ಕೃಷ್ಣ ಬೈರೇಗೌಡ ಮೇಲೆ ಬಿಜೆಪಿಯಿಂದ ಸ್ಮಶಾನ ಜಮೀನು ಕಬಳಿಕೆ ಆರೋಪ; ತನಿಖೆಗೆ ಸಿದ್ಧ ಎಂದ ಸಚಿವರು

0
36

Updated By: Priyalachhi

ಬೆಳಗಾವಿ: ಕಂದಾಯ ಸಚಿವ ಕೃಷ್ಣ ಬೈರೇಗೌಡರು ತಮ್ಮ ಹೆಸರಿಗೆ ಸ್ಮಶಾನ ಜಮೀನು ಬರೆಸಿಕೊಂಡಿದ್ದು, ಅವರು ರಾಜೀನಾಮೆ ನೀಡುವಂತೆ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.‌

ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳೇ ಮುಡಾ ಹಗರಣದಲ್ಲಿ 14 ಸೈಟು ಪಡೆದು ವಾಪಸ್ ಕೊಟ್ಟರು. ಪ್ರಿಯಾಂಕ್ ಖರ್ಗೆ ಐದು ಎಕರೆ ಜಾಗ ಪಡೆದು ವಾಪಸ್ ನೀಡಿದರು. ಇವೆರಡೂ ಪ್ರಕರಣಗಳೇ ಅಲ್ಲ, ಕದ್ದ ಮಾಲು ವಾಪಸ್ ಕೊಟ್ಟರೆ ಅದು ಕಳ್ಳತನವೇ ಅಲ್ಲ ಎಂಬಂತೆ ಪ್ರದರ್ಶನ ಮಾಡಿದರು. ಈಗ ಕೋಲಾರ ಜಿಲ್ಲೆಯ ಗರುಡನಪಾಳ್ಯ ಗ್ರಾಮದಲ್ಲಿ ಸರ್ವೆ ನಂ.47ರಲ್ಲಿನ 1 ಎಕರೆ ಜಾಗ, ಗರುಡನಪಾಳ್ಯ, ನರಸಾಪುರ ಹೋಬಳಿಯ ಸರ್ವೆ 46ರಲ್ಲಿನ 20.16 ಎಕರೆ ಜಾಗ ಸೇರಿ ಒಟ್ಟು 21.16 ಎಕರೆಯ ಕೋಟ್ಯಂತರ ಮೌಲ್ಯದ ಸ್ಮಶಾನದ ಜಮೀನನ್ನು ಸಚಿವ ಕೃಷ್ಣ ಬೈರೇಗೌಡ ಕಬಳಿಸಿದ್ದಾರೆ. ಸ್ಮಶಾನವನ್ನು ಯಾರೂ ಕೂಡ ತಮ್ಮ ಹೆಸರಿಗೆ ಮಾಡಿಕೊಳ್ಳಲು ಆಗಲ್ಲ. ಆದರೆ ಅಕ್ರಮ ಎಸಗಿ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ ಎಂದು ದೂರಿದರು.

ದಾಖಲೆ ಪ್ರಕಾರ, ಇದು ಕೆರೆ ಜಮೀನು, ಅದನ್ನು ಸ್ಮಶಾನಕ್ಕೆ ಬಿಡಲಾಗಿದೆ.‌ ಕೆರೆ ಜಾಗವನ್ನು ಕೃಷ್ಣ ಬೈರೇಗೌಡ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ಮೂಲ ದಾಖಲೆಗಳ ಪ್ರಕಾರ, ಸರ್ಕಾರಿ ಸ್ಮಶಾನ ಖರಾಬು ಅಂತ ಇದೆ. ಈ ಜಮೀನು ಕಂದಾಯ ಸಚಿವರ ಖಾತೆಗೆ ಹೇಗೆ ಬರುತ್ತದೆ? ಕೃಷ್ಣ ಬೈರೇಗೌಡ ಹೆಸರಿಗೆ ಸ್ಮಶಾನ ಖರಾಬು ಜಮೀನು ಯಾಕೆ ಬಂದಿದೆ? ಎಂದು ಪ್ರಶ್ನಿಸಿದರು.

