ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ
ಬೆಳಗಾವಿ: ಜನರ ಸಮಸ್ಯೆಗಳಿದ್ದಲ್ಲಿ ಆ ಬಗ್ಗೆ ಸಂಸತ್ನಲ್ಲಿ ಕೇಂದ್ರ ಸರ್ಕಾರದ ಗಮನ ಸೆಳೆಯಲು ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ಹಾಕಲು ದೆಹಲಿಗೆ ಹೋಗುವುದು ಜನಪ್ರತಿನಿಧಿಗಳ ಕೆಲಸ. ಅದು ಬಿಟ್ಟು ಕಾಂಗ್ರೆಸ್ ಶಾಸಕರು ಸಚಿವ ಸ್ಥಾನಕ್ಕಾಗಿ ದೆಹಲಿ ಚಲೋ ಮಾಡುತ್ತಿರುವುದು ನಾಚಿಕೇಗೇಡಿನ ಸಂಗತಿ ಎಂದು ಸಂಸದ ಜಗದೀಶ ಶೆಟ್ಟರ್ ಲೇವಡಿ ಮಾಡಿದ್ದಾರೆ.
ನಿನ್ನೆ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರ ಹಂಚಿಕೆಯದ್ದೇ ಚರ್ಚೆಯಾಗ್ತಿದೆ. ಇದಕ್ಕೊಂದು ತಾರ್ಕಿಕ ಅಂತ್ಯ ಕಾಣಿಸುತ್ತಿಲ್ಲ. ಅಧಿಕಾರ ಹಂಚಿಕೆ ಬಗ್ಗೆ ಏನು ಒಪ್ಪಂದವಾಗಿದೆ ಎನ್ನುವುದು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರಗೆ ಬಿಟ್ಟರೇ ಬೇರೆ ಯಾರಿಗೂ ಗೊತ್ತಿಲ್ಲ. ಅದು ಏನಿದೆ ಎನ್ನುವುದನ್ನು ಇಬ್ಬರು ಒಮ್ಮೆ ಹೇಳಿ ಬಿಡಬೇಕಿದೆ. ಇತ್ತ ರಾಜ್ಯದ ಜನತೆಯ ಸಮಸ್ಯೆ ಕೇಳುವವರೇ ಇಲ್ಲವಾಗಿದೆ ಎಂದರು.
ಯುದ್ಧದ ಪರಿಸ್ಥಿತಿಯಿಂದ ನಮ್ಮ ದೇಶಕ್ಕೆ ಅಂತಹ ದೊಡ್ಡ ಸಮಸ್ಯೆಯಾಗಿಲ್ಲ. ರಾಹುಲ್ ಗಾಂಧಿಯವರ ಸರ್ಕಾರ ಇದ್ದಿದ್ದರೆ ಸದ್ಯದ ಪರಿಸ್ಥಿತಿ ನಿಯಂತ್ರಿಸಲು ಆಗುತ್ತಿರಲಿಲ್ಲ. ನಮ್ಮಲ್ಲಿ ಪೆಟ್ರೊಲ್, ಡಿಸೇಲ್ ಬೆಲೆ ಏರಿಕೆಯೂ ಆಗಲಿಲ್ಲ. ಕೊರತೆಯೂ ಆಗಿಲ್ಲ. ದರ ನಿಯಂತ್ರಣದ ಜತೆಗೆ ಯಾವುದೇ ತೊಂದರೆಯಾಗದಂತೆ ಕೇಂದ್ರ ಸರ್ಕಾರ ನಿರ್ವಹಣೆ ಮಾಡಿದೆ. ಮುಖ್ಯವಾಗಿ ನಮ್ಮ ದೇಶದ ಜನ ಸುರಕ್ಷಿತವಾಗಿದ್ದಾರೆ. ಇದಕ್ಕೆ ಮೋದಿ ಆಡಳಿತ ಕಾರಣ, ಅಲ್ಪಸ್ವಲ್ಪ ಕೊರತೆಗಳಾಗಿದ್ದರೂ ಅದನ್ನು ಸರಿಮಾಡುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ ಎಂದರು.



