Updated By: Priyalachhi
ಕನ್ನಡ ಚಿತ್ರರಂಗದ ಬ್ಲಾಕ್ಬಸ್ಟರ್ ‘ಕೆಜಿಎಫ್’ ಮೂಲಕ ‘ಕೆಜಿಎಫ್ ಚಾಚಾ’ ಎಂದೇ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದ ನಟ ಹರೀಶ್ ರಾಯ್ (Harish Rai) ಕೊನೆಯುಸಿರೆಳೆದಿದ್ದಾರೆ. 2022ರಲ್ಲಿ ತಗುಲಿದ್ದ ಕ್ಯಾನ್ಸರ್ ಇತ್ತೀಚೆಗೆ ಉಲ್ಭಣಗೊಂಡಿತ್ತು. ನೆರವಿಗೆ ಕೋರಿದ್ದ ನಟನಿಗೆ ಸಹಾಯ ಹಸ್ತವೂ ಸಿಕ್ಕಿತ್ತು. ಆದ್ರಿಂದು ಬೆಳಗ್ಗೆ ಸುಮಾರು 11 ಗಂಟೆ ಹೊತ್ತಿಗೆ ಕೊನೆಯುಸಿರೆಳೆದಿದ್ದು, ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಸಂಭವಿಸಿದೆ.
ಸ್ಯಾಂಡಲ್ವುಡ್ನ ಸೂಪರ್ ಹಿಟ್ ‘ಓಂ’ ಸಿನಿಮಾದಿಂದ ಲೈಮ್ಲೈಟ್ಗೆ ಬಂದ ನಟರುಗಳಲ್ಲಿ ಹರೀಶ್ ರಾಯ್ ಕೂಡಾ ಓರ್ವರು. ಈ ಸಿನಿಮಾ ಸಕ್ಸಸ್ ಬಳಿಕ ಹರೀಶ್ ರಾಯ್ ಕನ್ನಡದ ಅನೇಕ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಖಳ ನಟ, ಪೋಷಕ ಪಾತ್ರಗಳಿಂದಲೇ ಅವರು ಚಂದನವನದಲ್ಲಿ ಹೆಚ್ಚು ಬೇಡಿಕೆ ಹೊಂದಿದ್ದರು. ಕನ್ನಡ ಚಿತ್ರರಂಗದ ಕೀರ್ತಿ ಹೆಚ್ಚಿಸಿದ ‘ಕೆಜಿಎಫ್’ ಸಿನಿಮಾದಲ್ಲಿ ಚಾಚಾ ಪಾತ್ರದ ಮೂಲಕ ಮತ್ತಷ್ಟು ಖ್ಯಾತಿ ಗಳಿಸಿದ್ದ ಹರೀಶ್ ರಾಯ್, ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರಿಂದು, ಇಹಲೋಹ ತ್ಯಜಿಸಿದ್ದಾರೆ.
2022ರಲ್ಲಿ ತಗುಲಿದ್ದ ಕ್ಯಾನ್ಸರ್ ಕಳೆದ ಕೆಲ ತಿಂಗಳುಗಳಲ್ಲಿ ಉಲ್ಭಣಗೊಂಡಿತ್ತು. ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗೆ ನಟ ಧ್ರುವ ಸರ್ಜಾ ಸೇರಿ ಕನ್ನಡ ಚಿತ್ರರಂಗದ ಹಲವು ಕಲಾವಿದರು ಹರೀಶ್ ಅವರ ಅರೋಗ್ಯ ವಿಚಾರಿಸಿ, ತಮ್ಮ ಕೈಲಾದ ಸಹಾಯ ಒದಗಿಸಿದ್ದರು. ನಟ ಯಶ್ ಈ ಹಿಂದೆಯೂ ಸಹಾಯ ಹಸ್ತ ಚಾಚಿದ್ದರು. ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ ಬ್ಲಾಕ್ಬಸ್ಟರ್ ಓಂ ಸಿನಿಮಾದಿಂದ ಖ್ಯಾತಿ ಪಡೆದಿದ್ದ ಹರೀಶ್ ರಾಯ್, ಸಂಜು ವೆಡ್ಸ್ ಗೀತಾ, ಸ್ವಯಂವರ, ಭೂಗತ, ನನ್ನ ಕನಸಿನ ಹೂವೆ, ನಲ್ಲ, ಜೋಡಿ ಹಕ್ಕಿ, ತಾಯವ್ವ ಹಾಗೂ ಕೆಜಿಎಫ್ 1, ಕೆಜಿಎಫ್ ಚಾಪ್ಟರ್ 2, ಮೀಂದುಮ್ ಒರು ಕಾದಲ್ ಕಧೈ, ರಾಜ್ ಬಹದ್ದೂರ್ ಸೇರಿ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದರು.
ಎರಡು ದಶಕಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಹರೀಶ್ ಅವರ ಅಭಿನಯ ಪ್ರೇಕ್ಷಕರನ್ನು ತಲುಪಿತ್ತು. ತಮ್ಮದೇ ಆದ ಅಭಿಮಾನಿ ಬಳಗವನ್ನೂ ಸಂಪಾದಿಸಿದ್ದರು. ಕಿನಲ್ ರಾಜ್ ಅಭಿನಯಿಸಿರುವ ‘ಸಿಂಹರೂಪಿಣಿ’ಯು ಹರೀಶ್ ಕಾಣಿಸಿಕೊಂಡ ಕೊನೆ ಚಿತ್ರ.
ಥೈರಾಯ್ಡ್ ಕ್ಯಾನ್ಸರ್ ಚಿಕಿತ್ಸೆಗೆ ಹಣ ಹೊಂದಿಸುವುದು ಕಷ್ಟ ಆಗುತ್ತಿತ್ತು. ಪ್ರತೀ ಇಂಜೆಕ್ಷನ್ಗೆ 3.55 ಲಕ್ಷ ರೂಪಾಯಿ ಖರ್ಚಾಗುತ್ತಿತ್ತು. ಥೈರಾಯ್ಡ್ ಕ್ಯಾನ್ಸರ್ನಿಂದ ಹೊಟ್ಟೆ ಉಬ್ಬರಗೊಂಡು ಇತ್ತೀಚೆಗೆ ಗುರುತೇ ಸಿಗದಂತಾಗಿದ್ದರು.



