Updated By: Priyalachhi
‘ಮಾರುತ’. ಪಡ್ಡೆ ಹುಲಿ ಸಿನಿಮಾ ಖ್ಯಾತಿಯ ಶ್ರೇಯಸ್ ಮಂಜು ಹಾಗೂ ದುನಿಯಾ ವಿಜಯ್ ಅಭಿನಯಿಸಿರುವ ಬಹುನಿರೀಕ್ಷಿತ ಚಿತ್ರ. ಎಸ್.ನಾರಾಯಣ್ ನಿರ್ದೇಶನದ ಈ ಚಿತ್ರ ಇದೇ ವಾರ ಪ್ರೇಕ್ಷಕರೆದುರು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಸಿನಿಮಾ ಬಿಡುಗಡೆಗೂ ಮುನ್ನ ಪೊಲೀಸ್ ಇಲಾಖೆಯವರಿಗಾಗಿ ಚಿತ್ರತಂಡ ವಿಶೇಷ ಪ್ರದರ್ಶನ ಆಯೋಜಿಸಿತ್ತು. ಬೆಂಗಳೂರು ನಗರದ ಭದ್ರತಾ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಮಂಜುನಾಥ ಬಾಬು ಸೇರಿದಂತೆ ಪೊಲೀಸ್ ಸಿಬ್ಬಂದಿ ಸಿನಿಮಾ ವೀಕ್ಷಿಸಿದರು.
ಬಳಿಕ ಮಾತನಾಡಿದ ಉಪ ಪೊಲೀಸ್ ಆಯುಕ್ತರಾದ ಮಂಜುನಾಥ್ ಬಾಬು ಅವರು, “ಮೊದಲು ಸಮಾಜಕ್ಕೆ ಇಂಥ ಉತ್ತಮ ಚಿತ್ರವನ್ನು ನಿರ್ಮಾಣ ಮಾಡಿಕೊಟ್ಟ ನಿರ್ಮಾಪಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಿರ್ದೇಶಕ ಎಸ್.ನಾರಾಯಣ್ ಅವರು ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ವಿಷಯವನ್ನಿಟ್ಟುಕೊಂಡು ಅದ್ಭುತ ಸಿನಿಮಾ ಮಾಡಿದ್ದಾರೆ. ಚಿತ್ರದಲ್ಲಿರುವ ಎಲ್ಲ ಕಲಾವಿದರು ಚೆನ್ನಾಗಿ ಅಭಿನಯಿಸಿದ್ದಾರೆ. ದುನಿಯಾ ವಿಜಯ್ ಅವರದಂತೂ ಅದ್ಭುತ ಅಭಿನಯ. ಸಾಮಾಜಿಕ ಜಾಲತಾಣಗಳಿಂದ ಎಷ್ಟು ಅನುಕೂಲ ಇದೆಯೋ, ಅಷ್ಟೇ ತೊಂದರೆ ಕೂಡಾ ಇದೆ ಅನ್ನುವುದನ್ನು ಸಿನಿಮಾದಲ್ಲಿ ಉತ್ತಮವಾಗಿ ತೋರಿಸಿದ್ದಾರೆ. ಹಿರಿಯರು, ಕಿರಿಯರು ಎಂಬ ಭೇದ-ಭಾವವಿಲ್ಲದೇ ಎಲ್ಲ ವಯಸ್ಸಿನವರು ಅವಶ್ಯವಾಗಿ ನೋಡುವಂಥ ಸಿನಿಮಾ. ಅದರಲ್ಲೂ ಹೆಣ್ಣುಮಕ್ಕಳಿಗೆ ಎಚ್ಚರಿಕೆಯ ಗಂಟೆ. ಈಗಿನ ಯುವಪೀಳಿಗೆ ಈ ಚಿತ್ರ ನೋಡಿ ತಿಳಿದುಕೊಳ್ಳುವುದು ಬಹಳಷ್ಟಿದೆ. ಎಲ್ಲರೂ ತಪ್ಪದೇ ಕುಟುಂಬ ಸಮೇತ ಹೋಗಿ ಈ ಚಿತ್ರ ವೀಕ್ಷಿಸಿ” ಎಂದರು.



