Updated By: Priyalachhi
ಬೆಳಗಾವಿ: 2025ರ ಕರ್ನಾಟಕ ಅನುಸೂಚಿತ ಜಾತಿಗಳ (ಉಪವರ್ಗೀಕರಣ) ವಿಧೇಯಕ ಸೇರಿದಂತೆ 3 ವಿಧೇಯಕಗಳು ವಿಧಾನಸಭೆಯಲ್ಲಿ ಮಂಡನೆಯಾದವು. ಅಲ್ಲದೆ, ಐದು ಪ್ರಮುಖ ವಿಧೇಯಕಗಳು ಅಂಗೀಕೃತಗೊಂಡವು.
ಪರಿಶಿಷ್ಟ ಜಾತಿಗೆ ಲಭ್ಯವಿರುವ ಶೇ.17ರಷ್ಟು ಮೀಸಲಾತಿಯ ಪೈಕಿ 18 ಉಪಜಾತಿಗಳಿರುವ ಎಡಗೈ ಸಮುದಾಯಕ್ಕೆ ಶೇ.6ರಷ್ಟು ಮೀಸಲಾತಿ ಹಾಗೂ 20 ಉಪವಜಾತಿಗಳಿರುವ ಬಲಗೈ ಸಮುದಾಯಕ್ಕೆ ಶೇ.6ರಷ್ಟು ಮೀಸಲಾತಿ ಮತ್ತು 63 ಉಪಜಾತಿಗಳಿರುವ ಇತರ ಸಮುದಾಯಕ್ಕೆ ಶೇ.5ರಷ್ಟು ಒಳ ಮೀಸಲಾತಿ ವರ್ಗೀಕರಣ ಮಾಡುವ 2025ರ ಕರ್ನಾಟಕ ಅನುಸೂಚಿತ ಜಾತಿಗಳ (ಉಪವರ್ಗೀಕರಣ) ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು. ವಿಧೇಯಕ ಮೂಲಕ ನೇಮಕಾತಿ ಮತ್ತು ಮುಂಬಡ್ತಿಗೆ ಅವಕಾಶ ಕಲ್ಪಿಸಲಿದೆ.
ಉಳಿದಂತೆ, ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ (ತಿದ್ದುಪಡಿ) ವಿಧೇಯಕ, ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕಗಳು ವಿಧಾನಸಭೆಯಲ್ಲಿ ಮಂಡನೆಯಾದವು.
ಐದು ಮಸೂದೆಗಳು ಅಂಗೀಕಾರ: ವಿಧಾನಸಭೆಯಲ್ಲಿ ಬುಧವಾರ ಐದು ಪ್ರಮುಖ ಮಸೂದೆಗಳನ್ನು ಅಂಗೀಕರಿಸಲಾಯಿತು. ಅದರಲ್ಲಿ ಪ್ರಮುಖವಾಗಿ ವಿಷಪೂರಿತ ಔಷಧ, ಡಿಕಂಪೋಸ್, ಟಾಕ್ಸಿಕ್ ಔಷಧಗಳ ಮಾರಾಟ ಮಾಡಿದರೆ ಜಾಮೀನು ರಹಿತ ಪ್ರಕರಣವೆಂದು ಪರಿಗಣನೆ ಸೇರಿ ಕಠಿಣ ಶಿಕ್ಷೆ ವಿಧಿಸುವ ಔಷಧ ಮತ್ತು ಪ್ರಸಾಧನ ಸಾಮಗ್ರಿ ತಿದ್ದುಪಡಿ ವಿಧೇಯಕ 2025 ವಿಧಾನಸಭೆಯಲ್ಲಿ ಅಂಗೀಕಾರವಾಯಿತು.
ಈ ಬಗ್ಗೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಇದರ ಮುಖ್ಯ ಉದ್ದೇಶ ಕಳಪೆ ಮತ್ತು ನಕಲಿ ಔಷಧ ಜಾಲ ತಲೆ ಎತ್ತದಂತೆ ನೋಡಿಕೊಳ್ಳುವುದು. ಎಲ್ಲ ಔಷಧಗಳನ್ನು ಸೆಂಟ್ರಲ್ ಡ್ರಗ್ ಲ್ಯಾಬ್ನಲ್ಲಿ ಕಡೆಯದಾಗಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಕೇಂದ್ರ ಸರ್ಕಾರದೊಂದಿಗೆ ಚರ್ಚೆ ನಡೆಸಿ, ರಾಜ್ಯದಲ್ಲಿಯೇ ಲ್ಯಾಬ್ ಮಾಡುತ್ತಿದ್ದೇವೆ. ಔಷಧ ಪರೀಕ್ಷೆಯಲ್ಲಿ ಆಗುತ್ತಿದ್ದ ವಿಳಂಬ ತಪ್ಪಿಸುವುದು ಇದರ ಉದ್ದೇಶ. ಎಲ್ಲದಕ್ಕೂ ಸರಿಯಾದ ಸಪ್ಲೈ ಚೈನ್ ಇರಬೇಕು, ಇಲ್ಲದಿದ್ದರೆ ಅಡಲ್ಟ್ರೇಟೆಡ್ ಔಷಧ ಮಾರುಕಟ್ಟೆಗೆ ಬರುವ ಸಾಧ್ಯತೆ ಇರುತ್ತದೆ. ಈ ಮೊದಲು ಕೇಸ್ ಹಾಕಿದರೆ ಸುಲಭದಲ್ಲಿ ತಪ್ಪಿಸಿಕೊಳ್ಳಲು ಅವಕಾಶ ಸಿಗುತ್ತಿತ್ತು. ಈ ಕಾಯ್ದೆ ಮೂಲಕ ಔಷಧ ಎಲ್ಲಿಂದ ಎಲ್ಲಿಗೆ ಬರುತ್ತದೆ ಎನ್ನುವುದಕ್ಕೆ ಸರಿಯಾದ ಮಾಹಿತಿಯನ್ನು ನೀಡಬೇಕಾಗುತ್ತದೆ ಎಂದರು.
