Updated By: Priyalachhi
ಬೆಂಗಳೂರು: ರಾಜ್ಯದಲ್ಲಿ ನವೆಂಬರ್ ಕ್ರಾಂತಿ ಚರ್ಚೆ, ಅಧಿಕಾರ ಹಂಚಿಕೆಯ ಒತ್ತಾಯ, ಬಣ ರಾಜಕೀಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಧ್ಯಪ್ರವೇಶಿಸುವ ಅನಿವಾರ್ಯತೆ ಹೈಕಮಾಂಡ್ಗೆ ಎದುರಾಗಿದೆ. ಆದಷ್ಟು ಬೇಗ ಹೈಕಮಾಂಡ್ ರಾಜ್ಯದ ಬಣ ರಾಜಕೀಯ ಕ್ಷಿಪ್ರ ಬೆಳವಣಿಗೆಯನ್ನು ತಣಿಸುವ ಸಂದಿಗ್ಧತೆ, ಅನಿವಾರ್ಯತೆಯಲ್ಲಿ ಸಿಲುಕಿದೆ. ಇಲ್ಲವಾದರೆ ಪಕ್ಷಕ್ಕೆ ಹಾನಿಯಾಗುವ ಸಾಧ್ಯತೆಯೂ ಗೋಚರಿಸಿದೆ.
ರಾಜ್ಯ ರಾಜಕೀಯದಲ್ಲಿ ನವೆಂಬರ್ ಕ್ರಾಂತಿಯ ಚರ್ಚೆ ಇದೀಗ ಇನ್ನಷ್ಟು ಹೆಚ್ಚಾಗಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 2.5 ವರ್ಷ ಪೂರ್ಣಗೊಳಿಸುತ್ತಿದ್ದ ಹಾಗೆಯೇ ಅಧಿಕಾರ ಹಂಚಿಕೆಯ ಒಳಸುಳಿ ಹೊರಚಿಮ್ಮುವ ಲಕ್ಷಣ ಕಾಣುತ್ತಿದೆ. ಡಿ.ಕೆ.ಶಿವಕುಮಾರ್ ಬಣದ ಕೆಲವರು ದೆಹಲಿ ಯಾತ್ರೆ ನಡೆಸಿದ್ದರೆ, ಇತ್ತ ಸಿಎಂ ಆಪ್ತ ಬಣದ ಸಚಿವರು ಡಿನ್ನರ್ ಮೀಟಿಂಗ್ ಆರಂಭಿಸಿದ್ದಾರೆ.
ಅಧಿಕಾರ ಹಂಚಿಕೆ ಚರ್ಚೆ ತೀವ್ರ ಸ್ವರೂಪ ಪಡೆಯುತ್ತಿದ್ದು, ಸಿದ್ದರಾಮಯ್ಯ ನಾನೇ ಸಿಎಂ ಆಗಿ ಮುಂದುವರಿಯುತ್ತೇನೆ. ನಾನೇ ಮುಂದಿನ ಬಜೆಟ್ ಮಂಡಿಸುತ್ತೇನೆ ಎನ್ನುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಇತ್ತ ಡಿ.ಕೆ.ಬ್ರದರ್ಸ್ ಮನೆಯಲ್ಲೇ ಕೂತು ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚೆ ನಡೆಸಿದ್ದು, ಕೆಲ ಶಾಸಕರ ಜೊತೆಗೂ ಚರ್ಚಿಸಿದ್ದಾರೆ.
ಸಂದಿಗ್ಧ, ಅನಿವಾರ್ಯ ಸ್ಥಿತಿಯಲ್ಲಿ ‘ಕೈ’ ಹೈಕಮಾಂಡ್: ಇತ್ತ ರಾಜ್ಯದಲ್ಲಿ ಬಣ ರಾಜಕೀಯ, ಅಧಿಕಾರ ಹಂಚಿಕೆಯ ಮೇಲಾಟ ತೀವ್ರ ಸ್ವರೂಪ ಪಡೆದಿದ್ದು, ಚೆಂಡು ಇದೀಗ ಹೈಕಮಾಂಡ್ ಅಂಗಳದಲ್ಲಿದೆ. ಕೈ ಪಾಳಯದಲ್ಲಿನ ಕ್ಷಿಪ್ರ ರಾಜಕೀಯ ಬೆಳವಣಿಗೆ ಹೈಕಮಾಂಡನ್ನೂ ಸಂದಿಗ್ದತೆಗೆ ಸಿಲುಕಿಸಿದೆ. ಅಧಿಕಾರ ಹಂಚಿಕೆಯ ಚರ್ಚೆಯ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಬಣಗಳ ಮಧ್ಯೆ ರಾಜಕೀಯ ಮುನ್ನಲೆಗೆ ಬರುತ್ತಿದೆ. ಡಿ.ಕೆ.ಶಿವಕುಮಾರ್ ಆಪ್ತರ ಬಣ ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿಗೆ ಹೋಗುವ ಮೂಲಕ ಬಣ ರಾಜಕೀಯದ ಒಳಸುಳಿಯನ್ನು ಹೊರ ಬರುವಂತೆ ಮಾಡಿದೆ.
