Updated By: Priyalachhi
ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಮತಗಳ್ಳತನ ಆರೋಪವು “ಆಧಾರರಹಿತ”. ಏಕೆಂದರೆ ಹರಿಯಾಣದಲ್ಲಿ ಮತದಾರರ ಪಟ್ಟಿಯ ವಿರುದ್ಧ ಯಾವುದೇ ಮೇಲ್ಮನವಿಗಳು ದಾಖಲಾಗಿಲ್ಲ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ
ಕರ್ನಾಟಕದಂತೆ ಹರಿಯಾಣ ಚುನಾವಣೆಯಲ್ಲೂ ಮತಕಳ್ಳತನ ನಡೆದಿದೆ. 25 ಲಕ್ಷ ಮತದಾರರು “ನಕಲಿ” ಮತ್ತು ಕಳೆದ ವರ್ಷ ನಡೆದ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ “ಮತಗಳ್ಳತನ” ನಡೆದಿದೆ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಚುನಾವಣಾ ಆಯೋಗದ ಅಧಿಕಾರಿಗಳು ಪ್ರತಿಕ್ರಿಯಿಸುತ್ತಿದ್ದಾರೆ.
2024ರ ಅಕ್ಟೋಬರ್ನಲ್ಲಿ ನಡೆದ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಹಲವಾರು ಬಾರಿ ಮತ ಚಲಾಯಿಸಿದ ಮತದಾರರನ್ನು ಕಾಂಗ್ರೆಸ್ನ ಬೂತ್ ಏಜೆಂಟ್ಗಳು ಏಕೆ ಗುರುತಿಸಲಿಲ್ಲ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಪ್ರಶ್ನಿಸಿದ್ದಾರೆ.
“ಪರಿಷ್ಕರಣೆಯ ಸಮಯದಲ್ಲಿ ಕಾಂಗ್ರೆಸ್ ನ ಬೂತ್ ಮಟ್ಟದ ಏಜೆಂಟ್ಗಳು ಯಾವುದೇ ಅರ್ಜಿ ಮತ್ತು ಆಕ್ಷೇಪಣೆಗಳನ್ನು ಏಕೆ ಎತ್ತಲಿಲ್ಲ?” ಎಂದು ರಾಹುಲ್ ಗಾಂಧಿಯವರ ಆರೋಪಕ್ಕೆ ಚುನಾವಣಾ ಅಧಿಕಾರಿ ತಿರುಗೇಟು ನೀಡಿದ್ದಾರೆ.
ಮತದಾರರ ಪಟ್ಟಿಯಲ್ಲಿ ಅಕ್ರಮಗಳನ್ನು ಗುರುತಿಸಲು ರಾಜಕೀಯ ಪಕ್ಷಗಳು ಬೂತ್ ಮಟ್ಟದ ಏಜೆಂಟ್ಗಳು ಅಥವಾ BLA ಗಳನ್ನು ನೇಮಿಸುತ್ತವೆ.
ರಾಹುಲ್ ಗಾಂಧಿಯವರ ವಿರುದ್ಧ ಮತ್ತಷ್ಟು ದಾಳಿ ನಡೆಸಿದ EC ಅಧಿಕಾರಿಗಳು, ಮತದಾರರ ಪಟ್ಟಿಯ ವಿರುದ್ಧ “ಯಾವುದೇ ಮೇಲ್ಮನವಿ” ಸಲ್ಲಿಸಿಲ್ಲ ಮತ್ತು ಪ್ರಸ್ತುತ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನಲ್ಲಿ ಕೇವಲ 22 ಚುನಾವಣಾ ಅರ್ಜಿಗಳು ಬಾಕಿ ಇವೆ ಎಂದು ಒತ್ತಿ ಹೇಳಿದ್ದಾರೆ.
ಫಲಿತಾಂಶ ಘೋಷಣೆಯಾದ 45 ದಿನಗಳ ಒಳಗೆ ಆ ರಾಜ್ಯದ ಹೈಕೋರ್ಟ್ನಲ್ಲಿ ಚುನಾವಣಾ ಅರ್ಜಿ ಸಲ್ಲಿಸಬಹುದು.



