ಕಬ್ಬು ಬೆಳೆಗಾರರ ಸಮಸ್ಯೆಗೆ ರಾಜ್ಯ ಸರ್ಕಾರವೇ ನೇರ ಹೊಣೆ: ಸಿಎಂಗೆ ಜೋಶಿ ಬಹಿರಂಗ ಪತ್ರ

0
49

Updated By: Priyalachhi

ನವದೆಹಲಿ/ಹುಬ್ಬಳ್ಳಿ: ಕರ್ನಾಟಕದ ಕಬ್ಬು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತಂತೆ ರಾಜ್ಯ ಸರ್ಕಾರದ ಲೋಪಗಳ ಬಗ್ಗೆ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಜೊತೆಗೆ, ಕೇಂದ್ರದ ಸುಧಾರಣಾ ಕ್ರಮಗಳನ್ನು ಮರೆಮಾಚುತ್ತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದ್ದಾರೆ.

ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ. ಕೇಂದ್ರವು ಬೆಲೆ ಸ್ಥಿರತೆ ಮತ್ತು ಮಾರುಕಟ್ಟೆ ವೈವಿಧ್ಯತೆ ಎರಡನ್ನೂ ಉತ್ತಮವಾಗಿಸಿದೆ. ಆದರೆ ಪಾವತಿ ಜಾರಿ, ನೀರಾವರಿ ಮತ್ತು ಸಬ್ಸಿಡಿ ವಿತರಣೆಯಂತಹ ಸ್ಥಳೀಯ ಅನುಷ್ಠಾನದ ಹೊಣೆ ರಾಜ್ಯ ಸರ್ಕಾರದ ಮೇಲಿದೆ ಎಂಬುದನ್ನು ಮರೆಯದಿರಿ ಎಂದು ಸಿಎಂಗೆ ತಿರುಗೇಟು ನೀಡಿದ್ದಾರೆ.

‎ಕೇಂದ್ರ ಸರ್ಕಾರ ರೈತರ ಕಲ್ಯಾಣಕ್ಕೆ, ಸಕ್ಕರೆ ವಲಯದಲ್ಲಿ ಸ್ಥಿರತೆ ಕಾಪಾಡಲು ಹಾಗೂ ದೀರ್ಘಕಾಲೀನ ಸುಸ್ಥಿರತೆ ಮತ್ತು ಸಮೃದ್ಧಿಯನ್ನು ಸೃಷ್ಟಿಸುವ ನೀತಿಗಳನ್ನು ಮುನ್ನಡೆಸಲು ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿರುವ ಜೋಶಿ, ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳು ವಾಸ್ತವದಲ್ಲಿ ಎದುರಿಸುತ್ತಿರುವ ಸಮಸ್ಯೆಗಳಿಗೆ ರಾಜ್ಯ ಸರ್ಕಾರವೇ ಕಾರಣ ಎಂದು ಕೆಲ ಉದಾಹರಣೆಗಳ ಸಮೇತ ಪತ್ರ ಸಮರ ನಡೆದ್ದಾರೆ.

ರಾಜ್ಯದಲ್ಲಿ ಹೊಸ PPA ಕೊರತೆ: ‎ನೆರೆಯ ಮಹಾರಾಷ್ಟ್ರ 2025ರ ಏಪ್ರಿಲ್‌ನಲ್ಲಿ ವಿದ್ಯುತ್ ಖರೀದಿ ಹೊಸ ಒಪ್ಪಂದವನ್ನು (PPA) ಜಾರಿಗೆ ತಂದಿದೆ. ಆದರೆ, ಕರ್ನಾಟಕ ಮಾತ್ರ ಇನ್ನೂ 2017-18ರ PPAಯಲ್ಲೇ ಇದೆ. PPA ಉತ್ಪಾದನಾ ಘಟಕಗಳು ಮತ್ತು ಸಕ್ಕರೆ ಕಾರ್ಖಾನೆಗಳಿಗೆ ಭರವಸೆಯ ಆದಾಯ ಕಲ್ಪಿಸುತ್ತದೆ. ಬ್ಯಾಂಕ್‌ಗಳಿಂದ ಹಣಕಾಸು ನೆರವು ಪಡೆಯಲು ಅನುವು ಮಾಡಿಕೊಡುತ್ತದೆ. ಆದರೆ, ಕರ್ನಾಟಕದಲ್ಲಿ ವಿದ್ಯುತ್‌ ಖರೀದಿ ಹೊಸ ಒಪ್ಪಂದದ ಕೊರತೆ ಸಕ್ಕರೆ ಕಾರ್ಖಾನೆಗಳನ್ನು ಸ್ಥಿರ ಆದಾಯದಿಂದ ವಂಚಿತಗೊಳಿಸಿದೆ ಎಂದು ಹೇಳಿದ್ದಾರೆ ಸಚಿವ ಜೋಶಿ.

