Updated By: Priyalachhi
ದೆಹಲಿ/ಬೆಂಗಳೂರು: ಎಲ್ಲದಕ್ಕೂ ಕಾಲವೇ ಉತ್ತರ ನೀಡುತ್ತದೆ. ಒಂದೇ ವಾಕ್ಯದಲ್ಲಿ ಹೇಳುವುದಾದರೆ ಸಮಯವೇ ಪ್ರತಿಯೊಂದಕ್ಕೂ ಉತ್ತರಿಸುತ್ತದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ದೆಹಲಿಯ ಕರ್ನಾಟಕ ಭವನದ ಬಳಿ ಮಾತನಾಡಿದ ಅವರು, ಹೈಕಮಾಂಡ್ ನಾಯಕರನ್ನು ಭೇಟಿ ಬಗ್ಗೆ ಪ್ರತಿಕ್ರಿಯಿಸುತ್ತಾ, ನಾನು ಅದನ್ನು ಏಕೆ ಬಹಿರಂಗಗೊಳಿಸಬೇಕು. ನಾವು ಇಲ್ಲಿಗೆ ಬರುವುದೇ ಸರ್ಕಾರದ ಕೆಲಸಕ್ಕೆ ಪಕ್ಷದ ಕೆಲಸಕ್ಕೆ, ನಮ್ಮ ರಾಜಕೀಯಕ್ಕೆ ಎಂದು ಪ್ರತಿಕ್ರಿಯಿಸಿದರು.
ನಾವು ರಾಜಕಾರಣಿಗಳು. ಏನು ರಾಜಕಾರಣ ಮಾಡಬೇಕೋ ಅದನ್ನು ಎಲ್ಲಾ ರಾಜಕಾರಣಿಗಳೂ ಮಾಡುತ್ತಾರೆ. ಇದರಲ್ಲಿ ಏನೂ ತಪ್ಪಿಲ್ಲ. ನಾವುಗಳು ನಮ್ಮ ಅನುಕೂಲಕ್ಕೆ ಯಾರನ್ನು ಭೇಟಿ ಮಾಡುಬೇಕೋ ಅವರನ್ನು ಕೇಳಿರುತ್ತೇವೆ, ಭೇಟಿ ಮಾಡುತ್ತೇವೆ. ನೀವು ಏಕೆ ಇದನ್ನು ದೊಡ್ಡದು ಮಾಡುತ್ತೀರಿ? ಎಂದು ಡಿಸಿಎಂ ಪ್ರಶ್ನಿಸಿದರು.
ನರೇಗಾ ವಿಚಾರವಾಗಿ ನಡೆದ ಸಭೆಯ ಬಗ್ಗೆ ಕೇಳಿದಾಗ, ಮನರೇಗಾ ಹೆಸರು ಬದಲಾವಣೆ ವಿರೋಧಿಸಿ ಪ್ರತಿ ಕ್ಷೇತ್ರದಲ್ಲಿಯೂ ಐದು ಕಿ.ಮೀ. ಪಾದಯಾತ್ರೆ ನಡೆಸಲಾಗುವುದು. ಪಂಚಾಯತ್ ಮಟ್ಟದಲ್ಲಿ ರೆಸಲ್ಯೂಷನ್ ಹೊರಡಿಸಲಾಗುವುದು. ಸಭೆ ನಡೆಸಲಾಗುವುದು ಎಂದು ತಿಳಿಸಿದರು.



