ವೇತನ ಸಹಿತ ಮುಟ್ಟಿನ ರಜೆ ಜಾರಿಗೆ ತರಲು ಸರ್ಕಾರ ಬದ್ಧ; ಸಂತೋಷ್ ಲಾಡ್

0
22

ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ

ಬೆಂಗಳೂರು: ಹೈಕೋರ್ಟ್ ನಿರ್ದೇಶನದ ನಂತರ, ಎಲ್ಲಾ ವಲಯಗಳಲ್ಲಿ ವೇತನ ಸಹಿತ ಮುಟ್ಟಿನ ರಜೆ ನೀತಿಯನ್ನು ಸಾಧ್ಯವಾದಷ್ಟು ಬೇಗ ಕಟ್ಟುನಿಟ್ಟಾಗಿ ಜಾರಿಗೆ ತರುವುದಾಗಿ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.

ಔಪಚಾರಿಕವಾಗಿ ನಿಯಮ ಜಾರಿಗೆ ಬರುವವರೆಗೆ, ಮುಟ್ಟಿನ ರಜೆ ನೀತಿಯನ್ನು “ಕಟ್ಟುನಿಟ್ಟಾಗಿ ಮತ್ತು ನಿಷ್ಠೆಯಿಂದ” ಜಾರಿಗೆ ತರುವಂತೆ ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

ನಮ್ಮ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ನೀತಿಯಾದ ‘ಋತುಚಕ್ರ ರಜೆ ನೀತಿ’ಗೆ ಪೂರಕವಾಗಿ ಕರ್ನಾಟಕ ಉಚ್ಛ ನ್ಯಾಯಾಲಯ ನೀಡಿರುವ ನಿರ್ದೇಶನವನ್ನು ಸ್ವಾಗತಿಸುತ್ತೇನೆ. ಋತುಚಕ್ರ ರಜೆ‌ನೀತಿಯನ್ನು ಇಡೀ ದೇಶದಲ್ಲೇ ಸಮರ್ಪಕವಾಗಿ ಹಾಗೂ ಮಾದರಿಯಾಗಿ ಜಾರಿಗೆ ತರುವ ನಿಟ್ಟಿನಲ್ಲಿ ನಮ್ಮ ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ ಇರಿಸಿದೆ.

ಘನ ನ್ಯಾಯಾಲಯದ ಅಭಿಪ್ರಾಯದಂತೆ “ಮುಟ್ಟಿನ ರಜೆಯು ಮಹಿಳೆಯರ ಘನತೆ, ನ್ಯಾಯಯುತ ಮತ್ತು ಅವರ ವಾಸ್ತವಿಕ ಬದುಕಿನ ಮಾನವೀಯ ಅರಿವು” ಎಂಬುದನ್ನು ಮೂಲ ಆಶಯವಾಗಿಟ್ಟುಕೊಂಡು ಅತಿ ಶೀಘ್ರದಲ್ಲಿ ಎಲ್ಲ ವಲಯಗಳಲ್ಲೂ ಸಹ ತಿಂಗಳಿಗೆ ಒಂದರಂತೆ ಒಟ್ಟು ವರ್ಷಕ್ಕೆ 12 ವೇತನ ಸಹಿತ ಋತುಚಕ್ರ ರಜೆ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಸಂತೋಷ್ ಲಾಡ್ ಬರೆದುಕೊಂಡಿದ್ದಾರೆ.

sambrama prabha editor suresh kt

LEAVE A REPLY

Please enter your comment!
Please enter your name here