Updated By: Priyalachhi
ನವದೆಹಲಿ: ಯುರೋಪಿಯನ್ ಯೂನಿಯನ್ (ಇಯು) ಮತ್ತು ಅಮೆರಿಕದ ಜತೆ ಭಾರತದ ವ್ಯಾಪಾರ ಒಪ್ಪಂದಗಳ ನಂತರ ಜಗತ್ತು ಸ್ಥಿರತೆಯ ಬಗ್ಗೆ ಹೆಚ್ಚು ವಿಶ್ವಾಸ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು.
ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯ ಮೇಲಿನ ಚರ್ಚೆಗೆ ಇಂದು ಸಂಜೆ ರಾಜ್ಯಸಭೆಯಲ್ಲಿ ಸುದೀರ್ಘವಾಗಿ ಉತ್ತರಿಸಿದ ಮೋದಿ, ಸರ್ಕಾರ ಸಾಧನೆಗಳನ್ನು ಬಿಡಿಬಿಡಿಯಾಗಿ ವಿವರಿಸುತ್ತಾ, ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ಮಾಡಿದರು.
ಭಾರತದ ಒಪ್ಪಂದಗಳನ್ನು ಜಗ ಮೆಚ್ಚಿದೆ: ಭಾರತ ಹಲವಾರು ದೇಶಗಳೊಂದಿಗೆ ಭವಿಷ್ಯಕ್ಕೆ ಸಿದ್ಧವಾದ(Future ready) ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕುತ್ತಿದೆ. ಕಳೆದ ಕೆಲವು ದಿನಗಳಲ್ಲಿ ಯುರೋಪಿಯನ್ ಒಕ್ಕೂಟ(ಇಯು)ದ 27 ರಾಷ್ಟ್ರಗಳ ಗುಂಪಿನೊಂದಿಗೆ ‘ಮದರ್ ಆಫ್ ಆಲ್ ಡೀಲ್ಸ್’ ಎಂದೇ ಬಣ್ಣಿಸಲಾದ ಮಹತ್ವದ ವ್ಯಾಪಾರ ಒಪ್ಪಂದವೂ ಸೇರಿ ಇತರೆ 9 ದೊಡ್ಡ ದೇಶಗಳೊಂದಿಗೆ ನಾವು ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಿದ್ದೇವೆ. ಈ ಒಪ್ಪಂದಗಳನ್ನು ಜಗತ್ತು ಮೆಚ್ಚಿಕೊಂಡಿದೆ ಎಂದು ವಿವರಿಸಿದರು. ಇದೇ ವೇಳೆ, ಭಾರತ ಈಗ ಜಾಗತಿಕ ದಕ್ಷಿಣ(Global South)ದ ಬಲವಾದ ಧ್ವನಿಯಾಗಿದೆ ಎಂದೂ ಹೆಮ್ಮೆ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರದ ತಪ್ಪು ಸರಿಪಡಿಸುವಲ್ಲಿ ನಮ್ಮ ಹೆಚ್ಚು ಸಮಯ ವ್ಯಯ: ಇದೇ ವೇಳೆ ವಿರೋಧ ಪಕ್ಷದ ವಿರುದ್ಧ ವಾಗ್ದಾಳಿ ನಡೆಸುತ್ತಾ, ಈ ಹಿಂದೆ ತಾವು ರಾಷ್ಟ್ರಕ್ಕೆ ಮಾಡಿರುವ ಕೆಲಸಗಳಿಗೆ ಒಂದಿನ ಉತ್ತರಿಸಬೇಕಾಗುತ್ತದೆ ಎಂದು ಚಾಟಿ ಬೀಸಿದರು. ಕಾಂಗ್ರೆಸ್ ನೇತೃತ್ವದ ಸರ್ಕಾರಗಳ ತಪ್ಪುಗಳನ್ನು ಸರಿಪಡಿಸುವಲ್ಲಿ ನಮ್ಮ ಹೆಚ್ಚಿನ ಶಕ್ತಿ ವ್ಯಯವಾಗಿದೆ ಎಂದು ತಿಳಿಸಿದರು. ಸಂಸತ್ತಿನಲ್ಲಿ ನಡೆದ ಕೋಲಾಹಲವನ್ನು ಉಲ್ಲೇಖಿಸಿ, ವಿರೋಧ ಪಕ್ಷ ಸತತವಾಗಿ ಚುನಾವಣಾ ಸೋಲುಗಳನ್ನು ಅನುಭವಿಸುತ್ತಿದ್ದು, ಅವರಿಗೆ ಅವುಗಳನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು.
ಲೋಕಸಭೆಯಲ್ಲಿ ಕಲಾಪಗಳಿಗಾದ ಅಡಚಣೆಗೆ ವಿಷಾದ ವ್ಯಕ್ತಪಡಿಸಿ, ಇದು ಭಾರತದ ಬಡ ಬುಡಕಟ್ಟು ಮಹಿಳೆ ರಾಷ್ಟ್ರಪತಿಗೆ ಮಾಡಿದ ಅವಮಾನ. ಮಾತ್ರವಲ್ಲದೇ, ಅವರು ಹೊಂದಿದ್ದ ಉನ್ನತ ಸಾಂವಿಧಾನಿಕ ಸ್ಥಾನಮಾನ ಮತ್ತು ಭಾರತದ ಸಂವಿಧಾನಕ್ಕೂ ಮಾಡಿದ ಅವಮಾನ ಎಂದು ಟೀಕಿಸಿದರು.



