Updated By: Priyalachhi
ಪಾಟ್ನಾ (ಬಿಹಾರ): ದುಲಾರ್ ಚಂದ್ ಯಾದವ್ ಹತ್ಯೆಗೆ ಸಂಬಂಧಿಸಿದಂತೆ, ಬಿಹಾರ ಪೊಲೀಸರು ಶನಿವಾರ ತಡರಾತ್ರಿ ಮೋಕಾಮಾದ ರಾಜಕಾರಣಿ ಹಾಗೂ ಜನತಾ ದಳ ಯುನೈಟೆಡ್ (ಜೆಡಿಯು) ಅಭ್ಯರ್ಥಿ ಹಾಗೂ ಮಾಜಿ ಶಾಸಕ ಅನಂತ್ ಸಿಂಗ್ ಮತ್ತು ಅವರ ಇಬ್ಬರು ಸಹಚರರನ್ನು ಬಂಧಿಸಿದ್ದಾರೆ.
ಅವರು ಬೆಡ್ನಾ ಗ್ರಾಮದಲ್ಲಿರುವುದನ್ನು ಪತ್ತೆ ಹಚ್ಚಿದ ಪೊಲೀಸರ ತಂಡ, ಗ್ರಾಮವನ್ನು ಸುತ್ತುವರಿದು, ಶನಿವಾರ ತಡರಾತ್ರಿ ಸುಮಾರು 1 ಗಂಟೆ ರಾತ್ರಿಗೆ ಅನಂತ್ ಸಿಂಗ್ ಹಾಗೂ ಇಬ್ಬರು ಸಹಚರರನ್ನು ಬಂಧಿಸಿದೆ. ಬಂಧನದ ಬಳಿಕ ಮೋಕಾಮದಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಡದಂತೆ ತಡೆಯಲು ಬಂಧಿಸಿದ ಕೂಡಲೇ ಅವರನ್ನು ಅಲ್ಲಿಂದ ಬೇರೆಡೆಗೆ ಕರೆದೊಯ್ಯಲಾಯಿತು. ಅನಂತ್ ಅವರ ಪತ್ನಿ ಮೋಕಾಮಾ ಶಾಸಕಿಯಾಗಿದ್ದಾರೆ. ಅನಂತ್ ಅವರ ಇಬ್ಬರು ಸೋದರಳಿಯಂದಿರು ಹಾಗೂ ಇಬ್ಬರು ಸಹಚರರು ಯಾದವ್ ಹತ್ಯೆಯಲ್ಲಿ ಆರೋಪಿಗಳಾಗಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಪಾಟ್ನಾದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ಕಾರ್ತಿಕೇಯ ಆರ್. ಶರ್ಮಾ, “ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಅನಂತ್ ಅವರನ್ನು ಬೆಡ್ನಾ ಗ್ರಾಮದಲ್ಲಿ ಬಂಧಿಸಲಾಗಿದೆ. ಯಾದವ್ ಹತ್ಯೆಯ ಸಮಯದಲ್ಲಿ ಅನಂತ್ ಅವರ ಇಬ್ಬರು ಸಹಚರರಾದ ನಡ್ಮಾ ಗ್ರಾಮದ ಮಣಿಕಾಂತ್ ಠಾಕೂರ್ ಮತ್ತು ಅನಂತ್ ಅವರ ಸ್ಥಳೀಯ ಗ್ರಾಮವಾದ ಲಡ್ಮಾದ ರಂಜಿತ್ ರಾಮ್ ಘಟನಾ ಸ್ಥಳದಲ್ಲಿದ್ದರು” ಎಂದು ತಿಳಿಸಿದರು.
75 ವರ್ಷದ ಯಾದವ್ ಟಾರ್ಟರ್ ಗ್ರಾಮದ ಬಳಿ ವಾಹನದೊಳಗೆ ಮೃತಪಟ್ಟ ರೀತಿಯಲ್ಲಿ ಪತ್ತೆಯಾಗಿದ್ದರು. ಯಾದವ್ ಅವರು ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್ ಪಾರ್ಟಿ (ಜೆಎಸ್ಪಿ) ಅಭ್ಯರ್ಥಿ ಪ್ರಿಯದರ್ಶಿ ಪಿಯೂಷ್ ಅವರನ್ನು ಬೆಂಬಲಿಸುತ್ತಿದ್ದರು. ಅ. 30 ರಂದು ಪಿಯೂಷ್ ಪರ ಪ್ರಚಾರ ನಡೆಸುತ್ತಿದ್ದ ವೇಳೆ, ಬೆಂಗಾವಲು ಪಡೆಯಲ್ಲಿ ಚಲಿಸುತ್ತಿದ್ದಾಗ, ಅನಂತ್ ಅವರ ಬೆಂಗಾವಲು ಪಡೆ ವಿರುದ್ಧ ದಿಕ್ಕಿನಿಂದ ಬಂದಿತ್ತು. ಈ ವೇಳೆ ಎರಡೂ ಕಡೆಯವರ ನಡುವೆ ಘರ್ಷಣೆ ಮತ್ತು ಕಲ್ಲು ತೂರಾಟ ನಡೆದು, ಕೆಲವರು ಗಾಯಗೊಂಡಿದ್ದರು. ನಂತರ ಸ್ಥಳೀಯ ಪೊಲೀಸರು ಸ್ಥಳಕ್ಕೆ ಬಂದಾಗ, ವಾಹನದ ಹಿಂದಿನ ಸೀಟಿನಲ್ಲಿ ಯಾದವ್ ಅವರ ಮೃತದೇಹ ಪತ್ತೆಯಾಗಿದೆ.
ಯಾದವ್ ಅವರ ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ, ಹೃದಯ ಮತ್ತು ಶ್ವಾಸಕೋಶಗಳಿಗೆ ಗಟ್ಟಿಯಾದ ಮತ್ತು ಮೊಂಡಾದ ವಸ್ತುವಿನಿಂದಾದ ಗಾಯದಿಂದಾಗಿ ಅವರು ಹೃದಯ ಮತ್ತು ಉಸಿರಾಟದ ವೈಫಲ್ಯದಿಂದ ಸಾವನ್ನಪ್ಪಿದ್ದಾರೆ. ಆದ್ದರಿಂದ, ಮರಣೋತ್ತರ ಪರೀಕ್ಷೆಯ ವರದಿ ಮತ್ತು ಪ್ರಾಥಮಿಕ ತನಿಖೆ ಆಧಾರದ ಮೇಲೆ ಕೊಲೆ ಪ್ರಕರಣ ದಾಖಲಾಗಿದೆ ಎಂದು ಎಸ್ಎಸ್ಪಿ ಮಾಹಿತಿ ನೀಡಿದರು.
ಎರಡೂ ಕಡೆಯವರು ಪರಸ್ಪರರ ವಿರುದ್ಧ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿವೆ. ಪೊಲೀಸರು ತನಿಖೆ ಆರಂಭಿಸಿದ್ದು, ಸಾಕ್ಷ್ಯಗಳನ್ನು ಸಂಗ್ರಹಿಸಿ, ಸ್ಥಳದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ವಿಶ್ಲೇಷಿಸಿದ್ದಾರೆ ಮತ್ತು ಸಾಕ್ಷಿಗಳಿಂದ ಹೇಳಿಕೆಗಳನ್ನು ಪಡೆದಿದ್ದಾರೆ.



