ಬುಡಕಟ್ಟು ಜನರಿಗೆ 8ಸಾವಿರ ಮನೆ ಕಟ್ಟಲು ಸಿಎಂ ಅನುಮೋದನೆ: ಟಿ.ಯೋಗೀಶ್

0
28

Updated By: Priyalachhi

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ 2025-26ನೇ ಸಾಲಿನಲ್ಲಿ ಅರಣ್ಯ ಆಧಾರಿತ ಬುಡಕಟ್ಟು ಜನರ ಅಭಿವೃದ್ಧಿಗಾಗಿ 200 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದು , ಅದರಲ್ಲಿ 160 ಕೋಟಿ ರೂ.ಗಳಲ್ಲಿ 8 ಸಾವಿರ ಮನೆ ಕಟ್ಟಲು ಅನುಮೋದನೆ ನೀಡಿದ್ದಾರೆ ಎಂದು ಕರ್ನಾಟಕ ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕ ಟಿ. ಯೋಗೀಶ್ ಹೇಳಿದರು. ನಗರದ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ನಡೆದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.

ಚಾಮರಾಜನಗರ ಜಿಲ್ಲೆಯೊಂದರಿಂದಲೇ 32 ಸಾವಿರ ಮನೆಗಳ ಬೇಡಿಕೆ; ಚಾಮರಾಜನಗರ ಜಿಲ್ಲೆಯೊಂದರಲ್ಲೇ 3 ಸಾವಿರ ಮನೆಗಳ ಬೇಡಿಕೆ ಬಂದಿದೆ. ರಾಜೀವ್‌ಗಾಂಧಿ ಹೌಸಿಂಗ್ ಕಾರ್ಪೋರೇಷನ್‌ನಲ್ಲಿ ಒಂದು ಮನೆ ಕಟ್ಟಲು 2.39 ಲಕ್ಷ ಕೊಡುತ್ತಾರೆ. ಆದರೆ, ಮುಖ್ಯಮಂತ್ರಿಗಳು ಬುಡಕಟ್ಟು ಜನರ ಮನೆ ಕಟ್ಟಲು 1 ಮನೆಗೆ 4 ಲಕ್ಷದ 50 ಸಾವಿರ ನಿಗದಿ ಮಾಡಿದ್ದಾರೆ. ಇದು ಸರಕಾರದ ಆದೇಶವು ಆಗಿದೆ ಎಂದರು.

ಆಶ್ರಮ ಶಾಲೆಗಳಿಗೆ 200 ಶಿಕ್ಷಕರ ನೇಮಕ: ಮೊದಲ ಹಂತದಲ್ಲಿ ಆಶ್ರಮ ಶಾಲೆಗಳಿಗೆ 200 ಶಿಕ್ಷಕರನ್ನು ನೇಮಕ ಮಾಡಲು ತೀರ್ಮಾನಿಸಿದ್ದೇವೆ. ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಬುಡಕಟ್ಟು ಜನರ ವಿಚಾರ, ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಒಂದು ವೇದಿಕೆಯಾಗಿದೆ. ಬುಡಕಟ್ಟು ಸಮುದಾಯದ ಜನರು ಮದ್ಯಪಾನದ ಚಟಕ್ಕೆ ದಾಸರಾಗದೇ ತಮ್ಮ ಅಭಿವೃದ್ಧಿಯ ಜೊತೆಗೆ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬುಡಕಟ್ಟು ಜನರಿಗೆ ಗಟ್ಟಿನೆಲೆಯಾಗುವಂತಹ ಯೋಜನೆ ರೂಪಿಸಬೇಕು: ಪ್ರೊ. ಡಿ. ಆನಂದ್ ಮಾತನಾಡಿ, ಬುಡಕಟ್ಟು ಜನರಿಗೆ ಆಧುನಿಕ ಶಿಕ್ಷಣದ ಅವಶ್ಯಕತೆ ಇದ್ದು, ಸರಕಾರ ಬುಡಕಟ್ಟು ಜನರಿಗೆ ಗಟ್ಟಿನೆಲೆಯಾಗುವಂತಹ ಯೋಜನೆಗಳನ್ನು ರೂಪಿಸಬೇಕು ಎಂದರು. ಈಗ ಆಗಬೇಕಾಗಿರುವ ಅಧ್ಯಯನಗಳು ಎಂದರೆ ಬುಡಕಟ್ಟು ಜನಾಂಗದ ಒಳಿತಿಗಾಗಿ ಅಧ್ಯಯನ ಮಾಡಬೇಕು. ಶಿಕ್ಷಣ ವ್ಯವಸ್ಥೆಯಲ್ಲಿ ಶಾಲಾ ಮಟ್ಟದಿಂದ ವಿ.ವಿ. ವರೆಗೆ ಪಠ್ಯಕ್ರಮದಲ್ಲಿ ಬುಡಕಟ್ಟು ಜನಾಂಗದ ವಿಷಯವನ್ನು ಸೇರಿಸಿ ಅದನ್ನು ಪಾಠ ಮಾಡಲು ಬುಡಕಟ್ಟು ಜನಾಂಗದವರಿಗೆ ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮೈಸೂರು ವಿ.ವಿ. ಸಮಾಜ ಕಾರ್ಯ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ. ಎಚ್.ಪಿ. ಜ್ಯೋತಿ, ಉಪನಿರ್ದೇಶಕಿ ಎಚ್.ಸಿ. ಗಿರಿಜಾಂಬ, ಡಾ. ಕಲಾವತಿ, ಡಾ. ಟಿ.ಎಸ್. ವೆಂಕಟೇಶ್, ಲೆಕ್ಕಾಧಿಕಾರಿ ಬಿ.ಎಸ್. ಭವ್ಯ, ಕಚೇರಿ ಅಧೀಕ್ಷಕಿ ಎಂ.ವಿ. ನಾಗರತ್ನ, ಸಿಬ್ಬಂದಿ ಇದ್ದರು.

sambrama prabha editor suresh kt

LEAVE A REPLY

Please enter your comment!
Please enter your name here