನಲ್ಲಿ ಹೋರಾಟಗಾರ ಮತ್ತು ನ್ಯಾಯವಾದಿ ಬಿ‌.ಡಿ.ಹಿರೇಮಠ ಮಾತನಾಡಿ, “ಬೆಳಗಾವಿಯಲ್ಲಿ ನಡೆಯುವ ಚಳಿಗಾಲ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ ಬಗ್ಗೆ ಎಲ್ಲ ಶಾಸಕರು ಚಿಂತನೆ ಮಾಡಬೇಕು. ನಮ್ಮ ಬೇಡಿಕೆ ಈಡೇರಿಸದಿದ್ದರೆ ಪ್ರತ್ಯೇಕ ಉತ್ತರ ಕರ್ನಾಟಕ ಹೋರಾಟ ಶುರು ಮಾಡಬೇಕಾಗುತ್ತದೆ. ಸುವರ್ಣ ವಿಧಾನಸೌಧ ಮೇಲೆ ಉತ್ತರ ಕರ್ನಾಟಕ ಬಾವುಟ ಹಾರಿಸಲು ನಾವು ತಯಾರಿದ್ದೇವೆ” ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಸಿದರು.

ಮತ್ತೋರ್ವ ಹೋರಾಟಗಾರ ಅಶೋಕ ಪೂಜಾರಿ ಮಾತನಾಡಿ, “ಈ ಬಾರಿ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಈಗ ಚೆಂಡು ಸರ್ಕಾರದ ಮುಂದಿದೆ. ಬೆಳಗಾವಿ ಎರಡನೇ ರಾಜಧಾನಿಯನ್ನಾಗಿ ಅಧಿಕೃತವಾಗಿ ಘೋಷಣೆ ಮಾಡಿದರೆ, ಬೆಳಗಾವಿ ಕರ್ನಾಟಕದಲ್ಲೆ ಇರುತ್ತದೆ. ಆಗ ಅಖಂಡ ಕರ್ನಾಟಕದಲ್ಲೆ ನಾವು ಇರಲು ನಿರ್ಧರಿಸುತ್ತೇವೆ. ಅಧಿವೇಶನಕ್ಕಿಂತ ಮೊದಲು ಸರ್ಕಾರ ಈ ಸಂಬಂಧ ನಿರ್ಧಾರ ಪ್ರಕಟಿಸಬೇಕು. ಇಲ್ಲದಿದ್ದರೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ರಚನೆ ಆಗಿ, ಬೆಳಗಾವಿ ಅದರ ಅಧಿಕೃತ ರಾಜಧಾನಿ ಆಗುವುದು ನಿಶ್ಚಿತ. ಆ ನಿಟ್ಟಿನಲ್ಲಿ ನಾವು ಹೋರಾಟಕ್ಕೆ ಸಜ್ಜಾಗುತ್ತೇವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಕಚೇರಿ ಸ್ಥಳಾಂತರ ಆಗದೇ ಇರುವುದಕ್ಕೆ ಸರ್ಕಾರದ ಇಚ್ಛಾಶಕ್ತಿ ಕೊರತೆ ಮತ್ತು ಅಧಿಕಾರಿಗಳ ಆಲಸ್ಯತನವೇ ಕಾರಣ. ಬೆಂಗಳೂರಿನ ವಿಧಾನಸೌಧದಲ್ಲಿ‌ ಕೆಲಸ ಮಾಡುವ ಶೇ.82ರಷ್ಟು ಅಧಿಕಾರಿಗಳು ದಕ್ಷಿಣ ಕರ್ನಾಟಕದವರೇ ಇದ್ದಾರೆ. ಇಲ್ಲಿ ತಮಗೆ ಬೇಕಾದ ಸೌಲಭ್ಯಗಳು ಸಿಗುವುದಿಲ್ಲ ಎಂಬ ಕಾರಣಕ್ಕೆ ಕಚೇರಿಗಳನ್ನು ಸ್ಥಳಾಂತರ ಮಾಡಲು ತಡೆಯೊಡ್ಡಿದ್ದಾರೆ. ಇದರಿಂದ ನಮ್ಮ ಉತ್ತರ ಕರ್ನಾಟಕ ಅಭಿವೃದ್ಧಿಗೆ ಹಿನ್ನಡೆ ಆಗುತ್ತಿದೆ. 2016ರಿಂದ ನಾವು ಜನರು ಮತ್ತು ಜನಪ್ರತಿನಿಧಿಗಳಿಂದ ಅಭಿಪ್ರಾಯ ಸಂಗ್ರಹಿಸುತ್ತಿದ್ದೇವೆ. 2025ರ ನವೆಂಬರ್ 11ರವರೆಗೆ 1 ಕೋಟಿ 9308 ಜನರಿಂದ ಸಹಿ ಪಡೆದಿದ್ದೇವೆ. ನವೆಂಬರ್ 1ರಿಂದ ಜನಪ್ರತಿನಿಧಿಗಳ ಸಹಿ ಅಭಿಯಾನ ಶುರು ಮಾಡಿದ್ದೇವೆ. ಆಡಳಿತಾರೂಢ ಕಾಂಗ್ರೆಸ್ ಶಾಸಕ ರಾಜು ಕಾಗೆ ಅವರು ಮೊಟ್ಟ ಮೊದಲ ಸಹಿ ಮಾಡಿದ್ದಾರೆ. ಜೊತೆಗೆ ತಮ್ಮ ಲೆಟರ್ ಹೆಡ್​ನಲ್ಲಿ ರಾಷ್ಟ್ರಪತಿ, ರಾಜ್ಯಪಾಲ, ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿಗೆ ಪತ್ರ ಬರೆದು ಪ್ರತ್ಯೇಕ ಉತ್ತರ ಕರ್ನಾಟಕ ಆಗಬೇಕು ಎಂಬ ನಿಟ್ಟಿನಲ್ಲಿ ಐತಿಹಾಸಿಕ ಹೆಜ್ಜೆ ಇಟ್ಟಿರುವುದು ನಮಗೆಲ್ಲಾ ಸಂತಸ ತಂದಿದೆ” ಎಂದು ಹೋರಾಟಗಾರ ನಾಗೇಶ ಗೋಳಶೆಟ್ಟಿ ಹೇಳಿದರು.

