ಅಕ್ಷಯ ತೃತೀಯ ಶುಭ ಮೂಹೂರ್ತ ಯಾವಾಗ? ಚಿನ್ನ-ಬೆಳ್ಳಿ ಖರೀದಿ ಸಾಧ್ಯವಾಗದಿದ್ದರೆ ಈ ವಸ್ತುಗಳನ್ನಾದರೂ ಮನೆಗೆ ತನ್ನಿ

0
33

ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ

ಹಿಂದೂ ಪಂಚಾಂಗದ ಪ್ರಕಾರ, ಏಪ್ರಿಲ್‌ 19, 2026ರಂದು ಅಕ್ಷಯ ತೃತೀಯವನ್ನು ಆಚರಿಸಲಾಗುತ್ತಿದೆ. ಅಕ್ಷಯ ತೃತೀಯವನ್ನು ಸಂಪತ್ತು, ಸಮೃದ್ಧಿ ಮತ್ತು ಶ್ರೀಮಂತಿಕೆಯ ಸಂಕೇತವೆಂದು ಪರಿಗಣಿಸಲಾಗಿದೆ. ಜ್ಯೋತಿಷ್ಯದ ಪ್ರಕಾರ, ಈ ಅಕ್ಷಯ ತೃತೀಯದಲ್ಲಿ ಗ್ರಹಗಳ ಅಪರೂಪದ ಸಂಯೋಗದಿಂದಾಗಿ ಅಕ್ಷಯ ಯೋಗ, ಮಾಲವ್ಯ ರಾಜಯೋಗ, ಗಜಕೇಸರಿ ರಾಜಯೋಗಗಳಂತಹ ಹಲವು ಶುಭ ಯೋಗಗಳು ಬರಲಿವೆ.

ಸಂಸ್ಕೃತದಲ್ಲಿ ‘ಅಕ್ಷಯ’ ಎಂದರೆ ‘ಎಂದಿಗೂ ಕ್ಷಯಿಸದ ಅಂದರೆ ಕಡಿಮೆಯಾಗದ ಅಥವಾ ‘ಶಾಶ್ವತ’ ಎಂಬ ಅರ್ಥವಿದ್ದು, ಈ ದಿನದಂದು ಕೈಗೊಳ್ಳುವ ಯಾವುದೇ ಶುಭ ಕಾರ್ಯ ಅಥವಾ ಹೂಡಿಕೆಯು ಕಾಲಕ್ರಮೇಣ ವೃದ್ಧಿಸುತ್ತಲೇ ಇರುತ್ತದೆ ಎಂಬುದು ಅಚಲ ನಂಬಿಕೆ.

ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ತಿಥಿಯ ಈ ದಿನ ಯಾವುದೇ ವಸ್ತು ಖರೀದಿಸಿದರೂ ಅದು ಮನೆಯಲ್ಲಿ ಸಮೃದ್ಧಿಯಾಗಿ ಉಳಿಯುತ್ತದೆ ಎಂಬ ನಂಬಿಕೆ ಇದೆ. ಈ ದಿನ ಚಿನ್ನ ಖರೀದಿಸಿದರೆ ಸಾಕ್ಷಾತ್ ಮಹಾಲಕ್ಷ್ಮಿಯೇ ಮನೆಗೆ ಪ್ರವೇಶಿಸುತ್ತಾಳೆ ಎನ್ನಲಾಗುತ್ತದೆ. ಐಶ್ವರ್ಯ ಮತ್ತು ಸಂಪತ್ತು ಶಾಶ್ವತವಾಗಿ ನೆಲೆಸಲಿ ಎಂಬ ಆಶಯದಿಂದ ಜನ ಚಿನ್ನದ ಮಳಿಗೆಗಳಿಗೆ ಮುಗಿಬೀಳುತ್ತಾರೆ.

ಪರಂಪರೆಯ ಪ್ರಕಾರ, ಅಕ್ಷಯ ತೃತೀಯದಂದು ಚಿನ್ನವನ್ನು ಖರೀದಿಸುವುದು ಕೇವಲ ಆಭರಣದ ಹೂಡಿಕೆಯಲ್ಲ, ಬದಲಿಗೆ ಅದು ಮಹಾಲಕ್ಷ್ಮಿಯನ್ನು ಮನೆಗೆ ಬರಮಾಡಿಕೊಳ್ಳುವ ಒಂದು ಸಂಪ್ರದಾಯವಾಗಿದೆ. 2026ರ ಸಾಲಿನಲ್ಲಿ ಈ ಹಬ್ಬವು ಏಪ್ರಿಲ್ 19ರಂದು ಬಂದಿದ್ದು, ಹೂಡಿಕೆದಾರರು ಮತ್ತು ಗ್ರಾಹಕರು ಚಿನ್ನ ಖರೀದಿಸಲು ಕಾತರದಿಂದ ಕಾಯುತ್ತಿದ್ದಾರೆ.

