Updated By: Priyalachhi
ಬೆಂಗಳೂರು: “ಡಿಕೆ ಶಿವಕುಮಾರ್ ಅವರು ಇಡಿ ನೋಟಿಸ್ ಕೊಟ್ಟಿರುವುದಕ್ಕೆ ಕಿರುಕುಳ ಅಂದಿರುವುದು ಮೂರ್ಖತನದ ಪರಮಾವಧಿ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದರು.
ಮಲ್ಲೇಶ್ವರ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಡಿಕೆಶಿಗೆ ನೋಟಿಸ್ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, “ಪುರಾವೆ ಇಲ್ಲದೆ ರಾಜಕೀಯ ಪಕ್ಷ, ಮುಖಂಡರ ಮೇಲೆ ತನಿಖೆ ಮಾಡಲು ಆಗಲ್ಲ. ನ್ಯಾಷನಲ್ ಹೆರಾಲ್ಡ್ ವಿಚಾರದಲ್ಲಿ ಪಬ್ಲಿಕ್ ಟ್ರಸ್ಟ್ನ್ನು, ಪ್ರೈವೆಟ್ ಟ್ರಸ್ಟ್ ಮಾಡಿಕೊಂಡು ಆಸ್ತಿ ಲಪಟಾಯಿಸಿದ್ದಾರೆ. ಆ ವಿಚಾರವಾಗಿ ತನಿಖೆಗೆ ಬರಲು ಹೇಳಿದ್ದಾರೆ. ಡಿಕೆಶಿ ಅವರು ಇಡಿ ನೋಟಿಸ್ ಕೊಟ್ಟಿರುವುದಕ್ಕೆ ಕಿರುಕುಳ ಅಂದಿರುವುದು ಮೂರ್ಖತನದ ಪರಮಾವಧಿ ಎಂದು ವಾಗ್ದಾಳಿ ನಡೆಸಿದರು.
ಸುವರ್ಣಸೌಧಕ್ಕೆ 20 ಸಾವಿರ ರೈತರ ಜೊತೆ ಮುತ್ತಿಗೆ: “ಬೆಳಗಾವಿಯಲ್ಲಿ ಡಿಸೆಂಬರ್ 9ರಂದು ಸುಮಾರು 15 ರಿಂದ 20 ಸಾವಿರ ರೈತರ ಜೊತೆಗೆ ಸುವರ್ಣ ಸೌಧ ಮುತ್ತಿಗೆ ಹಾಕಲು ನಿರ್ಧಾರ ಮಾಡಿದ್ದೇವೆ. ಕ್ರಸ್ಟ್ ಗೇಟ್ ನಿರ್ಮಾಣ ವಿಳಂಬದಿಂದ ರೈತರಿಗೆ ಸಮಸ್ಯೆ ಆಗಿದೆ. ಎರಡನೇ ಬೆಳೆ ಬೆಳೆಯದಂತಾಗಿದೆ. ಇದಕ್ಕಾಗಿ ಅಲ್ಲಿನ ರೈತರಿಗೆ 25 ಸಾವಿರರೂ ಗಳ ಪರಿಹಾರಕ್ಕೆ ಆಗ್ರಹಿಸಿದ್ದೇವೆ. ಡಿಸೆಂಬರ್ 9 ರಂದು ಬೃಹತ್ ರೈತ ಹೋರಾಟಕ್ಕೆ ಪಕ್ಷ ಕರೆ ನೀಡಿದೆ. ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದೇವೆ. ಸದನದಲ್ಲೂ ಈ ಬಗ್ಗೆ ಆಗ್ರಹಿಸಲಿದ್ದೇವೆ” ಎಂದು ಇದೇ ವೇಳೆ ತಿಳಿಸಿದರು.
“ಬೆಳಗಾವಿಯ ಚಳಿಗಾಲದ ಅಧಿವೇಶನಕ್ಕೆ ತಯಾರಿ ಮಾಡಿಕೊಂಡಿದ್ದೇವೆ. ಮೈತ್ರಿ ಪಕ್ಷರ ಸದಸ್ಯರ ಜೊತೆ ಒಟ್ಟಿಗೆ ಕೂತು ಚರ್ಚೆ ಮಾಡಿದ್ದೇವೆ. ಕಾಂಗ್ರೆಸ್ ಸರ್ಕಾರದ ವೈಫಲ್ಯ, ಜ್ವಲಂತ ಸಮಸ್ಯೆಗಳ ಬಗ್ಗೆ ಸದನದ ಗಮನ ಸೆಳೆಯಲು ನಿರ್ಧರಿಸಿದ್ದೇವೆ. ಪ್ರತಿ ಬಾರಿ ಅಲ್ಲಿ ಸದನ ನಡೆದಾಗಲೂ ಆ ಭಾಗದ ವಿಚಾರಗಳು ಚರ್ಚೆಗೊಳಪಡುತ್ತವೆ. ಆದರೆ ಅದು ನಾಮಕೇವಾಸ್ತೆ ಎನ್ನುವಂತಿರುತ್ತದೆ. ಹೀಗಾಗಿ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ. ಪರಿಣಾಮಕಾರಿಯಾಗಿ ಈ ಬಾರಿ ಸದನವನ್ನು ಬಳಸಿಕೊಳ್ಳಬೇಕಿದೆ. ಸದನದ ಆರಂಭದಲ್ಲೇ ಈ ವಿಚಾರಗಳ ಚರ್ಚೆ ಮಾಡಲು ನಿರ್ಧರಿಸಿದ್ದೇವೆ. ಮೆಕ್ಕೆಜೋಳ, ತೊಗರಿ, ಕಬ್ಬು, ಭತ್ತ ಖರೀದಿ, ತುಂಗಭದ್ರಾ ಜಲಾಶಯಲಕ್ಕೆ ಕ್ರಸ್ಟ್ ಗೇಟ್ ಅಳವಡಿಕೆ, ಹೀಗೆ ಎಲ್ಲ ವಿಚಾರಗಳ ಕುರಿತು ಸರ್ಕಾರದ ನಿಲುವನ್ನು ಪ್ರಶ್ನಿಸಲಿದ್ದೇವೆ” ಎಂದರು.



