ಗೃಹ ಕಾರ್ಮಿಕರಿಗೆ ಶೀಘ್ರದಲ್ಲೇ ಶಾಸನಬದ್ಧ ರಕ್ಷಣೆ

0
41

Updated By: Priyalachhi

ಬೆಂಗಳೂರು: ರಾಜ್ಯಾದ್ಯಂತ ಸುಮಾರು 8 ಲಕ್ಷ ಗೃಹ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವ ಉದ್ದೇಶದ ಮಹತ್ವದ ಕಾನೂನನ್ನು ಜಾರಿಗೆ ತರಲು ಕರ್ನಾಟಕ ಸರ್ಕಾರ ತೀರ್ಮಾನಿಸಿದೆ. ಮುಂಬರುವ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಇದಕ್ಕೆ ಸಂಬಂಧಿಸಿದ ಮಸೂದೆ ಮಂಡಿಸುವ ನಿರೀಕ್ಷೆ ಇದೆ.

ಕಾರ್ಮಿಕ ಇಲಾಖೆಯು ಈಗಾಗಲೇ ಕರ್ನಾಟಕ ಗೃಹ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಮಸೂದೆಯ ಕರಡನ್ನು ಪ್ರಕಟಿಸಿದ್ದು, 30 ದಿನಗಳೊಳಗೆ ಸಾರ್ವಜನಿಕರಿಂದ ಆಕ್ಷೇಪಣೆ ಮತ್ತು ಪ್ರತಿಕ್ರಿಯೆಗಳನ್ನು ಕೋರಿದೆ.

ಕಳೆದ ಜನವರಿಯಲ್ಲಿ ಸುಪ್ರೀಂ ಕೋರ್ಟ್, ಗೃಹಕಾರ್ಮಿಕರ ಘನತೆ ಮತ್ತು ಸುರಕ್ಷತೆಯನ್ನು ಕಾಪಾಡಲು ಶಾಸನಬದ್ಧ ರಕ್ಷಣೆಯನ್ನು ಖಚಿತಪಡಿಸಿಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

ಮಸೂದೆಯ ಮುಖ್ಯಾಂಶಗಳು:

  • ಈ ಮಸೂದೆ ಪ್ರಾಥಮಿಕವಾಗಿ ಗೃಹ ಕಾರ್ಮಿಕರು, ಉದ್ಯೋಗದಾತರು, ಸೇವಾ ಪೂರೈಕೆದಾರರು ಮತ್ತು ಗೃಹ ಸಹಾಯ ಸೇವೆಗಳನ್ನು ನೀಡುವ ಆನ್‌ಲೈನ್ ವೇದಿಕೆಗಳ ನೋಂದಣಿಯನ್ನು ಕಡ್ಡಾಯಗೊಳಿಸುತ್ತದೆ.
  • ಕಾರ್ಮಿಕರು ಮತ್ತು ಉದ್ಯೋಗದಾತರ ನಡುವೆ ಲಿಖಿತ ಒಪ್ಪಂದವನ್ನು ಕಡ್ಡಾಯಗೊಳಿಸುತ್ತದೆ.
  • ನೋಂದಾಯಿಸದ ಗೃಹ ಕಾರ್ಮಿಕರನ್ನು ನೇಮಿಸಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸುತ್ತದೆ.
  • ಉದ್ಯೋಗದಾತರು ಗೃಹ ಕಾರ್ಮಿಕರನ್ನು ನೇಮಿಸಿಕೊಂಡ 1 ತಿಂಗಳೊಳಗೆ ಮತ್ತು ಸೇವಾ ಪೂರೈಕೆದಾರರು ಕಾಯಿದೆಯ ಆರಂಭದ ಒಂದು ತಿಂಗಳೊಳಗೆ ನೋಂದಾಯಿಸಿಕೊಳ್ಳಬೇಕು.
  • ಗೃಹ ಕಾರ್ಮಿಕ ಅನಕ್ಷರಸ್ಥನಾಗಿದ್ದರೆ ಅಥವಾ ವಲಸೆ ಬಂದವನಾಗಿದ್ದರೆ, ಅಂತಹ ಕಾರ್ಮಿಕನ ನೋಂದಣಿಯ ಜವಾಬ್ದಾರಿ ಸೇವಾ ಪೂರೈಕೆದಾರರು, ಉದ್ಯೋಗ ಸಂಸ್ಥೆ ಅಥವಾ ಉದ್ಯೋಗದಾತರ ಮೇಲಿರುತ್ತದೆ.
  • ಉದ್ಯೋಗ ಬದಲಾವಣೆ ಅಥವಾ ವಲಸೆಯ ಸಂದರ್ಭದಲ್ಲಿ ಕಾರ್ಮಿಕರು ಅಂತಹ ಬದಲಾವಣೆಯ 30 ದಿನಗಳೊಳಗೆ ನೋಂದಣಿ ಅಧಿಕಾರಿಗಳಿಗೆ ತಿಳಿಸಬೇಕು.
  • ನೋಂದಾಯಿಸದ ಗೃಹ ಕಾರ್ಮಿಕರನ್ನು ನೋಂದಾಯಿಸಲು ಅಥವಾ ನೇಮಿಸಿಕೊಳ್ಳಲು ವಿಫಲವಾದರೆ 3 ತಿಂಗಳವರೆಗೆ ಜೈಲು ಶಿಕ್ಷೆ ಮತ್ತು 20,000 ರೂ ದಂಡ ಅಥವಾ ಎರಡನ್ನೂ ವಿಧಿಸಲಾಗುವುದು.
  • ಮಹತ್ವದ ಮಸೂದೆ ಗೃಹ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ಖಾತ್ರಿಗೊಳಿಸುತ್ತದೆ. ಇದನ್ನು ನಿಯತಕಾಲಿಕವಾಗಿ ಪರಿಷ್ಕರಿಸಲಾಗುತ್ತದೆ.
  • ವಾರಕ್ಕೆ 48 ಕೆಲಸದ ಗಂಟೆಗಳ ಜೊತೆಗೆ ವಾರಕ್ಕೆ ಎರಡು ಬಾರಿ ಒಂದು ದಿನ ರಜೆ ಅಥವಾ ಅರ್ಧ ದಿನದ ರಜೆ ನೀಡಲಾಗುತ್ತದೆ.
  • ಈ ಮಸೂದೆಯು ಗೃಹ ಕಾರ್ಮಿಕರನ್ನು ಸಮಂಜಸವಾದ ಕೆಲಸದ ಸಮಯ, ವಿಶ್ರಾಂತಿ ಅವಧಿಗಳು, ವಾರ್ಷಿಕ ವೇತನ ರಜೆ ಮತ್ತು ಮಾತೃತ್ವ ರಜೆ, ಜೀವ ವಿಮೆ, ಆಕಸ್ಮಿಕ ಪ್ರಯೋಜನಗಳ ಪಾವತಿಗೆ ಅರ್ಹರನ್ನಾಗಿ ಮಾಡುತ್ತದೆ.
  • ಮನೆ ಕೆಲಸಗಾರನಿಗೆ ಹಣ ಪಾವತಿಸಲು ವಿಫಲವಾದರೆ, ಉದ್ಯೋಗದಾತ ಬಡ್ಡಿಯೊಂದಿಗೆ ಪಾವತಿ ಮಾಡಲು ಬಾಧ್ಯನಾಗಿರುತ್ತಾನೆ.
  • ನಿಗದಿತ ವೇತನಕ್ಕಿಂತ ಕಡಿಮೆ ವೇತನ ನೀಡುವ ಉದ್ಯೋಗದಾತರಿಗೆ 6 ತಿಂಗಳವರೆಗೆ ಜೈಲು ಶಿಕ್ಷೆ ಮತ್ತು 20,000 ರೂ. ದಂಡ ಅಥವಾ ಎರಡನ್ನೂ ವಿಧಿಸಲಾಗುವುದು.
  • ವಿವಾದಗಳು ಮತ್ತು ಕುಂದುಕೊರತೆಗಳನ್ನು ಪರಿಹರಿಸುವುದರ ಜೊತೆಗೆ ಸ್ಥಾಪಿಸಬೇಕಾದ ನಿಧಿಯನ್ನು ನಿರ್ವಹಿಸುವ ಮತ್ತು ಮೇಲ್ವಿಚಾರಣೆ ಮಾಡುವ ‘ಕರ್ನಾಟಕ ರಾಜ್ಯ ಮನೆ ಕೆಲಸಗಾರರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಮಂಡಳಿ’ ಸ್ಥಾಪನೆ.
  • ಗೃಹ ಕೆಲಸಗಾರರು, ಸೇವಾ ಪೂರೈಕೆದಾರರು, ಉದ್ಯೋಗ ಸಂಸ್ಥೆಗಳು ಮತ್ತು ಉದ್ಯೋಗದಾತರ ನೋಂದಣಿಯಿಂದ ಸಂಗ್ರಹಿಸಲಾದ ಶುಲ್ಕಗಳು ಶೇ 5ರ ವರೆಗೆ ಗೃಹ ಕೆಲಸಗಾರರನ್ನು ನೇಮಿಸಿಕೊಳ್ಳುವವರಿಂದ ಸಂಗ್ರಹಿಸಲಾದ ಕಲ್ಯಾಣ ಶುಲ್ಕ, ಕಾಯ್ದೆಯ ಪ್ರಕಾರ ಸಂಗ್ರಹಿಸಲಾದ ಎಲ್ಲ ದಂಡಗಳು ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನಗಳು ನಿಧಿಗೆ ಕೊಡುಗೆ ನೀಡುತ್ತವೆ. ಇದನ್ನು ಗೃಹ ಕೆಲಸಗಾರರಿಗೆ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರಲು ಬಳಸಿಕೊಳ್ಳಲಾಗುತ್ತದೆ.

ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಮಂಡಳಿ: ಸಿವಿಲ್ ನ್ಯಾಯಾಲಯದ ಅಧಿಕಾರ ಹೊಂದಿರುವ ಅರೆ ನ್ಯಾಯಾಂಗ ಪ್ರಾಧಿಕಾರವಾಗಿ ಕಾರ್ಯನಿರ್ವಹಿಸುವ ಈ ಮಂಡಳಿ ಗೃಹ ಕೆಲಸಗಾರರು, ಉದ್ಯೋಗದಾತರು, ಸೇವಾ ಪೂರೈಕೆದಾರರು, ಉದ್ಯೋಗ ಸಂಸ್ಥೆಗಳು ಮತ್ತು ಸರ್ಕಾರಿ ಅಧಿಕಾರಿಗಳನ್ನು ಅದರ ಸದಸ್ಯರನ್ನಾಗಿ ಒಳಗೊಂಡಿರುತ್ತದೆ.

ಕಠಿಣ ಶಿಕ್ಷೆ ವಿಧಿಸುವ ಮೂಲಕ ಮನೆ ಕೆಲಸಗಾರರ ಶೋಷಣೆ, ಕಿರುಕುಳ ಮತ್ತು ನಿಂದನೆಯನ್ನು ಪರಿಹರಿಸಲು ಮಸೂದೆ ಪ್ರಯತ್ನಿಸುತ್ತದೆ. ಅಷ್ಟೇ ಅಲ್ಲದೇ, ಹುಡುಗಿಯರು ಮತ್ತು ಮಹಿಳಾ ಉದ್ಯೋಗಿಗಳನ್ನು ಅನೈತಿಕ ಉದ್ದೇಶಗಳಿಗಾಗಿ ಯಾವುದೇ ಸ್ಥಳಕ್ಕೆ ಕಳುಹಿಸುವ, ಲೈಂಗಿಕ ಶೋಷಣೆ ಮತ್ತು ದೌರ್ಜನ್ಯಕ್ಕೆ ಒಳಪಡಿಸುವ, ಮನೆಕೆಲಸಗಾರರನ್ನು ಕಾನೂನುಬಾಹಿರವಾಗಿ ಬಂಧಿಸುವ ಅಥವಾ ಯಾವುದೇ ಮಗುವನ್ನು ಮನೆಕೆಲಸಗಾರರನ್ನಾಗಿ ಒದಗಿಸುವವರಿಗೆ 3ರಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 50,000 ರೂ.ಗಳವರೆಗೆ ದಂಡ ವಿಧಿಸಲಾಗುತ್ತದೆ.

sambrama prabha editor suresh kt

LEAVE A REPLY

Please enter your comment!
Please enter your name here