ಹಳೆಯ ಸಮೀಕ್ಷೆ ಬಳಸಿಕೊಂಡು ಜನರ ದಾರಿತಪ್ಪಿಸುವ ವ್ಯರ್ಥ ಪ್ರಯತ್ನ: ಸಿಎಂ

0
53

Updated By: Priyalachhi 

ಬೆಂಗಳೂರು: ಚುನಾವಣಾ ಆಯೋಗದ ಹಳೆಯ ಸಮೀಕ್ಷೆಯೊಂದನ್ನು ಬಳಸಿಕೊಂಡು ಜನರ ದಾರಿತಪ್ಪಿಸುವ ವ್ಯರ್ಥ ಪ್ರಯತ್ನ ರಾಜ್ಯದಲ್ಲಿ ವಿರೋಧ ಪಕ್ಷಗಳಿಂದ ನಡೆಯುತ್ತಿರುವುದು ವಿಷಾದನೀಯ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಈ ಸಂಬಂಧ ಎಕ್ಸ್ ಪೋಸ್ಟ್ ಮಾಡಿರುವ ಅವರು, ಚುನಾವಣಾ ಅಕ್ರಮಗಳ ಬಗ್ಗೆ ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರು ಎತ್ತಿರುವ ಗಂಭೀರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಅದನ್ನು ‘ತಪ್ಪು’ ಎಂದು ಬಿಂಬಿಸುವ ಕುತಂತ್ರ ನಡೆಯುತ್ತಿದೆ. ಮಾಧ್ಯಮಗಳಲ್ಲಿ ವರದಿಯಾಗಿರುವ ಈ ಸುಳ್ಳು ಕಥನದ ವಿಶ್ವಾಸಾರ್ಹತೆಯನ್ನು ತುಸು ಆಳಕ್ಕೆ ಇಳಿದು ಪರಿಶೀಲಿಸಿದರೆ ಇದರ ಹಿಂದಿನ ದುರುದ್ದೇಶ ಸ್ಪಷ್ಟವಾಗುತ್ತದೆ ಎಂದು ತಿಳಿಸಿದರು.

ಮೊದಲನೆಯದಾಗಿ, ಈ ತಥಾಕಥಿತ ಸಮೀಕ್ಷೆ ರಾಜ್ಯ ಚುನಾವಣಾ ಆಯೋಗವು ಮೇ 2025ರಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ನಡೆಸಿದ ಸಿಸ್ಟಮ್ಯಾಟಿಕ್ ವೋಟರ್ಸ್‌ ಎಜುಕೇಷನ್ ಆ್ಯಂಡ್ ಎಲೆಕ್ಟೋರಲ್‌ ಪಾರ್ಟಿಸಿಪೇಷನ್‌ (ಸ್ವೀಪ್‌) ಕಾರ್ಯಕ್ರಮದ ಒಂದು ಭಾಗವಾಗಿದೆ. ಜನರಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸುವುದು ಇದರ ಉದ್ದೇಶವಾಗಿತ್ತೇ ಹೊರತು ಇದು ರಾಹುಲ್ ಗಾಂಧಿ ಅವರು ಆರೋಪಿಸಿರುವ ಮತಗಳ್ಳತನದ ಜನಾಭಿಪ್ರಾಯ ಸಂಗ್ರಹ ಅಲ್ಲ. ಮತದಾರರ ಜಾಗೃತಿಯ ಉದ್ದೇಶವನ್ನು ಚುನಾವಣಾ ಅಕ್ರಮದ ಕುರಿತಾದ ಜನಾಭಿಪ್ರಾಯವೆಂದು ಬಿಂಬಿಸುವುದು ಸರಿಯಲ್ಲ. ಇದು ಜನರ ದಾರಿ ತಪ್ಪಿಸುವ ದುರುದ್ದೇಶದ ರಾಜಕೀಯ ಹುನ್ನಾರವಾಗಿದೆ ಎಂದು ಆರೋಪಿಸಿದ್ದಾರೆ.

