ಹಾಲಿ ಶಿಕ್ಷಕರೂ TET ಬರೆಯಬೇಕೆಂಬ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ: ಮಧು ಬಂಗಾರಪ್ಪ

0
27

Updated By: Priyalachhi

ಶಿವಮೊಗ್ಗ: “ಶಿಕ್ಷಣದಲ್ಲಿ ಗುಣಾತ್ಮಕ ಬದಲಾವಣೆ ತರಲು ನಿವೃತ್ತಿ ಅಂಚಿನಲ್ಲಿರುವವರನ್ನು ಹೊರತುಪಡಿಸಿ, ಉಳಿದೆಲ್ಲ ಶಿಕ್ಷಕರು ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಬರೆಯಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಈ ಸಂಬಂಧ ನಮ್ಮ ಸರ್ಕಾರದಿಂದ ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲಾಗಿದೆ” ಎಂದು ಶಿಕ್ಷಣ ಸಚಿವ ಎಸ್​.ಮಧು ಬಂಗಾರಪ್ಪ ತಿಳಿಸಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಕೋರ್ಟ್ ಆದೇಶ ಮಾಡಿರುವುದು ಸರಿ ಇದೆ. ಈಗ ಇರುವ ಶಿಕ್ಷಕರು 20ರಿಂದ 30 ವರ್ಷಗಳ ಹಿಂದೆ ನೇಮಕಗೊಂಡವರು. ಅವರು ಇಂದಿನ ಕಾಲಕ್ಕೆ ತಕ್ಕಂತೆ ಬದಲಾವಣೆ ಆಗಬೇಕು. ಈಗ ರಾಜ್ಯ ಸರ್ಕಾರ ಮುಂದಿನ 25 ವರ್ಷವನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಕರನ್ನು ನೇಮಿಸಿಕೊಳ್ಳುತ್ತದೆ. ಸುಪ್ರೀಂ ಕೋರ್ಟ್ ಮಕ್ಕಳು ದಡ್ಡರಾಗುತ್ತಿದ್ದಾರೆಂದು ಎಂದು ತಿಳಿದು ಟಿಇಟಿ ಬರೆಯಲು ಹೇಳಿರಬೇಕು” ಎಂದರು.

ಶೇ.100ರಷ್ಟು ಫಲಿತಾಂಶ ತರುವ ಶಾಲೆಗೆ ಪ್ರಶಸ್ತಿ: “ನಾವು ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ಜನ ಸೇವೆಯಲ್ಲಿ ಇರುತ್ತೇವೆ. ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಯಲ್ಲಿ ಶೇ.100ರಷ್ಟು ಫಲಿತಾಂಶ ಬಂದ ಶಾಲೆಗಳಿಗೆ ಪ್ರಶಸ್ತಿ ನೀಡಲಾಗುತ್ತದೆ. ಉತ್ತಮ ಫಲಿತಾಂಶ ಬಂದ ಶಾಲೆಗಳಿಗೆ 25 ಸಾವಿರ ರೂಪಾಯಿ ನೀಡಲಾಗುತ್ತಿದೆ” ಎಂದು ತಿಳಿಸಿದರು.

“ನಮ್ಮ ಇಲಾಖೆಯಲ್ಲಿ ಅನುದಾನಕ್ಕೆ ಕೊರತೆ ಇಲ್ಲ. ಫಲಿತಾಂಶವೂ ಉತ್ತಮವಾಗಿ ಬಂದಿದೆ. ಇದಕ್ಕೆ ವಿರೋಧ ಪಕ್ಷದವರೂ ಸಹ ಭೇಷ್ ಎಂದಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಮಾನವೀಯ ಗುಣಗಳ ಬಗ್ಗೆ ತಿಳಿಸಿಕೊಡಲಾಗುತ್ತದೆ. ನಾನೂ ಸಹ ಫೇಲ್ ಆದವನೇ. ಆದರೆ ನನ್ನಲ್ಲಿ ಉತ್ತಮ ಗುಣಗಳನ್ನು ಪೋಷಕರು ಕಲಿಸಿದ್ದಾರೆ. ಅನುದಾನಿತ ಶಾಲೆಗಳಿಗೆ ಆರು ಸಾವಿರ ಶಿಕ್ಷಕರ ನೇಮಕಕ್ಕೆ ಸಿಎಂ ಸೂಚನೆ ನೀಡಿದ್ದಾರೆ. ಕನ್ನಡ ಶಾಲೆಗಳಿಗೆ ಅನುದಾನ ನೀಡಬೇಕೆಂಬ ಬೇಡಿಕೆ ಇದೆ. ಇದರ ಕುರಿತೂ ಸಹ ಸೂಕ್ತ ತೀರ್ಮಾನ ಮಾಡಲಾಗುತ್ತಿದೆ” ಎಂದು ಹೇಳಿದರು.

sambrama prabha editor suresh kt

LEAVE A REPLY

Please enter your comment!
Please enter your name here