ವಿದ್ಯುತ್‌ ದರ ಏರಿಕೆ; ಆದಾಯಕ್ಕೆ ಕುತ್ತು: ಇನ್ನು, ರಾಜ್ಯ ಸರ್ಕಾರ ವಿದ್ಯುತ್ ದರವನ್ನು 2023ರ ಏಪ್ರಿಲ್‌ನಲ್ಲಿ ಪ್ರತಿ ಯೂನಿಟ್‌ಗೆ 70 ಪೈಸೆ ಮತ್ತು 2025ರ ಮತ್ತೆ ಏಪ್ರಿಲ್‌ನಲ್ಲಿ ಮತ್ತೊಮ್ಮೆ ಸರ್‌ಚಾರ್ಜ್ ಆಗಿ ಪ್ರತಿ ಯೂನಿಟ್‌ಗೆ 36 ಪೈಸೆ ಹೀಗೆ ಎರಡು ಬಾರಿ ಹೆಚ್ಚಿಸಿತು. ಇದು ಸಕ್ಕರೆ ಕಾರ್ಖಾನೆಗಳು ಮಾತ್ರವಲ್ಲ ರೈತರ ಆದಾಯವನ್ನು ಮತ್ತಷ್ಟು ಕುಗ್ಗಿಸಿದೆ ಎಂದಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ಎರಡು ಬಾರಿ ವಿದ್ಯುತ್‌ ದರ ಏರಿಕೆಯಿಂದಾಗಿ ಸಾರಿಗೆ ವೆಚ್ಚ ಟನ್‌ಗೆ ₹750-₹800ಕ್ಕೆ ಏರಿದೆ. ಅಲ್ಲದೇ, ಕರ್ನಾಟಕ ಮೋಟಾರು ವಾಹನಗಳ ತೆರಿಗೆ (ತಿದ್ದುಪಡಿ) ಕಾಯಿದೆ 2024ರ ಅಡಿ ಹೊಸ ವಾಣಿಜ್ಯ ವಾಹನಗಳ ಮೇಲೆ ಹೆಚ್ಚುವರಿ ಶೇ.3ರಷ್ಟು ರಸ್ತೆ ತೆರಿಗೆ ಸಹ ವಿಧಿಸಿದ್ದು, ಇದು ರೈತರಿಗೆ ಮೂಲಭೂತ ವೆಚ್ಚಗಳನ್ನು ಹೆಚ್ಚಿಸಿದೆ ಎಂದು ಬರೆದಿದ್ದಾರೆ.

ಕೇಂದ್ರದ FRP ಒಂದು ಕನಿಷ್ಠ ಮಾನದಂಡವಾಗಿರುತ್ತದೆ. ಆಯಾ ರಾಜ್ಯಗಳು ಬೆಳೆಗಾರರ ಹಿತ ರಕ್ಷಣೆಗಾಗಿ ಹೆಚ್ಚಿನ ರಾಜ್ಯ ಸಲಹಾ ಬೆಲೆ (SAP) ಘೋಷಿಸಲು ಮುಕ್ತವಾಗಿವೆ. ಆದರೆ, ಕರ್ನಾಟಕ ಸರ್ಕಾರ ಮಾತ್ರ ಈವರೆಗೂ SAP ಅನ್ನು ಘೋಷಿಸಿಯೇ ಇಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಜೋಶಿ ಜರಿದಿದ್ದಾರೆ.

