ರಾಜ್ಯದ ಜನಸಂಖ್ಯೆಯ ಶೇ. 60 ಕ್ಕಿಂತ ಹೆಚ್ಚು ಜನರು 35 ರ ವಯೋಮಾನದವರು

0
16

Updated By: Priyalachhi

ಬೆಂಗಳೂರು: ರಾಜ್ಯದ ಜನಸಂಖ್ಯೆಯ ಶೇ. 60 ಕ್ಕಿಂತ ಹೆಚ್ಚು ಜನರು 35 ವಯೋಮಾನದೊಳಗಿದ್ದು, ಮುಂದಿನ ದಶಕದಲ್ಲಿ ಸುಮಾರು 1.2 ಕೋಟಿ ಯುವಕರು ಕಾರ್ಯಪಡೆಯನ್ನು ಪ್ರವೇಶಿಸುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಹೇಳಿದರು.

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಆಯೋಜಿಸಿದ್ದ “ಬೆಂಗಳೂರು ಕೌಶಲ್ಯ ಶೃಂಗಸಭೆ” ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ, ಈ ಯುವಪೀಳಿಗೆಯನ್ನು ಸರಿಯಾದ ಕೌಶಲ್ಯ, ಮನಸ್ಥಿತಿ ಮತ್ತು ಆತ್ಮವಿಶ್ವಾಸದಿಂದ ಸಜ್ಜುಗೊಳಿಸಿದರೆ ಇದು ಅಸಾಧಾರಣ ಅವಕಾಶವಾಗಲಿದೆ. ಉದ್ಯಾನ ನಗರಿ ಎನ್ನುವ ಹೆಗ್ಗಳಿಕೆಯಿಂದ ಸ್ಟಾರ್ಟ್ಅಪ್ ರಾಜಧಾನಿಯಾಗಿ ರೂಪಾಂತರಗೊಂಡಿರುವ ಬೆಂಗಳೂರು ನಗರ ಈಗ ಭಾರತದ ಕೌಶಲ್ಯ ರಾಜಧಾನಿಯಾಗಿರುವುದು ಹೆಮ್ಮೆಯ ವಿಷಯ ಎಂದರು.

ಕಳೆದ ವರ್ಷದ ಆಯವ್ಯಯದಲ್ಲಿ ಘೋಷಿಸಲಾಗಿದ್ದ ಕರ್ನಾಟಕ ಕೌಶಲ್ಯಾಭಿವೃದ್ಧಿ ನೀತಿ 2025-32 ನ್ನು ಇಂದು ಬೆಂಗಳೂರು ಸ್ಕಿಲ್ ಸಮಿಟ್ 2025 ಕಾರ್ಯಕ್ರಮದ ಮೂಲಕ ಕಾರ್ಯರೂಪಕ್ಕೆ ತರಲಾಗುತ್ತಿದೆ. ಈ 7 ವರ್ಷದ ಕಾರ್ಯತಂತ್ರದ ನೀಲನಕ್ಷೆಗೆ 4,432 ಕೋಟಿ ರೂ. ಅನುದಾನದ ಬೆಂಬಲ ನೀಡಲಾಗಿದ್ದು, ಕರ್ನಾಟಕವನ್ನು ಕೌಶಲ್ಯಭರಿತ ಹಾಗೂ ಭವಿಷ್ಯದ ಸವಾಲುಗಳಿಗೆ ಸನ್ನದ್ಧರಾಗಿಸುವುದು ಹಾಗೂ ಕಾರ್ಮಿಕ ಶಕ್ತಿಯ ಜಾಗತಿಕ ಕೇಂದ್ರವನ್ನಾಗಿ ರೂಪಿಸುವ ಗುರಿ ಹೊಂದಿರುವುದಾಗಿ ತಿಳಿಸಿದರು.

2032 ಕ್ಕೆ ಸುಮಾರು 30 ಲಕ್ಷ ಯುವಕರಿಗೆ ಕೌಶಲ್ಯ ತರಬೇತಿ, ಐಟಿಐ ಗಳಲ್ಲಿ ಮಹಿಳೆಯರ ಪ್ರವೇಶವನ್ನು ಶೇ. 33 ಕ್ಕೆ ಹೆಚ್ಚಳ ಹಾಗೂ ಐಎಂಸಿಕೆ(International Migration Centre-Karnataka) ದ ಮೂಲಕ ಜಾಗತಿಕ ಉದ್ಯೋಗಾವಕಾಶಗಳ ವೃದ್ಧಿಯನ್ನು ಸಾಧಿಸುವ ಗುರಿ ಹೊಂದಿರುವುದಾಗಿದೆ ಹೇಳಿದರು.