“ರಾಜು ಕಾಗೆ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬೇಕು ಎನ್ನುವ ನಿಟ್ಟಿನಲ್ಲಿ ಅವರು ಲಿಖಿತ ಪತ್ರ ಬರೆದಿದ್ದಾರೆ. ಅಧಿವೇಶನ ಸಂದರ್ಭದಲ್ಲಿ ಈ ಭಾಗದ ಜ‌ನಪ್ರತಿನಿಧಿಗಳಿಗೆ ನಾವು ಘೇರಾವ್ ಹಾಕಲಿದ್ದೇವೆ. ಸದನದೊಳಗೆ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ಧ್ವನಿ ಎತ್ತಿ ಇಲ್ಲವೇ ಪ್ರತ್ಯೇಕ ಉತ್ತರ ಕರ್ನಾಟಕ ಆಗಲಿ ಅಂತಾ ಬರೆದುಕೊಡುವಂತೆ ಒಂದು ಚಳವಳಿ ಹಮ್ಮಿಕೊಳ್ಳಲಿದ್ದೇವೆ. 13 ವರ್ಷಗಳಿಂದ ನಿರಂತರ ಹೋರಾಟ ಮಾಡುತ್ತಿದ್ದೇವೆ. ಆದರೂ ಸರ್ಕಾರ ಮಾತ್ರ ತಾರತಮ್ಯ ಧೋರಣೆ ಬಿಟ್ಟಿಲ್ಲ” ಎಂಬುದು ಇನ್ನೋರ್ವ ಹೋರಾಟಗಾರ ಭೀಮಪ್ಪ ಗಡಾದ ಅವರ ಆಕ್ರೋಶ.

sambrama prabha editor suresh kt

LEAVE A REPLY

Please enter your comment!
Please enter your name here