Updated By: Priyalachhi
ಮಂಡ್ಯ: ಮಂಡ್ಯದಲ್ಲಿ ಕೈಗಾರಿಕಾ ಸ್ಥಾಪನೆಗೆ ಜಾಗದ ವಿಚಾರದಲ್ಲಿ ಭಾರಿ ಚರ್ಚೆ ಹಿನ್ನೆಲೆಯಲ್ಲಿ ಜೆಡಿಎಸ್ ನಾಯಕರು ತುರ್ತು ಮಾಧ್ಯಮಗೋಷ್ಟಿ ನಡೆಸಿ ಸಚಿವ ಎನ್. ಚಲುವರಾಯಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
“ಕೈಗಾರಿಕೆ ಸ್ಥಾಪನೆ ಮಾಡುವ ಮನಸ್ಸು ಅಧಿಕಾರದಲ್ಲಿರುವವರಿಗೆ ಇಲ್ಲ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಇಚ್ಛಾಶಕ್ತಿ ಕೊರತೆ ಇದೆ” ಎಂದು ಮಾಜಿ ಸಚಿವ ಡಿಸಿ ತಮ್ಮಣ್ಣ ಕಿಡಿಕಾರಿದರು.
ಮುಂದುವರೆದ ಡಿಸಿ ತಮ್ಮಣ್ಣ, “ಕೈಗಾರಿಕೆಗಳ ಸ್ಥಾಪನೆಗೆ ಅದರದೇ ನಿಯಮ ಇದೆ. ರಾಜ್ಯ ಸರ್ಕಾರ ಮೂಲಭೂತ ಸೌಕರ್ಯಗಳನ್ನು ಒದಗಿಸಿದರೆ ಮಾತ್ರ ಕೈಗಾರಿಕೆ ಸ್ಥಾಪನೆ ಸಾಧ್ಯ. ಕಂಪನಿಯವರು ಬರಬೇಕಾದರೆ ಮೊದಲು ಸೌಲಭ್ಯ ಕೊಡಿ. ಕೈಗಾರಿಕಾ ಉದ್ಯಮಗಳಲ್ಲಿ ಪೈಪೋಟಿ ಇದೆ. ಕಂಪನಿ ಕರೆದುಕೊಂಡು ಬರುವ ಜವಾಬ್ದಾರಿ ರಾಜ್ಯ ಸರ್ಕಾರದು. ಕೈಗಾರಿಕೆ ಸ್ಥಾಪನೆ ವಿಚಾರದಲ್ಲಿ ರಾಜ್ಯ ಸರ್ಕಾರ ಎಡವಿದೆ. ಮಂಡ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಸೂಕ್ತವಾದ ಜಾಗ ಇದೆ. ಸೂಕ್ತ ಸ್ಥಳ ಗುರುತಿಸುವ ಜವಾಬ್ದಾರಿ ಶಾಸಕರ ಕರ್ತವ್ಯ. ರೆಡಿ ಇದ್ದರೆ ಉದ್ಯಮಿಗಳು ಬರ್ತಾರೆ. ಮದ್ದೂರಿನಲ್ಲಿ 110 ಎಕರೆ ಜಾಗ ಇದೆ. ಕೈಗಾರಿಕೆ ಸ್ಥಾಪನೆ ಮಾಡುವ ಮನಸ್ಸು ಅಧಿಕಾರದಲ್ಲಿರುವವರಿಗೆ ಇಲ್ಲ. ಶಾಸಕರು ಸಭೆ ಕರೆದು ಚರ್ಚಿಸಿ ಸುಮ್ಮನೆ ಏನೆನೋ ಮಾತನಾಡುವುದಲ್ಲ?. ಮಂಡ್ಯ ಜಿಲ್ಲೆಯ ಆಸ್ಪತ್ರೆ ಹೇಗಿದೆ? ಒಳ್ಳೆಯ ವಾತಾವರಣ ಇಲ್ಲ. ಅಧಿಕಾರದಲ್ಲಿರುವವರು ಸಭೆ ಕರೆದು ಚರ್ಚಿಸಿದರೆ ಸಲಹೆ ಕೊಡುತ್ತೇವೆ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಇಚ್ಛಾಶಕ್ತಿ ಕೊರತೆ ಇದೆ” ಎಂದರು.
ಬಳಿಕ ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಮಾತನಾಡಿ, “ಕುಮಾರಸ್ವಾಮಿ ಅವರನ್ನು ಮಾತನಾಡಿಸುವ ಸೌಜನ್ಯ ಉಸ್ತುವಾರಿ ಸಚಿವರಿಗಿಲ್ಲ. ಅಭಿವೃದ್ಧಿ ಹೇಗೆ ಸಾಧ್ಯ? ಒಬ್ಬ ಕೇಂದ್ರ ಸಚಿವರ ಭೇಟಿ ಮಾಡುವ ಸೌಜನ್ಯ ಇಲ್ಲ. ಅಧಿಕಾರ ಶಾಶ್ವತ ಅಲ್ಲ, ಎಚ್ಚರಿಕೆ ಇರಲಿ. ಒಬ್ಬ ಉಸ್ತುವಾರಿ ಸಚಿವರು ಕೇಂದ್ರ ಸಚಿವರ ಬಳಿ ಹೊಗುತ್ತಿಲ್ಲ. ಪ್ರೋಟೋಕಾಲ್ ಪ್ರಕಾರ ಯಾರ ಬಳಿ ಯಾರು ಹೋಗಬೇಕು? ಹೇಳಿ. ಕೈಯಲ್ಲಿ ಆಗದವರು ಮೈಯೆಲ್ಲಾ ಪರಚಿಕೊಂಡರಂತೆ. ಜಿಲ್ಲೆಗೆ ಅವಕಾಶ ಸಿಕ್ಕಿದೆ ಉಪಯೋಗಿಸಿಕೊಳ್ಳಿ. ಕೇಂದ್ರ ಸಚಿವರನ್ನು ಜನರು ನಮಗೆ ಕೊಟ್ಟಿದ್ದಾರೆ ಕೆಲಸ ಮಾಡಿಸಿಕೊಳ್ಳಿ. ಮಾಧ್ಯಮದವರನ್ನು ದನಗಳ ರೀತಿ ಗದರಿಸುತ್ತೀರಿ, ಇದನ್ನು ನಾನು ಖಂಡಿಸುತ್ತೇನೆ. ನಿಮ್ಮ ನಡವಳಿಕೆ ಸರಿ ಮಾಡಿಕೊಳ್ಳಿ. ರಾಜ್ಯದ ಸಿಎಂ, ಡಿಸಿಎಂ ಯಾರಾದ್ರು ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದಿರಾ?. ನಾವು ಸಚಿವ ಎಂಬಿ ಪಾಟೀಲ್ಗೆ ಪತ್ರ ಬರೆದಿದ್ದೇವೆ. ಅವಕಾಶ ಸಿಕ್ಕಾಗ ಕಂಪನಿಯವರನ್ನು ರಿಕ್ವೆಸ್ಟ್ ಮಾಡಿ ಕರೆದುಕೊಳ್ಳಬೇಕು. ಕುಮಾರಸ್ವಾಮಿ ಅವರು ನೂರು ಬಾರಿ ಜಾಗ ಗುರ್ತಿಸಿ ಅಂತ ಹೇಳಿದ್ದಾರೆ” ಎಂದರು.



