Updated By: Priyalachhi
ಹಾಸನ: ಜೆಡಿಎಸ್ ಪ್ರಬಲವಾದಂತಹ ಪಕ್ಷ. ಹಾಸನ ಜಿಲ್ಲೆಯಲ್ಲಿ ರೇವಣ್ಣ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಆದರೆ, ನನ್ನ ಮಗನನ್ನ ತುಳಿಯಲು ಪ್ರಯತ್ನ ಮಾಡುತ್ತಿದ್ದಾರೆ. ನನ್ನ ಎರಡನೇ ಮಗಳು ಶೈಲಜಾ ಮನೆಗೆ ರೇವಣ್ಣ ಬಂದಾಗ, ಎಸ್ಐಟಿಯವರು ಬಂದು ಅವರನ್ನು ಬಂಧನ ಮಾಡುತ್ತಾರೆ. ರೇವಣ್ಣ ಅವರನ್ನು ಮತ್ತು ಅವರ ಕುಟುಂಬವನ್ನು ಮುಗಿಸಲೇಬೇಕು ಎಂದು ಎಸ್ಐಟಿಗೆ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿರುವ ಕೆಲವರು ಉಡುಗೊರೆ ಕೊಟ್ಟಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನನ್ನ ಈ ಜಿಲ್ಲೆಯಲ್ಲಿ ಒಮ್ಮೆ ಸೋಲಿಸಿದ್ದರು. ಒಂದು ಸಿನಿಮಾ ಥಿಯೇಟರ್ ನಿರ್ಮಾಣ ಮಾಡಿದೆ ಎಂಬ ಕಾರಣಕ್ಕೆ ನನ್ನನ್ನು ಸೋಲಿಸಿದರು. ಬಳಿಕ 1991ರಲ್ಲಿ ಅದೇ ಜನಾ ನನ್ನನ್ನ ಗೆಲ್ಲಿಸಿದ್ರು. ಅವರಿಗೆ ನಾನು ಕೈಮುಗಿದು ನಮಿಸುತ್ತೇನೆ. ಕುಮಾರಸ್ವಾಮಿ ಅವರು 25 ವರ್ಷಗಳ ಹಿಂದೆ ಹಣ ಕೊಟ್ಟು ಜಮೀನು ಖರೀದಿ ಮಾಡಿದ್ರು. ಆದರೆ, ಈ ಸರ್ಕಾರ ಅದು ಗೋಮಾಳ ಅಂತ ಅವರ ಮೇಲೆ ಆರೋಪ ಮಾಡಿ, ತನಿಖೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಹಾಸನ ಜಿಲ್ಲೆಯಲ್ಲಿರುವ ಕೆಲವು ಸ್ಥಳೀಯ ಸಂಸ್ಥೆಗಳು ಜೆಡಿಎಸ್ ಹಿಡಿತದಲ್ಲಿದ್ದರೂ ಕೂಡ ಎಲ್ಲ ಜನಾಂಗದವರಿಗೂ ಅಧಿಕಾರವನ್ನು ನೀಡಿದೆ. ಕಾರಣ ಜೆಡಿಎಸ್ ಕೇವಲ ನನ್ನ ಪಕ್ಷ ಅಲ್ಲ, ಇದು ಜನರ ಪಕ್ಷ. ಇವತ್ತು ರಾಜ್ಯದಲ್ಲಿ ಆಡಳಿತ ನಡೆಸುವವರಿಗೆ ಒಂದು ಸನ್ನೆ ನೀಡುತ್ತೇವೆ. ಮುಂದಿನ ದಿನಗಳಲ್ಲಿ ನಿಮ್ಮ ಆಟ ನಡೆಯುವುದಿಲ್ಲ, ನಾವಿನ್ನೂ ಬದುಕಿದ್ದೇವೆ. ಕುಮಾರಸ್ವಾಮಿ ಜಿಲ್ಲೆಗೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ನೀಡಿದ್ದಾರೆ. ಹಾಸನದ ವಿಮಾನ ನಿಲ್ದಾಣದ ಶಂಕು ಸ್ಥಾಪನೆ ಆಯಿತು. ಇವತ್ತಿನ ಪರಿಸ್ಥಿತಿ ಏನಾಗಿದೆ. ಐಐಟಿ ತರಬೇಕು ಎಂದು ಜಮೀನನ್ನ ಮೀಸಲಿಟ್ಟಿದ್ದೇವೆ. ಆದರೆ, ಅದರ ಪರಿಸ್ಥಿತಿ ಏನಾಗಿದೆ. ಎಲ್ಲಾ ಅಭಿವೃದ್ಧಿಯನ್ನು ಈ ಸರ್ಕಾರ ಕುಂಠಿತ ಮಾಡಿದೆ ಎಂದಿದ್ದಾರೆ.
ಮಹಿಳೆಯರ ಮೀಸಲಾತಿ ಸಿಕ್ಕಿದ್ದರಿಂದ ಹಿಂದೆ ನಮ್ಮ ಪಕ್ಷದ ಶ್ರಮ ಇದೆ: ಕಾಂಗ್ರೆಸ್ನ ರಾಹುಲ್ ಗಾಂಧಿಯವರು ಮೋದಿ ಅವರ ಆರ್ಥಿಕ ಸುಧಾರಣೆ ಸತ್ತು ಹೋಗಿದೆ ಎಂದು ಹೇಳಿದ್ದಾರೆ. ಓಲ್ಡ್ ಚೋರಿ ಓಟ್ ಚೋರಿ ಎಂಬ ಅಭಿಯಾನ ಮಾಡಿ ಬಿಹಾರದಲ್ಲಿ ಆರು ಸ್ಥಾನ ಪಡೆದರು. ದೇಶದಲ್ಲಿ ಕೇವಲ ಮೂರು ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರದಲ್ಲಿದೆ. ರೇವಣ್ಣ ಕುಟುಂಬವನ್ನ ಮುಗಿಸಬೇಕು ಎಂದು ಪ್ರಯತ್ನ ಪಡ್ತಿದ್ದೀರಲ್ಲ. ನೀವು ರಾಜ್ಯದಲ್ಲಿ ಏನೇನ್ ಮಾಡಿದ್ದೀರಿ ಎಂಬುದನ್ನ ನಾನು ಹೇಳಲಾ? ಎಂದು ಅವರು, ಇವತ್ತು ದೇಶದಲ್ಲಿ ಮಹಿಳೆಯರಿಗೆ ರಾಜಕೀಯ ಮೀಸಲಾತಿ ದೊರೆತಿದೆ ಎಂದರೆ ಅದಕ್ಕೆ ನಮ್ಮ ಪಕ್ಷ ಶ್ರಮ ಪಟ್ಟಿದೆ ಎಂದು ಹೇಳಿದ್ದಾರೆ.
