Updated By: Priyalachhi
ಬೆಂಗಳೂರು: ಕರ್ನಾಟಕದಲ್ಲಿ ಕಳೆದ ಹಲವು ಕೇಳಿಬರುತ್ತಿರುವ ನವೆಂಬರ್ ಕ್ರಾಂತಿ ಕುರಿತು ಕುತೂಹಲಕಾರಿ ಹೇಳಿಕೆ ನೀಡಿರುವ ಡಿಸಿಎಂ ಡಿಕೆ ಶಿವಕುಮಾರ್, ‘ನನ್ ಹತ್ರ ಯಾವ್ ಬಣ್ಣನೂ ಇಲ್ಲ.. ನಾನು ಎಲ್ಲ 140 ಶಾಸಕರಿಗೂ ಅಧ್ಯಕ್ಷ’ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಎರಡೂವರೆ ವರ್ಷ ಭರ್ತಿಯಾಗುತ್ತಿದ್ದಂತೆ ಅಧಿಕಾರ ಹಂಚಿಕೆಯ ಜಟಾಪಟಿ ನಡೆದಿದ್ದು, ಡಿಕೆ ಶಿವಕುಮಾರ್ ಬಣದ ಕೆಲ ಸಚಿವರು, ಶಾಸಕರು ಹೈಕಮಾಂಡ್ ನಾಯಕರ ಭೇಟಿಗೆ ದೆಹಲಿಗೆ ತೆರಳಿದ್ದಾರೆ.
ಇದರ ಬೆನಲ್ಲೇ ಇತ್ತ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಬಣದ ಸಚಿವ ರಹಸ್ಯ ಸಭೆ ನಡೆಸಿದ್ದು, ಕರ್ನಾಟಕ ಕಾಂಗ್ರೆಸ್ನಲ್ಲಿ ಮಹತ್ವದ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ಇನ್ನು ಈ ಬಣ ರಾಜಕೀಯ ಚಟುವಟಿಕೆಗಳ ಬಗ್ಗೆ ಸ್ವತಃ ಡಿಸಿಎಂ ಡಿಕೆ ಶಿವಕುಮಾರ್ ಸುದ್ದಿಗಾರರಿಗೆ ಸ್ಪಷ್ಟನೆ ನೀಡಿದ್ದಾರೆ.
ನಾನು ಎಲ್ಲ 140 ಶಾಸಕರಿಗೂ ಅಧ್ಯಕ್ಷ
ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಡಿಕೆಶಿ, ಕಳೆದ ಎರಡೂವರೆ ವರ್ಷಗಳಿಂದ ಸಾಕಷ್ಟು ಔತಣಕೂಟ ನಡೆದಿದೆ. ನಾಲ್ವರು ಡಿಸಿಎಂ ಮಾಡಬೇಕು, ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಿಸಬೇಕು.
ಸಂಪುಟಕ್ಕೆ ತಮ್ಮನ್ನು ಸೇರಿಸಿಕೊಳ್ಳಬೇಕೆಂದು ಸಾಕಷ್ಟು ಡಿನ್ನರ್ ಸಭೆ ನಡೆದಿವೆ. ಸಚಿವರ ಡಿನ್ನರ್ ಕೂಡ ಅದರ ಒಂದು ಭಾಗವೇ ಇದು ಎಂದು ಮಾರ್ಮಿಕವಾಗಿ ಹೇಳಿದರು.
ನನ್ ಹತ್ರ ಯಾವ್ ಬಣ್ಣನೂ ಇಲ್ಲ. ನನ್ ಹತ್ರ ಯಾವ್ ಬಣನೂ ಇಲ್ಲ.. ನಾನು 140 ಶಾಸಕರಿಗೆ ಅಧ್ಯಕ್ಷ. ನನಗೆ 140 ಜನನೂ ಪ್ರಮುಖ. ನಾನು ಯಾವ ಗುಂಪನ್ನೂ ಕರೆದುಕೊಂಡು ಹೋಗಲು ಇಷ್ಟವಿಲ್ಲ. ಬಣ ರಾಜಕೀಯ ನನ್ನ ರಕ್ತದಲ್ಲೇ ಇಲ್ಲ ಎಂದರು.



