Updated By: Priyalachhi
ಸ್ಯಾಂಡಲ್ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮುಖ್ಯಭೂಮಿಕೆಯ ಬಹುನಿರೀಕ್ಷಿತ ‘ಕೆ.ಡಿ’ ಸಿನಿಮಾ ಮುಂದಿನ ವರ್ಷ ಚಿತ್ರಮಂದಿರ ಪ್ರವೇಶಿಸಲಿದೆ. ಈ ಮಧ್ಯೆ ನಟನ ಹೊಸ ಸಿನಿಮಾ ಇತ್ತೀಚೆಗೆ ಅದ್ಧೂರಿಯಾಗಿ ಸೆಟ್ಟೇರಿದೆ. ಬೆಂಗಳೂರಿನ ಬಸವನಗುಡಿಯ ಅನ್ನಪೂರ್ಣ ನವ ಮಂತ್ರಾಲಯ ಮಂದಿರದಲ್ಲಿ ‘ಕ್ರಿಮಿನಲ್’ ಶೀರ್ಷಿಕೆಯ ಚಿತ್ರದ ಮುಹೂರ್ತ ಸಮಾರಂಭ ನೆರವೇರಿತು.
‘ಕ್ರಿಮಿನಲ್’, ಧ್ರುವ ಅವರ 7ನೇ ಚಿತ್ರವಾಗಿದ್ದು, ನಾಯಕಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ಸಾಥ್ ಕೊಡುತ್ತಿದ್ದಾರೆ. ಉತ್ತರ ಕರ್ನಾಟಕದ ಸೊಗಡಿನಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ನೈಜ ಘಟನೆಯನ್ನಾಧರಿಸಿದೆ.
ಸಿನಿಮಾ ಮುಹೂರ್ತದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ನಿರ್ದೇಶಕ ರಾಜ್ ಗುರು, ”ಕಥೆ ಕೇಳಿ ಧ್ರುವ ಸರ್ಜಾ ಓಕೆ ಮಾಡಿದ್ರು. ಬಳಿಕ ಸೆಲ್ಫಿ ತೆಗೆದುಕೊಂಡೆ. ಸೆಲ್ಫಿ ನೋಡಿ ಖುಷಿ ಜೊತೆಗೆ ಭಯ ಶುರುವಾಯ್ತು. ಇದು ಜವಾಬ್ದಾರಿ ಎಂಬ ಭಯ. ಉತ್ತರ ಕರ್ನಾಟಕದ ಬಗ್ಗೆ ಸಿನಿಮಾ ಮಾಡುತ್ತಿದ್ದೇವೆ. ದೊಡ್ಡ ಪ್ರೊಡಕ್ಷನ್ ಕಂಪನಿ ನನಗೆ ಅವಕಾಶ ಕೊಟ್ಟಿದೆ. ಇದು ನನ್ನ 2ನೇ ಸಿನಿಮಾ. ಈ ಚಿತ್ರಕ್ಕೆ ನಿಮ್ಮ ಸಪೋರ್ಟ್ ಇರಲಿ” ಎಂದು ಮನವಿ ಮಾಡಿದರು.

ನಟಿ ರಚಿತಾ ರಾಮ್ ಮಾತನಾಡಿ, ”8 ವರ್ಷಗಳ ನಂತರ ನನ್ನ ಒಳ್ಳೆ ಸ್ನೇಹಿತ ಧ್ರುವ ಸರ್ಜಾ ಅವರ ಜೊತೆ ಸಿನಿಮಾ ಮಾಡುತ್ತಿರುವುದು ಖುಷಿ ಕೊಟ್ಟಿದೆ. ಭರ್ಜರಿ ಸಿನಿಮಾದ ಮುಹೂರ್ತವೂ ಇಲ್ಲೇ ಆಗಿತ್ತು. ಕ್ರಿಮಿನಲ್ ಚಿತ್ರದ ಮುಹೂರ್ತ ಸಮಾರಂಭವೂ ಇಲ್ಲೇ ಆಗಿದೆ. ಹೊಸ ತಂಡದ ಜೊತೆ ಕೆಲಸ ಮಾಡುತ್ತಿರುವ ಖುಷಿ ಇದೆ. ಮೊದಲು ನನಗೆ ಧ್ರುವ ಕರೆ ಮಾಡಿದ್ರು. ಕಥೆ, ಪ್ರೊಡಕ್ಷನ್ ಹೌಸ್ ಯಾವುದರ ಬಗ್ಗೆಯೂ ಏನೂ ಕೇಳಲಿಲ್ಲ. ಓಕೆ ಮಾಡ್ತೀನಿ ಎಂದೆ. ಆಮೇಲೆ ನಿರ್ದೇಶಕರು ಮನೆಗೆ ಬಂದು ಕಥೆ ಹೇಳಿದರು. ತುಂಬಾ ಎಕ್ಸ್ಪರಿಮೆಂಟಲ್ ರೋಲ್ ಅನ್ನು ಧ್ರುವ ನಿರ್ವಹಿಸುತ್ತಿದ್ದಾರೆ. ಇದು ಅವರ ಏಳನೇ ಸಿನಿಮಾ. ಅವರ ಸಿನಿಕೆರಿಯರ್ನ ಬೆಸ್ಟ್ ಚಿತ್ರವಾಗಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.



