Updated By: Priyalachhi
ಮಂಡ್ಯ: “ವೀರಶೈವ ಲಿಂಗಾಯತ ಸಮಾಜವನ್ನು ಒಡೆಯುವ ರಾಜಕೀಯ ಷಡ್ಯಂತ್ರ ನಡೆಯುತ್ತಿದೆ. ಆದರೆ ಯಾವ ಶಕ್ತಿಯಿಂದಲೂ ಈ ಸಮಾಜವನ್ನು ಒಡೆಯಲು ಸಾಧ್ಯವಿಲ್ಲ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಮಂಡ್ಯದ ಮಳವಳ್ಳಿಯಲ್ಲಿ ಶಿವರಾತ್ರೀಶ್ವರ ಶಿವಯೋಗಿಗಳ 1066ನೇ ಜಯಂತಿ ಮಹೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯುತ್ತಿದ್ದು, ನಿನ್ನೆ(ಶನಿವಾರ) 5ನೇ ದಿನದ ಮಹೋತ್ಸವಕ್ಕೆ ಚಾಲನೆ ಸಿಕ್ಕಿತು. ಜ್ಯೋತಿ ಬೆಳಗುವ ಮೂಲಕ ಮಹೋತ್ಸವವನ್ನು ಶ್ರೀಗಳು ಉದ್ಘಾಟಿಸಿದರು.
ಬಳಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ವಿಜಯೇಂದ್ರ, “ರಾತ್ರಿಯಾದರೂ ಭಕ್ತರು ಇಷ್ಟೊಂದು ಸಂಖ್ಯೆಯಲ್ಲಿ ಕುಳಿತಿರುವುದು ಸಂತಸ ಮೂಡಿಸಿದೆ. ರಾಜ್ಯದಲ್ಲಿ ಕುರ್ಚಿ ಕಾಳಗ ನಡೆಯುತ್ತಿದೆ. ಆದರೆ ಈ ಕಾರ್ಯಕ್ರಮದಲ್ಲಿ ಒಂದು ಕುರ್ಚಿ ಕೂಡ ಖಾಲಿ ಇಲ್ಲ. ಜಗದ್ಗುರುಗಳು ಅನ್ನದಾಸೋಹ, ಅಕ್ಷರದಾಸೋಹ ಮೂಲಕ ಸಮಾಜ ಕಟ್ಟಿದರು. ಆದಿಗುರುಗಳ ಪರಂಪರೆಯನ್ನು ಸುತ್ತೂರು ಶ್ರೀಗಳು ಮುಂದುವರೆಸುತ್ತಿದ್ದಾರೆ. ಜನಸಾಮಾನ್ಯರ ಹೃದಯದಲ್ಲಿ ಸುತ್ತೂರು ಮಠ ಆಧ್ಯಾತ್ಮದ ದೀಪ ಹಚ್ಚಿದೆ. ನೊಂದವರ ಪಾಲಿಗೆ ಅನ್ನ, ಅಕ್ಷರ ನೀಡುತ್ತಿದೆ. ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಎಲ್ಲ ಮಠಗಳಿಗೆ ಅನುದಾನ ನೀಡಿದರು. ಅನುಭವ ಮಂಟಪ ನಿರ್ಮಾಣಕ್ಕೆ ಯಡಿಯೂರಪ್ಪನವರು ಅನುದಾನ ನೀಡಿದ್ದಾರೆ. ಬಸವಣ್ಣನವರ ಸಮ ಸಮಾಜದ ಕನಸು ನನಸಾಗಬೇಕು” ಎಂದರು.



