ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ
ಬೆಂಗಳೂರು: ಕಂದಾಯ ಸಚಿವ ಕೃಷ್ಣ ಬೈರೇಗೌಡ ಶುಕ್ರವಾರ ವಿಕಾಸಸೌಧದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ಎಲ್ಲಾ ತಹಶೀಲ್ದಾರ್ ಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಈ ವೇಳೆ ಭೂ ಸುರಕ್ಷಾ ಯೋಜನೆ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಿದರು.
ಭೂ ದಾಖಲೆ ಸ್ಕ್ಯಾನಿಂಗ್ ಬಗ್ಗೆ ಅಸಡ್ಡೆ ತೋರುತ್ತಿರುವ ತಹಶೀಲ್ದಾರರುಗಳ ವಿರುದ್ಧ ಗರಂ ಆದ ಸಚಿವರು, ದಿನಕ್ಕೆ ಸರಾಸರಿ 12,000 ಪುಟ ಸ್ಕ್ಯಾನ್ ಮಾಡಬೇಕು ಎಂಬುದು ಗುರಿ. ಆದರೆ, ಕೆಲ ತಾಲೂಕುಗಳಲ್ಲಿ ಸ್ಕ್ಯಾನಿಂಗ್ 8,000 ಪುಟ ದಾಟುತ್ತಿಲ್ಲ. ಸ್ಕ್ಯಾನಿಂಗ್ ಕೆಲಸಕ್ಕೆ ಪ್ರತಿ ತಾಲೂಕಿಗೆ ತಲಾ 8 ಜನ ಡೇಟಾ ಆಪರೇಟರ್ ನೀಡಿದರೂ ಕೆಲ ತಾಲೂಕುಗಳಲ್ಲಿ ಪ್ರಗತಿ ಕುಂಠಿತವಾಗಿದೆ ಎಂದರು. ಅಸಮರ್ಪಕ ಉತ್ತರ ನೀಡಿದ ಗದಗ ಜಿಲ್ಲೆ ಶಿರಹಟ್ಟಿ ತಹಶೀಲ್ದಾರ್ ಗೆ ಕ್ಲಾಸ್ ತೆಗೆದುಕೊಂಡರು.
ಮಲೆನಾಡು ಪ್ರದೇಶಗಳಾದ ಚಿಕ್ಕಮಗಳೂರು, ಕೊಡಗು ಜಿಲ್ಲೆಯಲ್ಲಿ ಹಾಗೂ ಹಿಂದುಳಿದ ಜಿಲ್ಲೆಗಳಾದ ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಸ್ಕ್ಯಾನಿಂಗ್ ಕೆಲಸ ಸಂಪೂರ್ಣ ಮುಗಿದಿದೆ. ಆದರೆ, ಬೆಂಗಳೂರು ನಗರ, ಶ್ರೀರಂಗಪಟ್ಟಣ, ಮದ್ದೂರು, ಪಾಂಡವಪುರ ಮೈಸೂರಿನ ಇತರೆ ತಾಲೂಕಿನಲ್ಲಿ ಈ ಕೆಲಸ ಏಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದರು. ನಾಲ್ಕೂ ಕಂದಾಯ ವಿಭಾಗದ ಪ್ರಾದೇಶಿಕ ಆಯುಕ್ತರು ಕಡಿಮೆ ಸ್ಕ್ಯಾನ್ ಆಗುತ್ತಿರುವ ತಾಲೂಕುಗಳ ಮೇಲೆ ನಿಗಾವಹಿಸಲು ಸೂಚಿಸಿದರು.
19 ಲಕ್ಷ ಪುಟ ಭೂ ದಾಖಲೆಗಳನ್ನು ಜನ ಈಗಾಗಲೇ ಆನ್ಲೈನ್ ಮೂಲಕ ಪಡೆದಿದ್ದಾರೆ. ಭೂ ದಾಖಲೆಗಳಿಗಾಗಿ ಜನ ನಮ್ಮ ಕಚೇರಿಗೆ ಬರಬೇಡಿ ಎಂದು ತಹಶೀಲ್ದಾರರು ಜನರಲ್ಲಿ ಅರಿವು ಮೂಡಿಸಿ. ಜನ ಅನಗತ್ಯವಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದು ಕಡಿಮೆಯಾದರೆ, ಅಧಿಕಾರಿಗಳ ಕೆಲಸದ ಒತ್ತಡ ಕಡಿಮೆಯಾಗುತ್ತೆ, ಮಧ್ಯವರ್ತಿಗಳ ಹಾವಳಿಯೂ ಕಡಿಮೆಯಾಗುತ್ತದೆ ಎಂದರು.



