Updated By: Priyalachhi
ಬೆಂಗಳೂರು: ಮುಡಾದಲ್ಲಿ ನಡೆದ ನಿವೇಶನ ಹಂಚಿಕೆ ಅಕ್ರಮಗಳ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರ ಮೂವರ ವಿರುದ್ಧ ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ‘ಬಿ’ ವರದಿಯ ಮೇಲೆ ಆದೇಶ ನೀಡಲು, ಪ್ರಕರಣಕ್ಕೆ ಸಂಬಂಧಿಸಿದ ಕೇಸ್ ಡೈರಿಯನ್ನು ಡಿಸೆಂಬರ್ 23ರೊಳಗೆ ಹಾಜರುಪಡಿಸುವಂತೆ ವಿಶೇಷ ನ್ಯಾಯಾಲಯ ಗುರುವಾರ ಲೋಕಾಯುಕ್ತ ವಿಶೇಷ ಸಾರ್ವಜನಿಕ ಅಭಿಯೋಜಕರಿಗೆ (SPP) ಸೂಚನೆ ನೀಡಿದೆ.
ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪತ್ನಿ ಬಿ.ಎಂ. ಪಾರ್ವತಿ ಸೇರಿ ಇತರರಿಗೆ ಕ್ಲೀನ್ಚಿಟ್ ನೀಡಿ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ‘ಬಿ’ ರಿಪೋರ್ಟ್ನ ಆಕ್ಷೇಪಣಾ ಅರ್ಜಿ ಕುರಿತು ನ್ಯಾಯಾಲಯ ಗುರುವಾರ ವಿಚಾರಣೆ ನಡೆಸಿತು.
ತನಿಖಾ ಸಂಸ್ಥೆ ಮುಂದಿನ ತನಿಖೆಗೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಇಟ್ಟಿಲ್ಲ. ಆದ್ದರಿಂದ ಈಗಾಗಲೇ ಸಲ್ಲಿಸಿರುವ ವರದಿಯ ಆಧಾರದಲ್ಲೇ ನ್ಯಾಯಾಲಯ ಮುಂದುವರಿಯಬೇಕಾಗುತ್ತದೆ. ಹೀಗಾಗಿ ಮುಂದಿನ ವಿಚಾರಣೆಯೊಳಗೆ ಕೇಸ್ ಡೈರಿಯನ್ನು ಸಲ್ಲಿಸಬೇಕು. ಮಧ್ಯಂತರದಲ್ಲಿ ದೂರುದಾರರು ಅಥವಾ ಜಾರಿ ನಿರ್ದೇಶನಾಲಯ (ED) ಪ್ರತಿಕ್ರಿಯೆ ಸಲ್ಲಿಸಬಹುದು ಎಂದು ನ್ಯಾಯಾಧೀಶ ಸಂತೋಷ್ ಗಜಾನನ್ ಭಟ್ ಹೇಳಿದರು. ಇದೇ ವೇಳೆ ವಿಚಾರಣೆಯನ್ನು ಡಿಸೆಂಬರ್ 23ಕ್ಕೆ ಮುಂದೂಡಿದರು.
ವಿಚಾರಣೆ ವೇಳೆ ಲೋಕಾಯುಕ್ತ ಪರ ವಿಶೇಷ ಸಾರ್ವಜನಿಕ ಅಭಿಯೋಜಕ ವೆಂಕಟೇಶ್ ಅರ್ಬಟ್ಟಿ ಸ್ಥಿತಿಗತಿ ವರದಿ ಸಲ್ಲಿಸಿ, ತನಿಖೆ ಅಂತಿಮ ಹಂತದಲ್ಲಿದ್ದು ಅನುಮತಿ ಆದೇಶ (ಸ್ಯಾಂಕ್ಷನ್) ಪಡೆಯಬೇಕಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.



