Updated By: Priyalachhi
ಮೈಸೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಮೈಸೂರು ವಿಮಾನ ನಿಲ್ದಾಣದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿಯಾಗಿ ಮಾತುಕತೆ ನಡೆಸಿದರು.
ಮೈಸೂರು ಮಾರ್ಗವಾಗಿ ರಾಹುಲ್ ಗಾಂಧಿಯವರು ಅವರು ತಮಿಳುನಾಡಿನ ಕೂಡಲೂರು ಕಾರ್ಯಕ್ರಮಕ್ಕೆ ಹೋಗಿದ್ದರು. ಬಳಿಕ ಇದೇ ಮಾರ್ಗವಾಗಿ ಬಂದು ಮರಳಿ ದೆಹಲಿಗೆ ಪ್ರಯಾಣ ಬೆಳಸಿದರು.
ರಾಹುಲ್ ಜೊತೆ ಡಿಸಿಎಂ ಮಾತು: ತಮಿಳುನಾಡಿನ ಕೂಡಲೂರು ಕಾರ್ಯಕ್ರಮ ಮುಗಿಸಿ ಸಂಜೆ ವೇಳೆಗೆ ಮೈಸೂರಿಗೆ ಆಗಮಿಸಿದ ರಾಹುಲ್ ಗಾಂಧಿ ಅವರ ಜೊತೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕೆಲಕಾಲ ಮಾತುಕತೆ ನಡೆಸಿದರು. ದೆಹಲಿಗೆ ತೆರಳುವ ಮುನ್ನ ರಾಹುಲ್ ಗಾಂಧಿ, ಡಿಕೆಶಿ ಇಬ್ಬರೇ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ.

ರಾಜಕೀಯ ಚರ್ಚೆ ಇಲ್ಲ: ಇಂದು ನಗರದ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರಿಗೆ ಸ್ವಾಗತ ಕೋರಿದ ನಂತರ ರಾಹುಲ್ ಗಾಂಧಿಯವರು ಕೂಡಲೂರು ಕಾರ್ಯಕ್ರಮಕ್ಕೆ ಹೋಗುತ್ತಿದ್ದಾರೆ. ಸಂಜೆ ಇಲ್ಲಿಯೇ ಬಂದು ದೆಹಲಿಗೆ ಹಿಂದಿರುಗುತ್ತಾರೆ. ಅವರನ್ನು ಕಳಿಸಲು ಬರುತ್ತೇನೆ. ಇಲ್ಲಿ ರಾಹುಲ್ ಗಾಂಧಿ ಜೊತೆ ಯಾವುದೇ ರಾಜಕೀಯ ಚರ್ಚೆ ಆಗಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ನಾಯಕತ್ವ ಬದಲಾವಣೆ ನಮ್ಮಲ್ಲಿ ಚರ್ಚೆ ಇಲ್ಲ, ನಮ್ಮಲ್ಲಿ ಯಾವುದೇ ಗೊಂದಲ ಸಹ ಇಲ್ಲ. ಇದು ಕೇವಲ ಮಾಧ್ಯಮದವರ ಸೃಷ್ಟಿ ಎಂದು ಹೇಳಿದರು.



