Updated By: Priyalachhi
ಕೊಯಮತ್ತೂರು: ಸಾವಯವ ಕೃಷಿಗೆ ಭಾರತ ಜಾಗತಿಕ ಕೇಂದ್ರವಾಗುವತ್ತ ಸಾಗುತ್ತಿದೆ. ಇದು ದೇಶದ ಸ್ಥಳೀಯ ಮತ್ತು ಸಾಂಪ್ರದಾಯಿಕ ವಿಧಾನ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA)ದ ಅದ್ಭುತ ಗೆಲುವಿನ ನಂತರ ತಮಿಳುನಾಡಿಗೆ ಆಗಮಿಸಿದಾಗ ರೈತರು ಶಾಲುಗಳನ್ನು ಬೀಸುತ್ತಿರುವುದನ್ನು ನೋಡಿದರೆ ನಾನು ಬರುವುದಕ್ಕೂ ಮೊದಲೇ ‘ಬಿಹಾರದ ಗಾಳಿ’ ತಮಿಳುನಾಡಿಗೆ ಬಂದಂತೆ ಭಾಸವಾಗುತ್ತಿದೆ ಎಂದರು.
ದಕ್ಷಿಣ ಭಾರತ ನೈಸರ್ಗಿಕ ಕೃಷಿ ಶೃಂಗಸಭೆ 2025 ಮತ್ತು ಪ್ರದರ್ಶನವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ, ಒಂಬತ್ತು ಕೋಟಿ ರೈತರಿಗೆ ನೆರವು ನೀಡುವ ಪಿಎಂ-ಕಿಸಾನ್ ಯೋಜನೆಯ 21ನೇ ಕಂತಿನ ಒಟ್ಟು ಮೊತ್ತ 18,000 ಕೋಟಿಗೂ ಹೆಚ್ಚು ಹಣವನ್ನು ರೈತರ ಖಾತೆಗಳಿಗೆ ವರ್ಗಾಯಿಸಿದರು. ತಮಿಳುನಾಡಿನಲ್ಲಿ ಎಐಎಡಿಎಂಕೆ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (DMK) ನೇತೃತ್ವದ ಮೈತ್ರಿಕೂಟದ ವಿರುದ್ಧ ಸ್ಪರ್ಧಿಸಲಿದೆ. ವಿರೋಧ ಪಕ್ಷಗಳ ಮೈತ್ರಿಕೂಟವು ಎಂ.ಕೆ ಸ್ಟಾಲಿನ್ ನೇತೃತ್ವದ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದೆ.
ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಮೋದಿ, ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಅತಿಯಾದ ಬಳಕೆಯು ಮಣ್ಣಿನ ಫಲವತ್ತತೆ ಕುಸಿತಕ್ಕೆ ಕಾರಣವಾಗಿದೆ. ಸಾವಯವ ಕೃಷಿಗೆ ಸಂಪೂರ್ಣ ಬೆಂಬಲ ನೀಡಲಾಗುತ್ತಿದೆ ಎಂದು ಹೇಳಿದರು. ಬೆಳೆ ವೈವಿಧ್ಯೀಕರಣ ಮತ್ತು ಸಾವಯವ ಕೃಷಿಯು ಮಣ್ಣಿನ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರವಾಗಿದೆ ಎಂದು ಅವರು ಹೇಳಿದರು. ಹವಾಮಾನ ಬದಲಾವಣೆಯ ಸವಾಲುಗಳನ್ನು ಪರಿಹರಿಸಲು ಸಾವಯವ ಕೃಷಿಯೂ ಸಹಾಯ ಮಾಡುತ್ತದೆ ಎಂದು ಮೋದಿ ಹೇಳಿದರು.



