Updated By: Priyalachhi
ಸುಬ್ರಹ್ಮಣ್ಯ(ದಕ್ಷಿಣ ಕನ್ನಡ): ಕೇರಳದ ಪ್ರಸಿದ್ಧ ಯಾತ್ರಾ ಕ್ಷೇತ್ರ ಶಬರಿಮಲೆಯಲ್ಲಿ ಕರ್ನಾಟಕದ ಭಕ್ತರ ಅನುಕೂಲಕ್ಕಾಗಿ ಸಹಾಯವಾಣಿ ಕೇಂದ್ರವನ್ನು ಕರ್ನಾಟಕ ಸರ್ಕಾರ ತೆರೆದಿದೆ. ವಿಶೇಷ ಮಾಹಿತಿ ಮತ್ತು ತುರ್ತು ಸಂದರ್ಭಗಳಲ್ಲಿ ಇದು ನೆರವಿಗೆ ಬರಲಿದೆ.
ಶಬರಿಮಲೆಯಲ್ಲಿ ನಡೆಯುವ ಮಂಡಲ ಪೂಜೆ ಮತ್ತು ಮಕರವಿಳಕ್ಕು ಕಾರ್ಯಕ್ರಮಕ್ಕೆ ಕರ್ನಾಟಕದಿಂದ ಹೆಚ್ಚಿನ ಭಕ್ತರು ಯಾತ್ರೆ ಕೈಗೊಳ್ಳುತ್ತಾರೆ. ಈ ಕಾರಣದಿಂದಾಗಿ ಯಾತ್ರಾರ್ಥಿಗಳಿಗೆ ಸೂಕ್ತ ಸಹಕಾರ ನೀಡಲು ಮತ್ತು ಮಾಹಿತಿ ಒದಗಿಸಲು ಸಹಾಯವಾಣಿ ಕೇಂದ್ರವನ್ನು ಮುಜರಾಯಿ ಇಲಾಖೆ ಆರಂಭಿಸಿದೆ. ಜ.14ರಿಂದ 19ರ ತನಕ ಸಹಾಯವಾಣಿ ಕೇಂದ್ರ ಕೆಲಸ ಮಾಡಲಿದೆ.
ಬೆಂಗಳೂರಿನ ಪ್ರಸನ್ನ ವೀರಾಂಜನೇಯ ಸ್ವಾಮಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಎಂ.ಮೋಹನ್ ಕುಮಾರ್, ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಚೇರಿ ಅಧೀಕ್ಷಕ ಕೆ.ಎಂ.ಗೋಪಿನಾಥ್ ನಂಬೀಶ, ಕುಕ್ಕೆ ದೇವಳದ ಶಿಷ್ಠಾಚಾರ ವಿಭಾಗದ ಪ್ರಮೋದ್ ಕುಮಾರ್.ಎಸ್ ಅವರನ್ನು ಸಹಾಯವಾಣಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಲು ಮುಜರಾಯಿ ಇಲಾಖೆ ನಿಯೋಜಿಸಿದೆ.
ಸಂಕ್ರಾತಿ ವೇಳೆ ಅತ್ಯಧಿಕ ಸಂಖ್ಯೆಯಲ್ಲಿ ಕರ್ನಾಟದ ಭಕ್ತರು ಶಬರಿಮಲೆ ಯಾತ್ರೆ ಕೈಗೊಳ್ಳುವ ಕಾರಣ ತುರ್ತು ಸಂದರ್ಭದಲ್ಲಿ ಸಹಾಯವಾಣಿ ಕೇಂದ್ರ ಸಹಕಾರ ನೀಡಲಿದೆ. ಭಕ್ತರು ಅಗತ್ಯಬಿದ್ದಲ್ಲಿ ಶಬರಿಮಲೆಯ ಈ ಸಹಾಯವಾಣಿ ಕೇಂದ್ರವನ್ನು ಸಂಪರ್ಕಿಸಬಹುದು.
ಸಹಾಯವಾಣಿ ವಿವರ:
ಎಂ.ಮೋಹನ್ ಕುಮಾರ್ – 9880055733
ಪ್ರಮೋದ್ ಕುಮಾರ್ ಎಸ್ – 9448529841
ಶಬರಿಮಲೆಯಲ್ಲಿ ಮಕರ ಜ್ಯೋತಿ ರೂಪದಲ್ಲಿ ಭಗವಾನ್ ಅಯ್ಯಪ್ಪಸ್ವಾಮಿ ತನ್ನ ಭಕ್ತರಿಗೆ ಬುಧವಾರ ಕಾಣಿಸಿಕೊಂಡರು. ಮಕರ ಜ್ಯೋತಿ ದರ್ಶನ ಪಡೆದ ಭಕ್ತರು, ಮಣಿಕಂಠನ ಜಪಿಸಿ ಭಕ್ತಿ ಸಮರ್ಪಿಸಿದರು.
ಭಕ್ತರಿಗೆ ವಿಶೇಷ ವ್ಯವಸ್ಥೆ: ಮಂಡಲ ಪೂಜೆಯ ಸಮಯದಲ್ಲಿ ಶಬರಿಮಲೆ ಅಯ್ಯಪ್ಪ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಲ್ಲುವ ಭಕ್ತರಿಗೆ ಬಿಸ್ಕತ್ತು ಮತ್ತು ಕುಡಿಯುವ ನೀರು ಸೌಲಭ್ಯ ಮಾಡಲಾಗಿತ್ತು. ಮಕ್ಕಳು ಮತ್ತು ಮಹಿಳೆಯರಿಗೆ ವಿಶೇಷ ಸರತಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಕಳ್ಳರಿಂದ ಭಕ್ತರನ್ನು ರಕ್ಷಿಸಲು ವಿಶೇಷ ಮೇಲ್ವಿಚಾರಣಾ ವ್ಯವಸ್ಥೆ ಕೂಡಾ ಮಾಡಲಾಗಿತ್ತು. ಅನ್ನದಾನ ಮಂಟಪದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿತ್ತು. ಶಬರಿಮಲೆ ಬೆಟ್ಟ ಹತ್ತುವಾಗ ಸ್ನಾಯು ನೋವಿನಿಂದ ಬಳಲುತ್ತಿರುವ ಯಾತ್ರಾರ್ಥಿಗಳಿಗೆ ಸಹಾಯ ಮಾಡಲು ಸನ್ನಿದಾನದಲ್ಲಿ 24 ಗಂಟೆಗಳ ಉಚಿತ ಫಿಜಿಯೋಥೆರಪಿ ಚಿಕಿತ್ಸಾ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಪಂಬಾ ಮತ್ತು ಸನ್ನಿದಾನದಲ್ಲಿ ಆಫ್-ರೋಡ್ ಆಂಬ್ಯುಲೆನ್ಸ್ಗಳು 24 ಗಂಟೆಗಳ ಕಾಲ ಸೇವೆ ನೀಡುತ್ತಿವೆ.