ಸಿದ್ದರಾಮಯ್ಯ ಆಪ್ತ ಬಣವೂ ಡಿನ್ನರ್ ಮೀಟಿಂಗ್ ಮಾಡಿ ತಮ್ಮದೇ ಕಾರ್ಯತಂತ್ರ ರೂಪಿಸಲು ಮುಂದಾಗಿದೆ. ಅಧಿಕಾರ ಹಸ್ತಾಂತರವಾದರೆ ಏನು, ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆನೂ ಈ ಬಣದಿಂದ ಚರ್ಚೆ ನಡೆಯುತ್ತಿದೆ. ಹೀಗಾಗಿ ಹೈಕಮಾಂಡ್ ಬಾಗಿಲಿಗೆ ಕಾಂಗ್ರೆಸ್ ಪಾಳಯದ ಕ್ಷಿಪ್ರ ರಾಜಕೀಯ ಬೆಳವಣಿಗೆ ತಲುಪಿದೆ. ಸಿಎಂ ಬಣ ಹಾಗೂ ಡಿಸಿಎಂ ಬಣವನ್ನು ಮನವೊಲಿಸುವ ಸಂದಿಗ್ದತೆಯಲ್ಲಿ ಹೈಕಮಾಂಡ್ ಇದೆ.
ಹೈಕಮಾಂಡ್ ಮೌನವಾಗಿದ್ದರೆ ದೊಡ್ಡ ಕ್ರಾಂತಿ ಭೀತಿ: ಕಾಂಗ್ರೆಸ್ ಪಾಳಯದಲ್ಲಿ ಕಂಡು ಬಂದಿರುವ ಕ್ಷಿಪ್ರ ರಾಜಕೀಯ ವಿಪ್ಲವದ ಬಗ್ಗೆ ಹೈಕಮಾಂಡ್ ಮೌನವಾಗಿದ್ದರೆ ಅದು ದೊಡ್ಡ ಕ್ರಾಂತಿಯಾಗಿ ಪರಿವರ್ತನೆಯಾಗುವುದರಲ್ಲಿ ಅನುಮಾನ ಇಲ್ಲ. ಆದ್ದರಿಂದ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂಬುದು ಕಾಂಗ್ರೆಸ್ ಪಾಳಯದಲ್ಲಿ ವ್ಯಕ್ತವಾಗುತ್ತಿರುವ ಭೀತಿ. ಉಭಯ ನಾಯಕರನ್ನು ಕೂರಿಸಿ ಚರ್ಚೆ ನಡೆಸಿ, ಉದ್ಭವಿಸಿರುವ ಗೊಂದಲ ನಿವಾರಿಸುವುದು ಅನಿವಾರ್ಯ ಎಂಬುದು ಕಾಂಗ್ರೆಸ್ ಪಾಳಯದಲ್ಲಿನ ಹಲವರ ಒತ್ತಾಸೆ. ಇಲ್ಲವಾದರೆ ಬಣ ರಾಜಕೀಯ ಸ್ಫೋಟಗೊಂಡು ಅದು ಕ್ರಾಂತಿ ಸ್ವರೂಪ ಪಡೆದು ರಾಜ್ಯ ಕಾಂಗ್ರೆಸ್ಗೆ ದೊಡ್ಡ ಆಘಾತ ನೀಡಲಿದೆ ಎಂಬುದು ಕಾಂಗ್ರೆಸ್ ಹಿರಿಯ ಮುಖಂಡರ ಆತಂಕ.
ಬೇರೆ ರಾಜ್ಯಗಳಲ್ಲಿ ಆದಂತೆ ಕರ್ನಾಟಕದಲ್ಲೂ ಕಾಂಗ್ರೆಸ್ ಪಕ್ಷ ನಾಯಕತ್ವ ಬಂಡಾಯ ಏಳುವ ಭೀತಿ ಹೊಂದಿದೆ. ಹೈಕಮಾಂಡ್ ಎಚ್ಚರಿಕೆಯ ಮಾತುಗಳು ಕಾಂಗ್ರೆಸ್ ಬಣ ರಾಜಕೀಯವನ್ನು ಮುಂಬರುವ ದಿನಗಳಲ್ಲಿ ತಣ್ಣಗಾಗಿಸುವ ಸಾಧ್ಯತೆ ಕ್ಷೀಣವಾಗಿದೆ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ಗೆ ಒಂದು ನಿರ್ಣಾಯಕ ತೀರ್ಮಾನ ಕೈಗೊಳ್ಳುವ ಅನಿವಾರ್ಯತೆ ಎದುರಾಗಿದೆ. ಹೈಕಮಾಂಡ್ ಮಧ್ಯ ಪ್ರವೇಶಿಸದೇ ಇದ್ದರೆ ಬಣ ರಾಜಕೀಯ ತೀವ್ರ ಸ್ವರೂಪಕ್ಕೆ ತಿರುಗುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಶಾಸಕರ ಬಣಗಳು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಮನೆಗೆ ತೆರಳುತ್ತಿದ್ದು, ಗುಂಪುಗಾರಿಕೆ ಹೆಚ್ಚಾಗಿ ಪವರ್ ಫೈಟ್ ತೀವ್ರವಾಗುವ ಸಾಧ್ಯತೆ ಇದೆ. ಕಾಂಗ್ರೆಸ್ ಪವರ್ ಫೈಟನ್ನು ಸೂಕ್ಷ್ಮವಾಗಿ ನಿಭಾಯಿಸುವ ಕಠಿಣ ಸವಾಲು ಹೈಕಮಾಂಡ್ನದ್ದಾಗಿದೆ. ಎರಡು ಬಣಗಳಿಗೂ ಸಮಾಧಾನಕರ ಪರಿಹಾರ ಹುಡುಕುವ ಸಂದಿಗ್ದತೆ, ಅನಿವಾರ್ಯತೆ ಹೈಕಮಾಂಡ್ನದ್ದಾಗಿದೆ.
