‘ವಾರಕ್ಕೆ 72 ಗಂಟೆ ಕೆಲಸ, ಮನಸ್ಥಿತಿ ಬದಲಾಗಬೇಕು, ಪ್ರಧಾನಿ ಮೋದಿ ಆದರ್ಶ’

0
25

Updated By: Priyalachhi

ಬೆಂಗಳೂರು: ಹೆಚ್ಚುವರಿ ಕೆಲಸದ ಅವಧಿಯ ಕುರಿತು ಮೊದಲಿನಿಂದಲೂ ಒತ್ತಾಯ ಹೇರುತ್ತಾ ಬಂದಿದ್ದ ಇನ್ಫೋಸಿಸ್ ಅಧ್ಯಕ್ಷ ನಾರಾಯಣಮೂರ್ತಿ ಇದೀಗ ಅಂತಹುದೇ ಮತ್ತೊಂದು ಸೂತ್ರದೊಂದಿಗೆ ಮುಂದೆ ಬಂದಿದ್ದಾರೆ.

ಹೌದು.. ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಮತ್ತೊಮ್ಮೆ ಕೆಲಸದ ಅವಧಿಯ ವಿಚಾರವಾಗಿ ಮಾತನಾಡಿದ್ದು, ಈ ಬಾರಿ ಚೀನಾ ನಿದರ್ಶನದೊಂದಿಗೆ ಸುದ್ದಿಗೆ ಗ್ರಾಸವಾಗುತ್ತಿದ್ದಾರೆ. ನಾರಾಯಣಮೂರ್ತಿ ಅವರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕೆನ್ನುವ ವಾದ ಸಮರ್ಥಿಸಿಕೊಂಡಿದ್ದು, ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮೂರ್ತಿಗಳು ಚೀನಾದ ನಿದರ್ಶನ ನೀಡಿದ್ದಾರೆ.

ಚೀನಾದಲ್ಲಿ ವಾರಕ್ಕೆ 6 ದಿನ, ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ಕೆಲಸ ಮಾಡಲಾಗುವುದನ್ನು ನಾರಾಯಣಮೂರ್ತಿ ಉದಾಹರಣೆಯಾಗಿ ನೀಡಿದ್ದಾರೆ. ಅಂತೆಯೇ ಸಮರ್ಥ ಕೆಲಸದ ವ್ಯವಸ್ಥೆಯು ದೇಶದ ಅಭಿವೃದ್ದಿಗೆ ಎಷ್ಟು ಮುಖ್ಯ ಎಂಬುದನ್ನು ವಿವರಿಸಿದ್ದಾರೆ.

ಪ್ರಯತ್ನದಿಂದ ಮಾತ್ರವೇ ಅಭಿವೃದ್ಧಿ ಬರುವುದು. ಯಾವುದೇ ವ್ಯಕ್ತಿ ಸಮುದಾಯ ಮತ್ತು ದೇಶವಾಗಲೀ ಪರಿಶ್ರಮ ಇಲ್ಲದೇ ಅಭಿವೃದ್ಧಿ ಹೊಂದಿಲ್ಲ. ಹಾಗೆಯೇ, ಮೊದಲು ಜೀವನ ಪಡೆಯಿರಿ, ಬಳಿಕ ಕೆಲಸ ಮತ್ತು ಜೀವನ ಸಮತೋಲನ ಸಾಧಿಸಿರಿ ಎಂದೂ ಯುವಜನರಿಗೆ ನಾರಾಯಣ ಮೂರ್ತಿ ಸಲಹೆ ನೀಡಿದ್ದಾರೆ.