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸುವುದು ಎಷ್ಟು ಮುಖ್ಯವೋ, ಅಷ್ಟೇ ಮುಖ್ಯವಾದುದು ದಾನ. ಈ ದಿನ ನೀವು ಮಾಡುವ ಸಣ್ಣ ದಾನವೂ ಸಹ ನಿಮಗೆ ಪುಣ್ಯವನ್ನು ನೀಡುತ್ತದೆ ಎಂಬುದು ಸನಾತನ ಧರ್ಮದ ನಂಬಿಕೆ. ಅಂದು ಮನೆಯನ್ನು ಸ್ವಚ್ಛಗೊಳಿಸಿ, ಮಹಾಲಕ್ಷ್ಮಿ, ಗಣಪತಿ, ಸರಸ್ವತಿ ಮತ್ತು ಕುಬೇರನ ಪೂಜೆ ಮಾಡಿದರೆ ಸಾಕು, ನಿಮ್ಮ ಐಶ್ವರ್ಯ ದ್ವಿಗುಣಗೊಳ್ಳುವುದರಲ್ಲಿ ಸಂಶಯವಿಲ್ಲ.

ಅಕ್ಷಯ ತೃತೀಯ ದಿನದಂದು ಶುಭ ಮುಹೂರ್ತವನ್ನು ನೋಡದೆ ಯಾವುದೇ ಶುಭ ಕಾರ್ಯವನ್ನು ಮಾಡುವುದು ಒಳ್ಳೆಯದೆಂದು ಪರಿಗಣಿಸಲಾಗುತ್ತದೆ. ಈ ದಿನದಂದು ಮುಹೂರ್ತವನ್ನು ನೋಡದೆ ಮದುವೆ, ಗೃಹಪ್ರವೇಶ, ಹೊಸ ಅಂಗಡಿ, ಉದ್ಯಮ, ವ್ಯವಹಾರದಂತಹ ಚಟುವಟಿಕೆಗಳನ್ನು ಆರಂಭಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ಅಕ್ಷಯ ತೃತೀಯದಂದು ನಿಮಗೆ ಚಿನ್ನ ಖರೀದಿಸಲು ಸಾಧ್ಯವಾಗದಿದ್ದರೇ ಕನಿಷ್ಠ ಈ 5 ವಸ್ತುಗಳನ್ನಾದರೂ ಮನೆಗೆ ತನ್ನಿ!

ಅಕ್ಷಯ ತೃತೀಯದಂದು ಉಪ್ಪು ಖರೀದಿಸುವುದು ಚಿನ್ನ ಖರೀದಿಸುವುದಕ್ಕಿಂತಲೂ ಶ್ರೇಷ್ಠ ಎಂದು ಜ್ಯೋತಿಷ್ಯ ವಿದ್ವಾಂಸರು ಹೇಳುತ್ತಾರೆ. ಉಪ್ಪು ಲಕ್ಷ್ಮಿ ದೇವಿಯ ಸ್ವರೂಪ ಎಂದು ನಂಬಲಾಗಿದೆ. ಈ ದಿನ ಉಪ್ಪನ್ನು ಮನೆಗೆ ತರುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ದೂರವಾಗಿ, ಧನಾತ್ಮಕತೆ ಮತ್ತು ಸಂಪತ್ತು ವೃದ್ಧಿಯಾಗುತ್ತದೆ.

ಹೊಸ ಮಣ್ಣಿನ ಪಾತ್ರೆ ಅಥವಾ ಮಡಿಕೆಯನ್ನು ಈ ದಿನ ಖರೀದಿಸುವುದು ಅತ್ಯಂತ ಶುಭದಾಯಕ.

ಮನೆಯಲ್ಲಿ ತುಳಸಿ ಗಿಡ ಇಲ್ಲದವರು ಅಕ್ಷಯ ತೃತೀಯದಂದು ಹೊಸ ಗಿಡವನ್ನು ಖರೀದಿಸಿ ನೆಡುವುದು ಶ್ರೇಯಸ್ಕರ.

ಅತಿ ಕಡಿಮೆ ವೆಚ್ಚದಲ್ಲಿ ಸಿಗುವ ಅರಿಶಿನ ಮತ್ತು ಕುಂಕುಮ ಸೌಭಾಗ್ಯದ ಸಂಕೇತಗಳಾಗಿವೆ.

ವಿದ್ಯೆಯೇ ಮಹಾಧನ. ಈ ದಿನ ಪುಸ್ತಕಗಳನ್ನು ಖರೀದಿಸುವುದು ಉತ್ತಮ.

ಒಟ್ಟಿನಲ್ಲಿ ಅಕ್ಷಯ ತೃತೀಯದಂದು ಚಿನ್ನ-ಬೆಳ್ಳಿಯನ್ನು ಖರೀದಿಸುವುದು ಶುಭ ಎಂದು ಹೇಳಲಾಗುತ್ತದೆ. ಆದರೆ ಚಿನ್ನ-ಬೆಳ್ಳಿಯ ಹೊರತಾಗಿಯೂ ಕೆಲವು ವಸ್ತುಗಳನ್ನು ಖರೀದಿಸುವುದರಿಂದ ಅದೃಷ್ಟ ಲಕ್ಷ್ಮಿ ಒಲಿಯುವಳು ಎಂದು ಹೇಳಲಾಗುತ್ತದೆ.

sambrama prabha editor suresh kt

LEAVE A REPLY

Please enter your comment!
Please enter your name here