ಹೀಗಾಗಿ, ಸಚಿವರು ರಾಜೀನಾಮೆ ಕೊಡಬೇಕು. ಮಿಸ್ಟರ್ ಕ್ಲೀನ್ ಅಂತ ಬಿಂಬಿತವಾಗಿದೆ. ‘ಹಿ ಈಸ್ ನಾಟ್ ಮಿಸ್ಟರ್ ಕ್ಲೀನ್. ಹಿ ಶುಡ್ ರಿಸೈನ್’. ಸರ್ಕಾರ ಇದನ್ನು ತಕ್ಷಣ ತನಿಖೆಗೆ ಒಳಪಡಿಸಬೇಕು. 6./11/1978ರಲ್ಲಿ ಕೆರೆ ಅಂತ ಇದೆ. ಈಗ ಎಲ್ಲ ದಾಖಲೆಗಳನ್ನು ತಿದ್ದುಪಡಿ ಮಾಡಲಾಗಿದೆ. ಎರಡೂ ಕೂಡ 20/04/2024ರಲ್ಲಿ ಕೃಷ್ಣ ಬೈರೇಗೌಡ ಹೆಸರಲ್ಲಿಯೇ ಇದೆ. ಮಾರುಕಟ್ಟೆ ವ್ಯಾಲ್ಯೂ ಐದಾರು ಕೋಟಿ ಆಗುತ್ತದೆ. ಕೃಷ್ಣ ಬೈರೇಗೌಡ ಬಿನ್ ಸಿ.ಬೈರೇಗೌಡ. ಅವರಲ್ಲ ಅನ್ನುವುದಾದರೆ ಹೇಳಿಕೆ ಕೊಡಲಿ. ಅವರ ಇಡೀ ಕುಟುಂಬದ ಹೆಸರುಗಳು ಇಲ್ಲಿವೆ ಎಂದು ಛಲವಾದಿ ನಾರಾಯಣ ಸ್ವಾಮಿ ಆರೋಪಿಸಿದರು.‌

ಎನ್.ರವಿಕುಮಾರ್ ಮಾತನಾಡಿ, 14 ಸೈಟು ವಾಪಸ್ ಕೊಟ್ಟರು, ಹ್ಯುಬ್ಲೊಟ್ ವಾಚ್ ವಾಪಸ್ ಕೊಟ್ಟರು. ಈಗ ಕೃಷ್ಣ ಬೈರೇಗೌಡ ಸರದಿ. ಕೆರೆಯ, ಸ್ಮಶಾನದ ಜಮೀನನ್ನು ತಮ್ಮ ಹೆಸರಿಗೆ ಮಾಡಿಸಿಕೊಂಡಿದ್ದಾರೆ. ಕೆರೆ ಹಾಗೂ ಸ್ಮಶಾನ ಜಾಗವನ್ನು ಖಾಸಗಿ ವ್ಯಕ್ತಿಗಳ ಹೆಸರಿಗೆ ಮಾಡಿಕೊಳ್ಳಲು ಆಗುವುದಿಲ್ಲ. ಕೆರೆಗೆ ಮಾರ್ಕ್ ಮಾಡಿ ಖರಾಬು ಅಂತ ಹೇಗೆ ಮಾಡಿದರು? ಸಿಲ್ವರ್ ಟೀಕ್ ಬೆಳೆಯುತ್ತಾರಂತೆ ಅಲ್ಲಿ. ಇದನ್ನು ತನಿಖೆಗೆ ಒಳಪಡಿಸಬೇಕು, ಸಿಎಂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸ್ವತಂತ್ರ್ಯವಾಗಿ ತನಿಖೆ ಮಾಡಲಿ: ಈ ಬಗ್ಗೆ ಸ್ಪಷ್ಟನೆ ಮಾಡಿದ ಸಚಿವ ಕೃಷ್ಣ ಬೈರೇಗೌಡ, ಇಲ್ಲದೇ ಇರುವುದನ್ನು ಹುಡುಕಿ ಆರೋಪ ಮಾಡುವುದು ಅವರ ಸಂಸ್ಕೃತಿ. ನಮ್ಮ ತಾತನವರಿಂದ ನಮಗೆ ವಿಭಾಗದ ಮೂಲಕ ಬಂದಿರುವ ಆಸ್ತಿ. ಗ್ರ್ಯಾಂಟ್ ಮಾಡಿಸಿಕೊಂಡಿರುವುದು ಅಲ್ಲ. ಕ್ರಮದ ಮೂಲಕ ತೆಗೆದುಕೊಂಡು, ಕುಟುಂಬದಲ್ಲಿ ಭಾಗ ಆಗಿ ಬಂದಿದೆ. ಹಿಂದೆ ಏನಾಗಿದೆ ಅಂತಾ ಅವರು ಚೆಕ್ ಮಾಡಲಿ. ನಮ್ಮ ತಾತನವರು ಖರೀದಿ ಮಾಡಿ ಬಂದಿರುವುದು ಅಲ್ವಾ ಅಂತಾ ಚೆಕ್ ಮಾಡಲಿ.‌ ಲೋಕಾಯುಕ್ತರಿಗೆ ಬೇಕಾದರೆ ದೂರು ಕೊಡಲಿ ಎಂದು ಹೇಳಿದರು.

sambrama prabha editor suresh kt

LEAVE A REPLY

Please enter your comment!
Please enter your name here