ಜಾಗತಿಕ ಮಟ್ಟಕ್ಕೆ ಕಾರ್ಮಿಕ ಶಕ್ತಿಯನ್ನು ಸಿದ್ಧಪಡಿಸಲು ಕರ್ನಾಟಕ ಸ್ಕಿಲ್ ಒಲಂಪಿಕ್ಸ್ ಎಂಬ ಯೋಜನೆ ಜಾರಿಗೆ ತರಲಾಗಿದೆ. ಕೌಶಲ್ಯ ಸ್ಪರ್ಧೆಯಲ್ಲಿ 48 ಪದಕಗಳನ್ನು ಪಡೆದು ಕರ್ನಾಟಕ ದೇಶದಲ್ಲೇ ಎರಡನೇ ಸ್ಥಾನವನ್ನು ಪಡೆದಿದೆ ಹಾಗೂ 4 ಅಂತರಾಷ್ಟ್ರೀಯ ಪದಕಗಳನ್ನು ತನ್ನದಾಗಿಸಿಕೊಂಡಿದೆ. ಐಟಿಐಗಳು ಹಾಗೂ ಜಿಟಿಟಿಸಿಗಳ ಮೂಲಕ ಸುಮಾರು 33,212 ಯುವಕರಿಗೆ ತರಬೇತಿಯನ್ನು ನೀಡಲಾಗಿದ್ದು, ಶಾಲಾ ಮಕ್ಕಳಿಗೆ ‘ನನ್ನ ವೃತ್ತಿ , ನನ್ನ ಆಯ್ಕೆ’ ಕಾರ್ಯಕ್ರಮದಡಿ, 35,000 ಮಕ್ಕಳಿಗೆ ತರಬೇತಿ ನೀಡಲಾಗಿದೆ. ಈ ವರ್ಷ,ಯೋಜನೆಯನ್ನು 500 ಶಾಲೆಗಳಿಗೆ ವಿಸ್ತರಿಸಿ 2.3 ಲಕ್ಷ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಗುರಿಯಿದೆ ಎಂದರು.

ಬೆಂಗಳೂರು ಕೌಶಲ್ಯ ಶೃಂಗಸಭೆ ಕರ್ನಾಟಕದ ಕೌಶಲ್ಯ ಪಯಣದಲ್ಲಿ ಒಂದು ಮೈಲಿಗಲ್ಲು. ಕರ್ನಾಟಕವನ್ನು ವಿಶ್ವದಲ್ಲೇ ಕೌಶಲ್ಯಗಳಿಗೆ ಹೆಸರಾದ ರಾಜ್ಯವನ್ನಾಗಿಸುವುದು ನಮ್ಮ ಗುರಿ. ಇಎಸ್‌ಡಿಎಂಎಐ /ಎಂಎಲ್ ಏರೋಸ್ಪೇಸ್, ಹಸಿರು ಇಂಧನ, ಒಳಗೊಳ್ಳುವಿಕೆ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಉದ್ಯೋಗಕ್ಕೆ ತಯಾರಾಗಿರುವ ಕಾರ್ಮಿಕ ಪಡೆಯನ್ನು ಸಿದ್ಧಮಾಡುವತ್ತ ಗಮನವನ್ನು ಕೇಂದ್ರೀಕೃತಗೊಳಿಸಿದೆ. 2032ರ ಹೊತ್ತಿಗೆ ಕರ್ನಾಟಕವನ್ನು ಒಂದು ಟ್ರಿಲಿಯನ್ ಡಾಲರ್ ಆರ್ಥಿಕತೆಯ ರಾಜ್ಯವನ್ನಾಗಿಸುವುದು ರಾಜ್ಯಸರ್ಕಾರದ ಗುರಿ ಎಂದು ತಿಳಿಸಿದರು.

sambrama prabha editor suresh kt

LEAVE A REPLY

Please enter your comment!
Please enter your name here