ಗ್ಯಾರೆಂಟಿಗಳಿಗಾಗಿ ಉತ್ಪಾದಕ ವಲಯವನ್ನೇ ಹಿಂಡಿದ ಸರ್ಕಾರ: ರಾಜ್ಯ ಸರ್ಕಾರ ರೈತರ ಮೇಲಿನ ಹೊರೆ ಇಳಿಸುವ ಕೆಲಸ ಮಾಡಬೇಕಿತ್ತು. ಆದರೆ ಬರೀ ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ, ಆರ್ಥಿಕತೆಯ ಉತ್ಪಾದಕ ವಲಯಗಳನ್ನು ಹಿಂಡಿ ಹಿಪ್ಪೆ ಮಾಡಿದೆ. ಸಕ್ಕರೆ ಕಾರ್ಖಾನೆಗಳಿಗೆ ನೀರು ಸರಬರಾಜು ಮತ್ತು ಲಿಫ್ಟಿಂಗ್ ಶುಲ್ಕವನ್ನು ವರ್ಷಕ್ಕೆ ₹5 ಲಕ್ಷದಿಂದ ₹1 ಕೋಟಿಗೆ ಏರಿಸಿದ್ದಲ್ಲದೆ, ಪ್ರತಿ ಯೂನಿಟ್‌ಗೆ ವಿದ್ಯುತ್​​ಗೆ 60 ಪೈಸೆ ಎನರ್ಜಿ ಸೆಸ್ ಸಹ ವಿಧಿಸಿದೆ. ಡೀಸೆಲ್ ಮೇಲಿನ ವ್ಯಾಟ್ (VAT) ಅನ್ನು ಶೇ.50ರಷ್ಟು ಹೆಚ್ಚಿಸಿದೆ. ಹೆಚ್ಚುವರಿ ಆದಾಯವಾಗಿ ₹7,000 – ₹7,500 ಕೋಟಿ ಗಳಿಸಿದೆ. 30ಕ್ಕೂ ಹೆಚ್ಚು ಉತ್ಪನ್ನಗಳ ಮೇಲೆ ಶೇ.276ರಷ್ಟು ತೆರಿಗೆಗಳೊಂದಿಗೆ, ಈ ವರ್ಷ ಅಬಕಾರಿ ಒಂದರಿಂದಲೇ ₹39,000 ಕೋಟಿ ಸಂಗ್ರಹಿಸುವ ನಿರೀಕ್ಷೆ ಹೊಂದಿರುವ ರಾಜ್ಯ ಸರ್ಕಾರ, ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳ ಬಗ್ಗೆ ಅಸಡ್ಡೆ ತೋರುತ್ತಿದೆ ಎಂದು ಸಿಎಂಗೆ ಬರೆದ ಪತ್ರದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‎ರಾಜ್ಯ ಸರ್ಕಾರ ಅನುಸರಿಸಿದ ಹಣಕಾಸು ನೀತಿ ಮತ್ತು ನಿಯಂತ್ರಕ ಕ್ರಮಗಳು ವಾಸ್ತವದಲ್ಲಿ ಸಕ್ಕರೆ ಕಾರ್ಖಾನೆ ಹಾಗೂ ಕಬ್ಬು ಬೆಳೆಗಾರರು ಇಬ್ಬರ ಸಂಕಷ್ಟವನ್ನೂ ಉಲ್ಬಣಿಸಿದೆ. ಹೀಗೆ ತಮ್ಮ ಸರ್ಕಾರದ ಲೋಪವನ್ನು ಕೇಂದ್ರದ ಮೇಲೆ ಹೊರಿಸುವುದು ಎಷ್ಟರ ಮಟ್ಟಿಗೆ ಸರಿ? ಎಂದು ಸಚಿವ ಪ್ರಲ್ಹಾದ ಜೋಶಿ ಪ್ರಶ್ನಿಸಿದ್ದಾರೆ.

sambrama prabha editor suresh kt

LEAVE A REPLY

Please enter your comment!
Please enter your name here