ವಿಷಪೂರಿತ ಔಷಧ, ಡಿಕಂಪೋಸ್, ಟಾಕ್ಸಿಕ್ ಔಷಧಗಳ ಮಾರಾಟ ಮಾಡಿದರೆ ಜಾಮೀನು ರಹಿತ ಪ್ರಕರಣ ಆಗುತ್ತದೆ. ಸುಲಭದಲ್ಲಿ ಸೂಕ್ತ ಸಾಕ್ಷಿಗಳ ಕೊರತೆಯಿಂದ ಪೊಲೀಸ್ ಸ್ಟೆಷನ್ನಲ್ಲಿಯೇ ಜಾಮೀನು ಪಡೆಯುತ್ತಿದ್ದರು. ಹಾಗೆಯೇ ಆಯುಷ್, ಯುನಾನಿ ಮತ್ತಿತರ ಔಷಧಗಳಿಗೂ ಲೈಸೆನ್ಸ್ ಪಡೆಯುವಂತೆ ಮಾಡುತ್ತೇವೆ. ಇದರೊಂದಿಗೆ ಕಲಬೆರಕೆ ಔಷಧಗಳ ಪ್ರಕರಣಗಳಲ್ಲಿ, ಕಲಬೆರಕೆ ಔಷಧಗಳನ್ನು ಯಾರಿಂದ ವಶಪಡಿಸಿಕೊಳ್ಳಲಾಗಿದೆಯೋ, ಅವರೇ ಕಲಬೆರಕೆ ವಸ್ತುಗಳ ತಯಾರಕರು ಯಾರೆಂದು ಹಾಗೂ ತಾವು ತಯಾರಿಸಿಲ್ಲ ಎನ್ನುವ ರುಜುವಾತುಪಡಿಸುವ ಭಾರವನ್ನು ತಿದ್ದುಪಡಿ ವಿಧೇಯದಲ್ಲಿ ತರಲಾಗಿದೆ. ಪ್ರಕರಣ 30ರ ಅಡಿ ದಂಡನೆಗಳನ್ನು ಜೀವಾವಧಿ ಕಾರಾಗೃಹ ವಾಸಕ್ಕೆ ಹೆಚ್ಚಿಸಲಾಗುವುದು. ಔಷಧಗಳು ಎಲ್ಲಿ, ಎಷ್ಟು ತಯಾರಿಸಿದರು, ಎಷ್ಟು ಮಾರಾಟ ಆಗಿದೆ ಎಂಬೆಲ್ಲ ಮಾಹಿತಿ ನಮಗೆ ಸರಿಯಾಗಿ ದೊರಕಬೇಕು ಎನ್ನುವುದು ನಮ್ಮ ಉದ್ದೇಶ ಎಂದು ತಿಳಿಸಿದರು.
ಉಳಿದಂತೆ, ವಾಹನಗಳ ನೋಂದಣಿ ಮಾಡುವ ಸಮಯದಲ್ಲಿ ಒಂದು ಬಾರಿಯ ಸೆಸ್ ಅನ್ನು ಹೆಚ್ಚಿನ ಮಿತಿಯಲ್ಲಿ ವಿಧಿಸುವುದನ್ನು ಮತ್ತು ಸಂಗ್ರಹಿಸುವುದನ್ನು ಬಿಟ್ಟುಬಿಡುವ 2025ನೇ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ತಿದ್ದುಪಡಿ ಮಸೂದೆ ಅಂಗೀಕಾರವಾಯಿತು.
ಅಲ್ಲದೆ, 2025ನೇ ಸಾಲಿನ ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ ತಿದ್ದುಪಡಿ ವಿಧೇಯಕ ಅಂಗೀಕೃತವಾಯಿತು. 2022 ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ ಅಧಿನಿಯಮ (2023ರ ಕರ್ನಾಟಕ ಅಧಿನಿಯಮ 06)ರಲ್ಲಿರುವ ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ ಮತ್ತು ಕಾರ್ಯಕಾರಿ ಸಮಿತಿಯನ್ನು ಪರಿಷ್ಕರಿಸಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಹಾಪೌರರು ಮತ್ತು ಆಯುಕ್ತರನ್ನು ಮತ್ತು 2024ರ ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮದ ಅನುಷ್ಠಾನದ ತತ್ಪರಿಣಾಮವಾಗಿ ಗ್ರೇಟರ್ ಬೆಂಗಳೂರು ಪ್ರದೇಶದ ನಗರ ಪಾಲಿಕೆಗಳನ್ನು ಸೇರಿಸಲು ತಿದ್ದುಪಡಿ ತರುವ ಮಸೂದೆ ಇದಾಗಿದೆ.



