Updated By: Priyalachhi
ಕೋಲ್ಕತ್ತಾ(ಪಶ್ಚಿಮ ಬಂಗಾಳ): ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಭರ್ಜರಿ ಗೆಲುವು ಸಾಧಿಸಿದಂತೆ, 2026ರಲ್ಲಿ ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವಿನ ಬಾಗಿಲು ತೆರೆದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
ವರ್ಚುಯಲ್ ಮೋಡ್ನಲ್ಲಿ ತಾಹೆರ್ಪುರ್ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಪ್ರತಿಕೂಲ ಹವಾಮಾನದಿಂದಾಗಿ ಕಾರ್ಯಕ್ರಮ ನಡೆಯುತ್ತಿರುವ ಸ್ಥಳಕ್ಕೆ ತಲುಪಲು ಸಾಧ್ಯವಾಗದಿದ್ದಕ್ಕೆ ನಾನು ಕ್ಷಮೆಯಾಚಿಸುತ್ತೇನೆ. ಗೋಚರತೆ ಕಡಿಮೆ ಇದ್ದ ಕಾರಣ, ಹೆಲಿಕಾಪ್ಟರ್ ತಾಹೆರ್ಪುರದ ತಾತ್ಕಾಲಿಕ ಹೆಲಿಪ್ಯಾಡ್ ಮೈದಾನದ ಮೇಲೆ ಸ್ವಲ್ಪ ಹೊತ್ತು ಹಾರಾಟ ಮಾಡಿ ನಂತರ ಯು – ಟರ್ನ್ ತೆಗೆದುಕೊಂಡು ಕೋಲ್ಕತ್ತಾ ವಿಮಾನ ನಿಲ್ದಾಣಕ್ಕೆ ಮರಳಿತು ಎಂದು ಹೇಳಿದರು.
ಬಂಗಾಳದ ಹಿಂದುಳಿದ ಪ್ರದೇಶಗಳಿಗೆ ಆಧುನಿಕ ಸಂಪರ್ಕವನ್ನು ಖಚಿತಪಡಿಸುವುದು ನಮ್ಮ ಪ್ರಯತ್ನಗಳ ಗುರಿಯಾಗಿದೆ. ಟಿಎಂಸಿ ನನ್ನನ್ನು ಮತ್ತು ಬಿಜೆಪಿಯನ್ನು ಎಷ್ಟು ಬೇಕಾದರೂ ವಿರೋಧಿಸಬಹುದು, ಆದರೆ ಬಂಗಾಳದ ಪ್ರಗತಿಯನ್ನು ನಿಲ್ಲಿಸಬಾರದು ಎಂದ ಪ್ರಧಾನಿ, ಬಂಗಾಳದಲ್ಲಿ ನುಸುಳುಕೋರರು ಟಿಎಂಸಿಯ ಆಶ್ರಯವನ್ನು ಆನಂದಿಸುತ್ತಿದ್ದಾರೆ. ಒಳನುಸುಳುಕೋರರನ್ನು ಗುರುತಿಸದಂತೆ ರಕ್ಷಿಸಲು ಟಿಎಂಸಿ ಬಂಗಾಳದಲ್ಲಿ ಎಸ್ಐಆರ್ ವಿರೋಧಿಸುತ್ತಿದೆ ಎಂದು ಆರೋಪಿಸಿದರು.
ಬಂಗಾಳವನ್ನು ಅಭಿವೃದ್ಧಿ ಮಾಡಲು ನಾವು ಎಲ್ಲ ಪ್ರಯತ್ನಗಳನ್ನು ಮಾಡುತ್ತೇವೆ. ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರ ರಚಿಸಲು ಬಿಜೆಪಿಗೆ ಅವಕಾಶ ನೀಡಿ. ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ತುಷ್ಟೀಕರಣ ರಾಜಕೀಯವು ರಾಜ್ಯದಲ್ಲಿ ಆಡಳಿತ ನಡೆಸುತ್ತಿದೆ ಮತ್ತು ಬಂಗಾಳದಲ್ಲಿ ಟಿಎಂಸಿಯ ಮಹಾ ಜಂಗಲ್ ರಾಜ್ ಅನ್ನು ಬಿಜೆಪಿ ಕೊನೆಗೊಳಿಸುತ್ತದೆ ಎಂದು ಹೇಳಿದರು.
ಎಡ ಪಕ್ಷದ ಆಡಳಿತವು ತನ್ನ ಮೂರು ದಶಕಗಳ ಆಳ್ವಿಕೆಯಲ್ಲಿ ತ್ರಿಪುರವನ್ನು ನಾಶಮಾಡಿತ್ತು. ಬಿಜೆಪಿಯನ್ನು ಅಧಿಕಾರಕ್ಕೆ ತಂದ ನಂತರ ರಾಜ್ಯವು ಈಗ ವೇಗವಾಗಿ ಅಭಿವೃದ್ಧಿಯಾಗುತ್ತಿದೆ. ಬಿಜೆಪಿ ಆಡಳಿತದ ತ್ರಿಪುರಕ್ಕೆ ಹೋಲಿಸಿದರೆ ಬಂಗಾಳವು ಅಭಿವೃದ್ಧಿ ಗ್ರಾಫ್ನಲ್ಲಿ ಹಿಂದುಳಿದಿದೆ, ಅದು ಹೀಗೆ ಮಂದುವರಿಯುತ್ತದೆ ಎಂದರು.