ಚೀನಾದ ಹೊಟೆಲ್ ಉದಾಹರಣೆ

‘ಕಳೆದ ವರ್ಷ ಕಾಟಮರನ್​ನ (ನಾರಾಯಣಮೂರ್ತಿ ಅವರ ಹೂಡಿಕೆ ಸಂಸ್ಥೆ) ಕೆಲ ಹಿರಿಯ ಉದ್ಯೋಗಿಗಳು ಚೀನಾಗೆ ಭೇಟಿ ನೀಡಿದ್ದರು. ಅಲ್ಲಿಯ 1, 2, ಮತ್ತು 3ನೇ ಸ್ತರ ನಗರಗಳಿಗೆ ಭೇಟಿ ನೀಡಿದ್ದರು. ಚೀನಾದ ವಾಸ್ತವ ಪರಿಸ್ಥಿತಿ ಹೇಗಿದೆ ಎಂದು ತಿಳಿಯಲು ಅವರು ಈ ಮೂರೂ ರೀತಿಯ ನಗರಗಳಲ್ಲಿನ ಹೋಟೆಲ್​ಗಳಲ್ಲಿ ಉಳಿದಿದ್ದರು. ಅಲ್ಲಿ 9, 9, 6 ಎನ್ನುವ ಮಾತಿದೆ. ಹಾಗಂದರೆ ಏನು ಗೊತ್ತಾ? ಬೆಳಗ್ಗೆ 9ರಿಂದ ರಾತ್ರಿ 9, ವಾರಕ್ಕೆ 6. ಅಂದರೆ ವಾರಕ್ಕೆ 72 ಗಂಟೆ ಆಯಿತು’ ಎಂದು ಎನ್ ಆರ್ ನಾರಾಯಣಮೂರ್ತಿ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಆದರ್ಶ

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ ನಾರಾಯಣ ಮೂರ್ತಿ ‘ಯುವಜನರಿಗೆ ಪ್ರಧಾನಿ ಮೋದಿ ಆದರ್ಶ. ನರೇಂದ್ರ ಮೋದಿ ಅವರು ವಾರಕ್ಕೆ ಬಹುತೇಕ 100 ಗಂಟೆ ಕೆಲಸ ಮಾಡುತ್ತಾರೆ ಎಂದರು. ಅಂತೆಯೇ ಈ ರೀತಿಯ ದೀರ್ಘ ಸಮಯ ಕೆಲಸದಲ್ಲಿ ತೊಡಗಿಸಿಕೊಳ್ಳುವುದರ ಬಗ್ಗೆ ಮಾತ್ರವಲ್ಲ, ಶಿಸ್ತು ಮತ್ತು ದೇಶಾದ್ಯಂತ ಅನೇಕ ಜನರು ಹಂಚಿಕೊಂಡ ಸ್ಪಷ್ಟ ಗುರಿಯ ಬಗ್ಗೆಯೂ ಆಗಿದೆ.

ಈ ರೀತಿಯ ನಿರಂತರ ಹಾಗೂ ವಿಶೇಷ ಪ್ರಯತ್ನವು ವರ್ಷಗಳಲ್ಲಿ ಚೀನಾದ ಆರ್ಥಿಕ ಏರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಭಾರತವು ಬುದ್ಧಿವಂತ ಜನರು ಮತ್ತು ಅದ್ಭುತ ಐಡಿಯಾಗಳನ್ನು ಹೊಂದಿದೆ. ಆದರೆ, ಗಂಭೀರ ಕ್ರಮದೊಂದಿಗೆ ಆ ಆಲೋಚನೆಗಳನ್ನು ಬೆಂಬಲಿಸಬೇಕು. ಈ ಆಲೋಚನೆಗಳನ್ನು ಅನುಷ್ಠಾನ ಮಾಡಬೇಕು ಎಂದು ನಾರಾಯಣಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿಯವರು ವಾರಕ್ಕೆ 100 ಗಂಟೆ ಕೆಲಸ ಮಾಡುತ್ತಾರೆ, ಇದು ಇಂದಿನ ಪೀಳಿಗೆಯ ಯುವಕರಿಗೆ ಪ್ರೇರಣೆ. ಯಾಕೆಂದರೆ ಕಡಿಮೆ ಅವಕಾಶಗಳನ್ನು ಹೊಂದಿರುವವರು ಪರಿಶ್ರಮ ಮತ್ತು ಬುದ್ಧಿವಂತಿಕೆಯಿಂದ ಕೆಲಸ ಮಾಡಿ ಕಡಿಮೆ ಸಾಧ್ಯತೆಯಲ್ಲಿ ಉತ್ತಮ ಸಾಧ್ಯತೆಗಳನ್ನು ಕಂಡುಕೊಳ್ಳಬಹುದು. ನನ್ನ ಪ್ರಕಾರ ಕಠಿಣ ಪರಿಶ್ರಮ ಎನ್ನುವುದು ಒಬ್ಬ ವ್ಯಕ್ತಿ, ಸಮುದಾಯ, ಅಥವಾ ದೇಶದ ಯಶಸ್ಸಿಗೆ ಬಹು ಮುಖ್ಯ’ ಎಂದರು.

sambrama prabha editor suresh kt

LEAVE A REPLY

Please enter your comment!
Please enter your name here