ಎರಡನೆಯದಾಗಿ, ಸಮೀಕ್ಷೆ ನಡೆಸಲಾದ ಸಮಯವೇ ಸತ್ಯಕ್ಕೆ ಹಿಡಿದ ಕೈಗನ್ನಡಿಯಂತಿದೆ. ಸಮೀಕ್ಷೆಯನ್ನು ಮೇ 2025ರಲ್ಲಿ ನಡೆಸಲಾಗಿದೆ. ರಾಹುಲ್ ಗಾಂಧಿ ಅವರು ಚುನಾವಣಾ ಅಕ್ರಮಗಳ ಕುರಿತು ಪುರಾವೆ ಸಹಿತ ಸುದ್ದಿಗೋಷ್ಠಿ ನಡೆಸಿದ್ದು ಆಗಸ್ಟ್‌ 2025ರಲ್ಲಿ, ಅಂದರೆ ಸಮೀಕ್ಷೆಯಾದ 3 ತಿಂಗಳ ಬಳಿಕ ರಾಹುಲ್‌ ಗಾಂಧಿ ಅವರು ಮತಗಳ್ಳತನದ ವಿರುದ್ಧ ಧ್ವನಿಯೆತ್ತಿದ್ದಾರೆ. ಹಿಂದಿನ ಜನಾಭಿಪ್ರಾಯದ ಡಾಟಾವನ್ನು ಬಳಸಿಕೊಂಡು ನಂತರದ ಮತಗಳ್ಳತನದ ಆರೋಪಕ್ಕೆ ಜನಮನ್ನಣೆ ನೀಡಿಲ್ಲ ಎನ್ನುವುದು ಹಾಸ್ಯಾಸ್ಪದ. ಸತ್ಯಾಂಶವನ್ನು ಪರಿಶೀಲಿಸದೆ ಮಾಡಿರುವ ಈ ವರದಿಗೆ ಸತ್ಯಾಂಶವನ್ನು ಮರೆಮಾಚುವ ಉದ್ದೇಶವಿದ್ದಂತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಮೂರನೆಯದಾಗಿ, ಸಮೀಕ್ಷೆಯಲ್ಲಿ ಬಳಸಲಾದ ಮಾದರಿ ಪ್ರಮಾಣವು ರಾಜ್ಯದ ಜನಾಭಿಪ್ರಾಯವೆಂದು ಪರಿಗಣಿಸುವಷ್ಟು ಸಮರ್ಥನೀಯವಾಗಿಲ್ಲ. ಸುಮಾರು 5.3 ಕೋಟಿಗೂ ಹೆಚ್ಚು ವಯಸ್ಕ ಮತದಾರರನ್ನು ಹೊಂದಿರುವ ರಾಜ್ಯದಲ್ಲಿ ಕೇವಲ 5,100 ಜನರನ್ನಷ್ಟೇ ಸಮೀಕ್ಷೆಗೆ ಒಳಪಡಿಸಲಾಗಿದೆ. ಇದು ಮತದಾರರನ್ನು 0.01% ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಪ್ರತಿನಿಧಿಸುತ್ತದೆ. ಗಂಭೀರವಾದ ವಿಷಯಕ್ಕೆ ಸಂಬಂಧಿಸಿದಂತೆ ಅಂಕಿಅಂಶಗಳನ್ನು ಸಂಗ್ರಹಿಸುವಾಗ ಇಷ್ಟು ಸಣ್ಣ ಪ್ರಮಾಣದ ಮಾದರಿಯು ಸಮೀಕ್ಷೆಯ ದೊಡ್ಡ ಲೋಪವಾಗಿದೆ. ಬೆಂಗಳೂರು ಸೆಂಟ್ರಲ್‌ ನಂತಹ ಕ್ಷೇತ್ರದಲ್ಲಿ ಮತದಾರರ ಪಟ್ಟಿಯನ್ನು ತಿರುಚಿರುವುದು ಸತ್ಯಾಂಶವಿರುವ ಆರೋಪವಾಗಿದೆ. ಅಂತಹ ಕ್ಷೇತ್ರದಲ್ಲಿ ಸಮೀಕ್ಷೆಗೆ ಒಳಪಟ್ಟಿರುವವರ ಸಂಖ್ಯೆ ಎರಡಂಕಿಯನ್ನು ದಾಟಿಲ್ಲ. ಇದನ್ನೇ ಜನರ ತೀರ್ಮಾನ ಎಂದು ಬಿಂಬಿಸುವುದು ಸಮಂಜಸವೆನಿಸುವುದಿಲ್ಲ ಎಂದಿದ್ದಾರೆ.

ನಾಲ್ಕನೆಯದಾಗಿ, ಸಮೀಕ್ಷೆ ನಡೆಸಿದವರ ಹಿನ್ನೆಲೆಯನ್ನು ಮಾಧ್ಯಮಗಳು ಕೂಡಾ ಪರಿಶೀಲಿಸಿದಂತಿಲ್ಲ. ಈ ಸಮೀಕ್ಷೆಯನ್ನು ಡಾ. ಆರ್. ಬಾಲಸುಬ್ರಮಣ್ಯಂ ಸ್ಥಾಪಿಸಿದ GRAAM ಎಂಬ NGO ನಡೆಸಿದೆ. ಬಾಲಸುಬ್ರಮಣ್ಯಂ ಅವರು ಪ್ರಸ್ತುತ ಕೇಂದ್ರ ಸರ್ಕಾರ ನೇಮಿಸಿರುವ ಒಂದು ಹುದ್ದೆಯಲ್ಲಿದ್ದಾರೆ. ಇವರು 2024ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಬರೆದಿರುವ ಪುಸ್ತಕವನ್ನು ನೋಡಿದರೆ ಈ ಮಹಾಶಯರು ಮೋದಿಯವರ ಅಂಧ ಅಭಿಮಾನಿಯಂತೆ ಕಾಣುತ್ತಾರೆ. ಇಂತಹ ಹೊಗಳುಭಟರು ನಡೆಸಿರುವ ಸಮೀಕ್ಷೆಯನ್ನು ಆಧರಿಸಿ ವರದಿಯನ್ನು ಸಿದ್ಧಪಡಿಸಿರುವುದಕ್ಕೆ ಯಾವ ವಿಶ್ವಾಸಾರ್ಹತೆ ಇರಲು ಸಾಧ್ಯ ಎಂದು ಪ್ರಶ್ನಿಸಿದರು.

sambrama prabha editor suresh kt

LEAVE A REPLY

Please enter your comment!
Please enter your name here