Updated By: Priyalachhi
ಬೆಂಗಳೂರು: ‘ಕರ್ನಾಟಕವು ಈಗ ಮೀನು ಉತ್ಪಾದನೆಯಲ್ಲಿ ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ. ಜಾಗತಿಕ ಮೀನು ಉತ್ಪಾದನೆಯಲ್ಲಿ ಭಾರತದ ಪಾಲು ಸುಮಾರು ಶೇ 7.7 ರಷ್ಟಿದ್ದು, ರಫ್ತಿನಲ್ಲಿ ನಾಲ್ಕನೇ ಸ್ಥಾನದಲ್ಲಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಹೇಳಿದ್ದಾರೆ.
ವಿಶ್ವ ಮೀನುಗಾರಿಕಾ ದಿನಾಚರಣೆಯಂದು ‘ಮತ್ಸ್ಯ ಮೇಳ 2025’ದಲ್ಲಿ ಮಾತನಾಡಿದ ಅವರು, ಮೀನುಗಾರಿಕೆ ಲಕ್ಷಾಂತರ ಕುಟುಂಬಗಳಿಗೆ ಆಹಾರ ಭದ್ರತೆ, ಪೋಷಣೆ ಮತ್ತು ಜೀವನೋಪಾಯವನ್ನು ಖಾತ್ರಿಪಡಿಸುವ ನಿರ್ಣಾಯಕ ಉದ್ಯಮವಾಗಿದೆ ಎಂದು ಹೇಳಿದರು.
ಕರ್ನಾಟಕವು 32 ಕಿ.ಮೀ ಕರಾವಳಿ ಮತ್ತು 5.5 ಲಕ್ಷ ಹೆಕ್ಟೇರ್ ಒಳನಾಡಿನ ಜಲ ಸಂಪನ್ಮೂಲಗಳನ್ನು ಹೊಂದಿದ್ದು, ಮೀನು ಉತ್ಪಾದನೆಯಲ್ಲಿ ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ. ಈ ವಲಯವು ರಾಜ್ಯದಲ್ಲಿ ಸುಮಾರು 10 ಲಕ್ಷ ಜನರಿಗೆ ಆಧಾರವಾಗಿದೆ ಎಂದು ಹೇಳಿದರು.
ಈ ವಲಯಕ್ಕೆ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದ ಅವರು, ಯಾಂತ್ರೀಕೃತ ಮೀನುಗಾರಿಕಾ ದೋಣಿಗಳಿಗೆ ವಾರ್ಷಿಕ ಡೀಸೆಲ್ ಕೋಟಾವನ್ನು 1.5 ಲಕ್ಷ ಕಿಲೋಲೀಟರ್ಗಳಿಂದ 2 ಲಕ್ಷ ಕಿಲೋಲೀಟರ್ಗಳಿಗೆ ಹೆಚ್ಚಿಸಲಾಗಿದೆ. ಸಾಂಪ್ರದಾಯಿಕ ದೋಣಿಗಳಿಗೆ ಲೀಟರ್ಗೆ 35 ರೂ. ಸಬ್ಸಿಡಿ ದರದಲ್ಲಿ ಕೈಗಾರಿಕಾ ಸೀಮೆಎಣ್ಣೆಯನ್ನು ನೀಡಲಾಗುತ್ತಿದೆ ಎಂದು ಹೇಳಿದರು.