ಅಧಿಕಾರ ಹಸ್ತಾಂತರದ ಗೊಂದಲದ ಮಧ್ಯೆ ಹೈಕಮಾಂಡ್ ಮಧ್ಯ ಪ್ರವೇಶಿಸುವಂತೆ ಹಲವು ಹಿರಿಯ ಕಾಂಗ್ರೆಸ್ ನಾಯಕರು ಒತ್ತಾಯಿಸುತ್ತಿದ್ದಾರೆ. ಹಿರಿಯ ಸಚಿವ ಕೆ.ಹೆಚ್.ಮುನಿಯಪ್ಪ ಹೈಕಮಾಂಡ್ ಮಧ್ಯಪ್ರವೇಶಕ್ಕೆ ಬಲವಾಗಿ ಒತ್ತಾಯಿಸುತ್ತಿದ್ದಾರೆ. ನಾಯಕತ್ವ ಬದಲಾವಣೆ ಬಗ್ಗೆ ಪದೇ ಪದೆ ಮಾತನಾಡುವುದು, ಗುಂಪುಗಾರಿಕೆ ಮಾಡುವುದರಿಂದ ಪಕ್ಷಕ್ಕೂ ಹಾನಿ, ಸರ್ಕಾರಕ್ಕೂ ಹಾನಿಯಾಗಲಿದೆ. ಹೀಗೆ ಆಗಬಾರದು ಎಂದು ನಾವು ಹಿರಿಯ ನಾಯಕರು ಹೈಕಮಾಂಡನ್ನು ಒತ್ತಾಯಿಸುತ್ತೇವೆ. ಹೈಕಮಾಂಡ್ ಒಂದು ತೀರ್ಮಾನ ಮಾಡಬೇಕು ಅಥವಾ ಎಐಸಿಸಿ ಪ್ರಧಾನ ಕಾರ್ಯದರ್ಶಿ ಬೆಂಗಳೂರಿಗೆ ಬಂದು ಎಲ್ಲರನ್ನೂ ಕೂರಿಸಿ ಹೈಕಮಾಂಡ್ ನಿರ್ಣಯ ಹೀಗಿದೆ ಎಂದು ಹೇಳಬೇಕು. ಆ ಮೂಲಕ ಗೊಂದಲ ನಿವಾರಿಸಿ, ಸರ್ಕಾರ ಸುಲಲಿತವಾಗಿ ನಡೆಯಲು ದಾರಿ ಮಾಡಿಕೊಡಬೇಕು ಎಂದು ಖಡಕ್ ಆಗಿ ಆಗ್ರಹಿಸಿದ್ದಾರೆ.
ಹಿರಿಯ ಶಾಸಕ ಬಾಲಕೃಷ್ಣ ಕೂಡ ಇದೇ ಒತ್ತಾಯ ಮಾಡಿದ್ದಾರೆ. ಡಿಕೆಶಿ ಅವರಿಗೆ ಅಧಿಕಾರ ಹಂಚಿಕೆ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಇದರ ಬಗ್ಗೆ ಹೈಕಮಾಂಡ್ ಒಂದು ಇತ್ಯರ್ಥ ಮಾಡಬೇಕು. ಹೈಕಮಾಂಡ್ ಕೂಡಲೇ ಮಧ್ಯ ಪ್ರವೇಶ ಮಾಡಬೇಕು. ಇಲ್ಲದಿದ್ದರೆ ಪಕ್ಷದಲ್ಲಿ, ಕಾರ್ಯಕರ್ತರಲ್ಲಿ ಗೊಂದಲ ಆಗುತ್ತದೆ. ಗೊಂದಲ ಈಗಾಗಲೇ ಆಗಿರುವ ಹಿನ್ನೆಲೆಯಲ್ಲಿ ಇದಕ್ಕೆ ಹೈಕಮಾಂಡ್ ಒಂದು ಅಂತಿಮ ರೂಪ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.



